ಮಮತಾಗೆ ರಾಜ್ಯ ಹಿತಕ್ಕಿಂತ ಅಹಂ ಮುಖ್ಯ: ಜೆ.ಪಿ. ನಡ್ಡಾ ವಾಗ್ಧಾಳಿ
Team Udayavani, Apr 6, 2021, 7:10 AM IST
ಕೋಲ್ಕತಾ: ಮಮತಾ ಬ್ಯಾನರ್ಜಿ ಈಗ ಎಲ್ಲ ವಿಚಾರಗಳನ್ನೂ ರಾಜಕೀಯ ಗೊಳಿಸುತ್ತಿದ್ದಾರೆ. ಇದು ಮತದಾರರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಷ್ಟೇ. ಕೊರೊನಾ ಲಸಿಕೆ ವಿಚಾರದಲ್ಲೂ ಮಮತಾ ರಾಜಕೀಯ ಮುಂದುವರಿಸುತ್ತಿರುವುದು ದೊಡ್ಡ ದುರಂತ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಷಾದಿಸಿದ್ದಾರೆ.
8ನೇ ಹಂತದ ಕ್ಷೇತ್ರಗಳ ಮತದಾರರನ್ನು ಉದ್ದೇಶಿಸಿ, ವರ್ಚುವಲ್ ರ್ಯಾಲಿಯಲ್ಲಿ ಮಾತನಾಡಿದ ಅವರು, “ಪ್ರಧಾನಿ ಕರೆಯುವ ಯಾವ ಸಭೆಗೂ ಸಿಎಂ ಮಮತಾ ಬ್ಯಾನರ್ಜಿ ಅವರೇಕೆ ಹಾಜರಾಗುವುದಿಲ್ಲ? ಅವರಿಗೆ ರಾಜ್ಯದ ಹಿತಕ್ಕಿಂತ ಅಹಂಕಾರವೇ ಮುಖ್ಯ’ ಎಂದು ಆರೋಪಿಸಿದರು.
“ದೀದಿ… ನಿಮ್ಮನ್ನು ಕೇಳ್ಳೋದು ಇಷ್ಟೇ… ಲಸಿಕೆ ಕೊರತೆ ಆಯ್ತು ಅಂತ ನೀವು ಹೇಳುತ್ತೀರಿ. ಹೀಗಿದ್ದೂ ಅದ್ಹೇಗೆ ನಿಮ್ಮ ಆರೋಗ್ಯ ಸಚಿವರು ಪ್ರತಿನಿತ್ಯದ ವ್ಯಾಕ್ಸಿನೇಶನ್ ದತ್ತಾಂಶಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.