40 ಸಾವಿರ ಕುಟುಂಬಗಳಿಗೆ ಸೂರೇ ಸಿಕ್ಕಿಲ್ಲ! : ಸರಕಾರದ ವಿಳಂಬ ಧೋರಣೆಯೇ ಕಾರಣ
Team Udayavani, Dec 2, 2022, 7:05 AM IST
ಬೆಂಗಳೂರು: ರಾಜ್ಯ ಸರಕಾರದ ವಿಳಂಬ ಧೋರಣೆಯಿಂದ ಅಂಗವಿಕಲರು, ಎಚ್ಐವಿ ಸೋಂಕು ಪೀಡಿತರು, ದೇವದಾಸಿಯರು, ಮಂಗಳಮುಖಿಯರು, ಲೈಂಗಿಕ ಕಾರ್ಯಕರ್ತೆಯರು ಸೇರಿದಂತೆ 14 ವಿಶೇಷ ವರ್ಗಗಳ 40 ಸಾವಿರ ಕುಟುಂಬಗಳಿಗೆ ಸೂರು ಇಲ್ಲದಂತಾಗಿದೆ.
2014-15ನೇ ಸಾಲಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಡಿ ಜಾರಿಗೆ ತರಲಾದ ದೇವರಾಜು ಅರಸು ವಸತಿ ಯೋಜನೆಯಡಿ 1,02,972 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ 56 ಸಾವಿರ ಮನೆಗಳು ಪೂರ್ಣಗೊಂಡಿವೆ. 24 ಸಾವಿರ ಮನೆಗಳು ನಿರ್ಮಾಣ ಹಂತದಲ್ಲಿದ್ದು, 12 ಸಾವಿರ ಕುಟುಂಬಕ್ಕೆ ಅನುದಾನ ನೀಡುವುದು ಬಾಕಿ ಇದೆ.
ಸರಕಾರದಿಂದ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯಡಿ ಸ್ವಂತ ಸೂರು ನಿರ್ಮಿಸುವ ಕನಸು ಕಂಡಿದ್ದ ವಿಶೇಷ ವರ್ಗದ 40 ಸಾವಿರ ಕುಟುಂಬಗಳಿಗೆ ನಿರಾಸೆಯಾಗಿದೆ. ತಾಂತ್ರಿಕ ಕಾರಣಗಳಿಂದ 5 ಸಾವಿರ ಫಲಾನುಭವಿಗಳ ಅರ್ಜಿ ಬ್ಲಾಕ್ ಆಗಿವೆ.
ಯಾರಿಗೆ ಈ ಯೋಜನೆ ?:
ರಸ್ತೆ ಬದಿ, ಅಂಗಡಿಗಳ ಜಗುಲಿಯಲ್ಲಿ ಮಲಗುವ ನಿರ್ಗತಿಕರು, ವಿಕಲಚೇತನರು, ಕುಷ್ಠ ರೋಗದಿಂದ ಗುಣಮುಖರಾದವರು, ಎಚ್ಐವಿ ಸೋಂಕುಪೀಡಿತರು, ಮಂಗಳಮುಖೀಯರು, ಲೈಂಗಿಕ ಕಾರ್ಯಕರ್ತೆಯರು, ದೇವದಾಸಿಯರು, ವಿಧವೆಯರು, ಜೀತದಿಂದ ಮುಕ್ತರಾದವರು, ಸಫಾಯಿ ಕರ್ಮಚಾರಿಗಳು, ದೌರ್ಜನ್ಯಕ್ಕೊಳಗಾದವರು, ಮತೀಯ ಗಲಭೆ ಹಾಗೂ ಚಳುವಳಿಗಳಿಂದ ಹಾನಿಗೊಳಗಾದವರು, ಅಲೆಮಾರಿ ಜನಾಂಗದವರು, ವಿಶೇಷ ವೃತ್ತಿಪರ ಗುಂಪುಗಳಾದ ಹಮಾಲರು, ನೇಕಾರರು, ಕುಶಲಕರ್ಮಿಗಳು ಸೇರಿದಂತೆ ಒಟ್ಟು 14 ವಿಶೇಷ ವರ್ಗಕ್ಕೆ ಸೇರಿದವರಿಗೆ ದೇವರಾಜು ಅರಸು ಯೋಜನೆಯಡಿ ವಸತಿ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿತ್ತು.
