ವಾಹನ ಸವಾರರೇ ಎಚ್ಚರ : ಸುರಕ್ಷತೆ ಕ್ರಮಗಳಿಲ್ಲದ ಹೆದ್ದಾರಿ; ಅಪಘಾತಗಳಿಗೆ ರಹದಾರಿ
Team Udayavani, Mar 18, 2021, 5:00 AM IST
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನಗಳು ಸಂಚರಿಸಲು ದುಸ್ತರವಾದ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗೆ ಸ್ಥಳೀಯರೆಲ್ಲಾ ಆಗ್ರಹಿಸಿದ್ದರು. ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪತ್ರಿಕಾ ವರದಿ ಹಾಗೂ ಸ್ಥಳೀಯರ ಆಗ್ರಹವನ್ನು ಪುರಸ್ಕರಿಸಿ ಒಂದಿಷ್ಟು ತೇಪೆ ಹಾಕಿದರು. ಆದರೆ ಅದಾಗಿ ಆರೇಳು ತಿಂಗಳು ಕಳೆದರೂ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ. ಹಾಗಾಗಿ ರಸ್ತೆಯೀಗ ಅಪಘಾತಗಳಿಗೆ ಕಾರಣವಾಗತೊಡಗಿದೆ.
ಈಗಾಗಲೇ ಹಲವರು ಇಲ್ಲಿಯ ಅಪಘಾತಗಳಲ್ಲಿ ಮರಣವನ್ನು ಹೊಂದಿದ್ದಾರೆ. ಹೆದ್ದಾರಿಯಲ್ಲಿ ವಾಹನ ಗಳೂ ಅತೀ ವೇಗದಿಂದ ಸಂಚರಿಸುತ್ತಿರುತ್ತವೆ. ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದು. ಇಲ್ಲಿ ಸುರಕ್ಷತೆ ವ್ಯವಸ್ಥೆ ಇಲ್ಲದ ಕಾರಣ, ಚೂರು ಹೆಚ್ಚು ಕಡಿಮೆಯಾದರೂ ವಾಹನಗಳು ಗುಂಡಿಗೆ ಬೀಳಬೇಕು ಇಲ್ಲವೇ ಬೇರೆ ವಾಹನಗಳಿಗೆ ಢಿಕ್ಕಿಹೊಡೆಯಬೇಕಾದ ಸ್ಥಿತಿ ಇದೆ. ಇದರೊಂದಿಗೆ ಇಲ್ಲಿನ ಜಂಕ್ಷನ್ಗಳು, ವೃತ್ತ ಭಾಗದಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಅದಾವುದೂ ಆಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜತೆಗೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿದೆ.
ಹೆದ್ದಾರಿ ಕಾಮಗಾರಿಗೆ ಅಗೆದು ಹಾಕಿರುವ ಪರಿಣಾಮ ಹೆದ್ದಾರಿ ಬದಿಗಳಲ್ಲಿ ಎಲ್ಲೂ ಕೂಡ ತಡೆಗೋಡೆಯಾಗಲೀ ಮಾಹಿತಿ ಫಲಕಗಳಾಗಲೀ ಇಲ್ಲ. ಇದರಿಂದ ವಾಹನ ಚಾಲಕರು ನಿತ್ಯವೂ ಗೊಂದಲಕ್ಕೀಡಾಗುವಂತಿದೆ. ಹೆದ್ದಾರಿಯ ಬದಿ ಪಾದಚಾರಿಗಳಿಗೆ ನಡೆದಾಡುವ ಸ್ಥಳವನ್ನೂ ಪೊದೆ ಆವರಿಸಿಕೊಂಡಿದೆ. ಈ ಅವೈಜ್ಞಾನಿಕ ಕಾಮಗಾರಿಯ ಪರಿಣಾಮದಿಂದಾಗಿ ಜನರಿಗೆ ಸಮಸ್ಯೆಯಾಗಿದೆ.
ಹಿಂದೆ ಹೊಂಡಗಳಿದ್ದಾಗ ವಾಹನಗಳು ಕೊಂಚ ನಿಧಾನವಾಗಿ ಸಾಗುತ್ತಿದ್ದವು. ತೇಪೆ ಹಾಕಿದ ಮೇಲೆ ಜನರು ರಸ್ತೆ ಸರಿ ಇದೆ ಎಂದು ಒಂದೇ ಸಮನೆ ವೇಗದಲ್ಲಿ ವಾಹವನ್ನು ಚಲಾಯಿಸುತ್ತಾರೆ. ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ ಎಂಬುದು ಸ್ಥಳೀಯರ ಅಭಿಪ್ರಾಯ.
