ಕೊಲೆಗಡುಕರಿಗೆಲ್ಲ ಪರಿಹಾರ ಕೊಡಲು ಸಾಧ್ಯವೇ: ಈಶ್ವರಪ್ಪ
Team Udayavani, Dec 25, 2019, 10:26 PM IST
ಹರಪನಹಳ್ಳಿ: ಮಂಗಳೂರು ಗೋಲಿಬಾರ್ನಲ್ಲಿ ಮುಸುಕು ಧರಿಸಿ ಗೂಂಡಾಗಿರಿ ಮಾಡಿದವರೇ ಸತ್ತಿದ್ದಾರೆ. ಕೊಲೆಗಡುಕರಿಗೆ ಪರಿಹಾರ ಕೊಡಲು ಸಾಧ್ಯವೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಗಲಾಟೆ ಪೂರ್ವ ನಿರ್ಧರಿತ ಮತ್ತು ಕುತಂತ್ರದಿಂದ ಕೂಡಿದ್ದು ಎಂಬುದಕ್ಕೆ ಸೂಕ್ತ ಪುರಾವೆಗಳು ದೊರೆತಿವೆ. ಮಾಧ್ಯಮಗಳಲ್ಲೂ ಅದು ಪ್ರಸಾರಗೊಂಡಿದೆ. ಮಂಗಳೂರಿನ ಗಲಾಟೆಯಲ್ಲಿ ಪೊಲೀಸ್ ಇಲಾಖೆ ಮತ್ತು ಸರಕಾರದ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದೆ. ಸರಕಾರ ಮತ್ತು ಪೊಲೀಸ್ ವಿರುದ್ಧ ಹೇಳಿಕೆ ನೀಡುತ್ತಿರುವ ವಿಪಕ್ಷದವರು ತಮ್ಮ ಹೇಳಿಕೆ ಹಿಂಪಡೆದು, ಸಾರ್ವಜನಿಕರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಮುಸ್ಲಿಮರ ಪ್ರತಿಭಟನೆಗೆ ಕಾಂಗ್ರೆಸ್ ಕುಮ್ಮಕ್ಕು
ಕಾಂಗ್ರೆಸ್ ದೇಶದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸುತ್ತಿದೆ. ಮುಸ್ಲಿಂ ಸಮುದಾಯ ಕಾಂಗ್ರೆಸ್ನ ಕುತಂತ್ರದ ಮಾತುಗಳನ್ನು ನಂಬುತ್ತಿದೆ. ಮಂಗಳೂರು ಘಟನೆಯನ್ನು ರಾಜಕೀಯವಾಗಿ ದುರುಪಯೋಗ ಪಡಿಸಿಕೊಳ್ಳಬಾರದು.
ಒಂದು ವೇಳೆ ರಾಜಕೀಯಕ್ಕೆ ಬಳಸಿಕೊಂಡರೆ ರಾಜ್ಯದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ಜನರ ಕ್ಷಮೆ ಕೇಳಿದರೆ ಒಂದೋ ಎರಡೋ ಸೀಟು ಹೆಚ್ಚಾಗಬಹುದು ಎಂದರು.
ಕರ್ನಾಟಕದಲ್ಲಿ ಪೌರತ್ವ ತಿದ್ದುಪಡಿ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಬ್ರಿಟಿಷರು ಭಾರತವನ್ನು ಛಿದ್ರ ಮಾಡಿದಾಗ ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರು. ಸ್ವತಂತ್ರ ಪೂರ್ವದಲ್ಲಿ ಪಾಕಿಸ್ತಾನದಲ್ಲಿ ಶೇ.19ರಷ್ಟು ಹಿಂದೂಗಳು ಇದ್ದರು. ಇದೀಗ ಶೇ.1.5ರಷ್ಟು ಮಾತ್ರ ಇದ್ದಾರೆ. ಅದೇ ಭಾರತದಲ್ಲಿ ಸ್ವತಂತ್ರ ಪೂರ್ವದಲ್ಲಿ ಮುಸ್ಲಿಮರು ಶೇ.3ರಷ್ಟು ಇದ್ದರು. ಈಗ ಶೇ.20ರಷ್ಟು ಆಗಿದ್ದಾರೆ. ಪೌರತ್ವ ತಿದ್ದುಪಡಿಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ಮಾತ್ರ ಇದನ್ನು ವಿರೋಧಿ ಸುತ್ತಿದೆ ಎಂದರು.