ಆಯ್ಕೆ ಪ್ರಕ್ರಿಯೆ ಹೇಗೆ? :
ಸ್ವಂತ ಮನೆ ಹೊಂದಿರುವ ವಿಶೇಷ ವರ್ಗದ ಫಲಾನುಭವಿಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆಯ್ಕೆ ಮಾಡಲಾಗುತ್ತದೆ. ಮನೆ ನಿರ್ಮಿಸಲು ನಾಲ್ಕು ಹಂತಗಳಲ್ಲಿ ಹಂತಹಂತವಾಗಿ ಒಟ್ಟು 1.20 ಲಕ್ಷ ರೂ. ರಾಜ್ಯ ಸರಕಾರದಿಂದ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗಲಿದೆ. ಮನೆ ನಿರ್ಮಾಣಕ್ಕೆ ತಗುಲುವ ಉಳಿದ ಖರ್ಚು ಫಲಾನುಭವಿಗಳೇ ಭರಿಸಬೇಕಿದೆ.
ಎಲ್ಲ ಸ್ಥಳೀಯ ಸಂಸ್ಥೆಗಳ ಅರ್ಹ ವಸತಿ ರಹಿತರ ಪಟ್ಟಿಯನ್ನು ಕ್ರೋಡೀಕರಿಸಿ ಜಿಲ್ಲಾ ಸಮಿತಿಯಲ್ಲಿ ಅನುಮೋದಿಸಿ ಆರ್ಜಿಎಚ್ಸಿಎಲ್ಗೆ ಪ್ರಸ್ತಾವನೆ ಕಳಿಸಲಾಗುತ್ತದೆ. ಜಿಲ್ಲಾ ಸಮಿತಿಯಿಂದ ಸ್ವೀಕೃತವಾದ ಫಲಾನುಭವಿಗಳ ಮಾಹಿತಿಯನ್ನು ಸ್ಥಳೀಯ ಸಂಸ್ಥೆಗಳು ಆನ್ಲೈನ್ನಲ್ಲಿ ಉಲ್ಲೇಖೀಸಿದರೆ ಸಾಮಾನ್ಯ ವಸತಿ ಯೋಜನೆಗಳಂತೆ ಇವರಿಗೂ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆದರೆ ಸಾವಿರಾರು ಫಲಾನುಭವಿಗಳು ಅನುದಾನಕ್ಕಾಗಿ ಕಾಯುವಂತಾಗಿದೆ.
ಮಾಹಿತಿ ಕೊರತೆ:
ರಾಜ್ಯದಲ್ಲಿ ಈ ವಿಶೇಷ ವರ್ಗಕ್ಕೆ ಸೇರಿದ ಲಕ್ಷಾಂತರ ಮಂದಿ ಅರ್ಹತೆ ಹೊಂದಿದ್ದರೂ ಮಾಹಿತಿ ಕೊರತೆಯಿಂದ ಅರ್ಜಿ ಸಲ್ಲಿಸುತ್ತಿಲ್ಲ. ಇನ್ನು ಕೆಲವರಿಗೆ ಆರ್ಥಿಕತೆಯ ಸಮಸ್ಯೆ, ಸ್ವಂತ ನಿವೇಶನದ ಸಮಸ್ಯೆ ಎದುರಾಗಿದೆ. ರಾಜ್ಯ ಸರಕಾರವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಿಶೇಷ ಅಂಚಿನಲ್ಲಿರುವ ಜನಾಂಗದವರಿಗಾಗಿ ಈ ಯೋಜನೆ ಜಾರಿಗೆ ತಂದಿದೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೇ. 70ರಷ್ಟು ಫಲಾನುಭವಿಗಳಿದ್ದರೆ ನಗರ ಪ್ರದೇಶದವರ ಸಂಖ್ಯೆ ವಿರಳವಾಗಿದೆ ಎಂದು ಆರ್ಜಿಎಚ್ಸಿಎಲ್ ಪ್ರಧಾನ ವ್ಯವಸ್ಥಾಪಕ ಎಸ್.ಎನ್. ಪರಶುರಾಮೇಗೌಡ ಹೇಳಿದ್ದಾರೆ.
ದೇವರಾಜು ಅರಸು ವಸತಿ ಯೋಜನೆಯಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಅನುದಾನ ಜಮೆಯಾಗುತ್ತದೆ. ಇದುವರೆಗೆ ವಿಶೇಷ ವರ್ಗದ ಹಲವು ಜನ ಇದರ ಅನುಕೂಲ ಪಡೆದಿದ್ದಾರೆ. ಬಾಕಿ ಇರುವ ಫಲಾನುಭವಿಗಳಿಗೆ ಅನುದಾನ ನೀಡಲು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.– ಕವಿತಾ ಎಸ್. ಮನ್ನಿಕೇರಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕಿ
-ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