ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ; 16 ಮಂದಿ ಸಾವು, 22 ಜನರು ನಾಪತ್ತೆ
ಬಜಾಂಗ್ ಪ್ರದೇಶಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ವರದಿ ತಿಳಿಸಿದೆ.
Team Udayavani, Jun 19, 2021, 8:35 AM IST
ಕಾಠ್ಮಂಡು: ಕಳೆದ ಭಾನುವಾರದಿಂದ ಸತತವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ಪ್ರವಾಹ ಮತ್ತು ಭೂಕುಸಿತದಿಂದಾಗಿ 16 ಮಂದಿ ಸಾವನ್ನಪ್ಪಿದ್ದು, 22 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಲ್ಲಿ ಮೂವರು ವಿದೇಶಿಯರು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಮಾನ್ಸೂನ್ ಮಳೆಯಿಂದ ಐದಾರು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಶನಿವಾರ(ಜೂನ್ 19) ಮಾಹಿತಿ ನೀಡಿದೆ.
ಪ್ರವಾಹ ಮತ್ತು ಭೂಕುಸಿತದಿಂದ ಸಂಭವಿಸಿದ ಆಸ್ತಿ ಮತ್ತು ವಸ್ತುಗಳ ನಷ್ಟದ ಬಗ್ಗೆ ಇನ್ನಷ್ಟೇ ವರದಿ ಪಡೆಯಬೇಕಾಗಿದೆ. ಇದೀಗ ಸರ್ಕಾರ ಮುಖ್ಯವಾಗಿ ಶೋಧ, ರಕ್ಷಣೆ ಮತ್ತು ಮನೆ ಕಳೆದುಕೊಂಡವರಿಗೆ ರಕ್ಷಣೆ ಒದಗಿಸುವ ಬಗ್ಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದೆ.
ಸಚಿವಾಲಯದ ಮಾಹಿತಿ ಪ್ರಕಾರ, ಸಿಂಧು ಪಾಲ್ ಚೋಕ್ ಮತ್ತು ಮನಂಗ್ ಜಿಲ್ಲೆಗಳಲ್ಲಿ ಹೆಚ್ಚಿನ ಆಸ್ತಿ ಮತ್ತು ಜೀವಹಾನಿ ಸಂಭವಿಸಿದೆ. ಅಲ್ಲದೇ ಭಾರೀ ಮಳೆಯಿಂದಾಗಿ ಲಾಮ್ ಜುಂಗ್, ಮೈಗ್ಡಿ, ಮುಸ್ತಾಂಗ್, ಮನಂಗ್, ಪಾಲ್ಪಾ, ಕಾಳಿಕೋಟ್, ಜುಮ್ಲಾ, ಡೈಲೆಖ್, ಬಾಜುರಾ ಮತ್ತು ಬಜಾಂಗ್ ಪ್ರದೇಶಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ವರದಿ ತಿಳಿಸಿದೆ.