ಫೆ. 7ರಂದು ಇಬ್ಬರನ್ನು ಬಲಿ ಪಡೆದಿತ್ತು
ಹೆದ್ದಾರಿಯ ಡಾಮರು ಕಾಮಗಾರಿ ನಡೆದ ಬಳಿಕ ಫೆ. 7ರಂದು ಒಂದೇ ದಿನ ಇಬ್ಬರು ದ್ವಿಚಕ್ರ ವಾಹನ ಸವಾರರು ಅಪಘಾತದಿಂದ ಮೃತಪಟ್ಟಿದ್ದರು. ಅದರ ಮರುದಿನ ಬಂಟ್ವಾಳ ಪೊಲೀಸ್ ಇಲಾಖೆ ಡಿವೈಎಸ್ಪಿ ಅವರ ನೇತೃತ್ವದಲ್ಲಿ ಹೆದ್ದಾರಿಯ ಪರಿಶೀಲನ ಕಾರ್ಯ ನಡೆಸಿತ್ತು. ಕಲ್ಲಡ್ಕ ಜಂಕ್ಷನ್ನಲ್ಲಿ ಬ್ಯಾರಿಕೇಡ್, ಪೈಬರ್ ಕೋನ್ಗಳನ್ನು ಅಳವಡಿಸಲಾಗಿತ್ತು. ಜತೆಗೆ ಹೆದ್ದಾರಿಗೆ ಸಂಬಂಧಪಟ್ಟ ಎಂಜಿನಿಯರ್ಗಳನ್ನು ಕರೆಸಿ ಅಪಘಾತಗಳಿಗೆ ಹೆದ್ದಾರಿಯ ಅವ್ಯವಸ್ಥೆಯೂ ಕಾರಣ ಎನ್ನಲಾಗಿತ್ತು.
ರಿಪ್ಲೆಕ್ಟರ್ಗಳಿಲ್ಲ
ಸಾಮಾನ್ಯವಾಗಿ ರಸ್ತೆಗಳ ಡಾಮರು ಕಾಮಗಾರಿ ಮುಗಿದ ಬಳಿಕ ರಾತ್ರಿ ಹೊತ್ತು ವಾಹನ ಚಾಲಕರು/ ಸವಾರರನ್ನು ಎಚ್ಚರಿಸುವ ರಿಪ್ಲೆಕ್ಟರ್ಗಳನ್ನು ಹಾಕ ಲಾಗುತ್ತದೆ. ಅಂತಹ ಯಾವುದೇ ರಿಪ್ಲೆಕ್ಟರ್ಗಳನ್ನು ಆಳವಡಿಸಿಲ್ಲ. ಜತೆಗೆ ಕ್ಯಾಟ್ ಐ(ರಾತ್ರಿ ಹೊತ್ತಿನಲ್ಲಿ ಬೆಳಗುವ ನಾಮಫಲಕ)ಗಳನ್ನೂ ಅಳವಡಿಸಿಲ್ಲ.
ಹೆದ್ದಾರಿ ಬದಿ ಅಪಾಯಕಾರಿ
ಕಾಮಗಾರಿ ನಡೆದಂತೆ ಹೆದ್ದಾರಿಯ ಬದಿಯಲ್ಲಿ ಎತ್ತರವಾಗುತ್ತದೆ. ಆಗ ಬದಿಗೆ ಮಣ್ಣು ಹಾಕಿ ಸಮತಟ್ಟು ಮಾಡಬೇಕು. ಪ್ರಸ್ತುತ ಬಿ.ಸಿ.ರೋಡಿನಿಂದ ಅಡ್ಡ ಹೊಳೆವರೆಗೆ ನಡೆದ ಕಾಮಗಾರಿಯ ಸಂದರ್ಭ ಎಲ್ಲೂ ಮಣ್ಣು ಹಾಕಿಲ್ಲ. ಹೀಗಾಗಿ ಹೆದ್ದಾರಿ ಸಾಕಷ್ಟು ಎತ್ತರದಲ್ಲಿದ್ದು, ದ್ವಿಚಕ್ರ ವಾಹನಗಳಿಗೆ ಸಾಕಷ್ಟು ಅಪಾ ಯಕಾರಿ. ಹೆದ್ದಾರಿಯಲ್ಲಿ ಘನ ವಾಹನಗಳೇ ಹೆಚ್ಚಾಗಿ ಸಾಗುತ್ತಿದ್ದು, ಪರಸ್ಪರ ಓವರ್ಟೇಕ್ ಮಾಡುವ ವೇಳೆ ಎದುರಿನಿಂದ ಬರುವ ವಾಹನಗಳನ್ನು ಹೆದ್ದಾರಿಯಿಂದ ಕೆಳಗೆ ಇಳಿಸಬೇಕಾದ ಸ್ಥಿತಿ ಇದೆ. ಇದೂ ಅಪಘಾತಕ್ಕೆ ಕಾರ ಣವಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ.