ಆಯ್ಕೆ ಆಶ್ಚರ್ಯ ತಂದಿದೆ: ಕೆ. ನಾರಾಯಣ
Team Udayavani, Nov 18, 2020, 6:01 AM IST
ಬೆಂಗಳೂರು: ನಮ್ಮ ಇಡೀ ಕುಟುಂಬದಲ್ಲಿ ಯಾರೂ ರಾಜಕೀಯ ನಾಯಕರಿಲ್ಲ. ವೈಯಕ್ತಿಕವಾಗಿ ಯಾವುದೇ ರಾಜಕೀಯ ನಾಯಕರ ಜತೆ ಸಹವಾಸವಿಲ್ಲ. ನನ್ನ ಸಮಾಜ ಸೇವೆಯನ್ನೇ ಗುರುತಿಸಿ ಆಯ್ಕೆ ಮಾಡಿರುವುದು ಅಚ್ಚರಿ ತಂದಿದೆ. ಫಲಾಪೇಕ್ಷೆ ಬಯಸದೆ ಸೇವೆ ಮಾಡಿದರೆ ಸಮಾಜವೇ ಫಲ ನೀಡುತ್ತದೆ ಎನ್ನುವುದಕ್ಕೆ ಇದು ನಿದರ್ಶನ – ಇವು ರಾಜ್ಯಸಭೆಗೆ ಬಿಜೆಪಿಯಿಂದ ಅಭ್ಯರ್ಥಿಯಾಗಿರುವ ಡಾ| ಕೆ. ನಾರಾಯಣ ಅವರ ಮಾತುಗಳು.
ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಬಿಜೆಪಿಯು ಅವರನ್ನು ಅಭ್ಯರ್ಥಿಯಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಅವರೊಂದಿಗೆ “ಉದಯವಾಣಿ’ ನಡೆಸಿದ ಕಿರು ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ.
– ಬಿಜೆಪಿಯಲ್ಲಿ ಯಾವಾಗಿನಿಂದ ಗುರುತಿಸಿಕೊಂಡಿದ್ದಿರಿ?
ನಾನು ಮೂಲತಃ ಮಂಗಳೂರಿನ ಅಶೋಕ ನಗರದವನಾಗಿದ್ದು, ಅಲ್ಲಿಯೇ ಓದಿ, ಬೆಳೆದವನು. ಈ ವರೆಗೆ ಯಾವುದೇ ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಂಡಿರಲಿಲ್ಲ. ತಿಂಗಳ ಹಿಂದಷ್ಟೇ ಬಿಜೆಪಿ ನೇಕಾರ ಪ್ರಕೋಷ್ಠದ ಸಹ ಸಂಚಾಲಕನಾಗಿ ಆಯ್ಕೆಯಾಗಿದ್ದೆ. ಬೆಂಗಳೂರಿನಲ್ಲಿ ಸ್ಪಾನ್ ಮುದ್ರಣಾಲಯ ನಡೆಸುತ್ತಿದ್ದೇನೆ.
– ಸಮಾಜ ಸೇವೆಗೆ ಸ್ಫೂರ್ತಿ ಏನು?
ಸಮಾಜದ ಸಮಗ್ರ ಅಭಿವೃದ್ಧಿಯೇ ಸ್ಫೂರ್ತಿ. ಮಂಗ ಳೂರಿನ ಅಶೋಕನಗರದಲ್ಲಿ ಬಡವರಿಗಾಗಿ ಸಭಾಂಗಣ ನಿರ್ಮಿಸಿದ್ದೇನೆ. ಬಡವರಿಗೆ ಭೂದಾನ ಮಾಡಿ, ಅಲ್ಲಿ ಮನೆಗಳನ್ನು ನಿರ್ಮಿಸಿದ್ದು, ದೇವಸ್ಥಾನ ಮತ್ತು ಆಶ್ರಮಗಳ ಅಭಿವೃದ್ಧಿಗೆ ಶ್ರಮಿಸಿರುವ ಜತೆಗೆ ಬಡ ಮಕ್ಕಳ ಶಿಕ್ಷಣಕ್ಕಾಗಿಯೂ ದುಡಿಯುತ್ತಿದ್ದೇನೆ.
– ರಾಜ್ಯಸಭೆ ಸದಸ್ಯರಾಗುತ್ತೀರಿ ಎಂದೆಣಿಸಿಕೊಂಡಿದ್ದಿರೇ?
ಇಲ್ಲ. ಮಂಗಳವಾರ ನಳಿನ್ ಕುಮಾರ್ ಕಟೀಲು ಅವರು ದೂರವಾಣಿ ಕರೆ ಮಾಡಿ, ನಾಮಪತ್ರ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸುವಂತೆ ಹೇಳಿದರು. ಅನಂತರ ದಿಲ್ಲಿಯಿಂದಲೂ ಕರೆ ಬಂತು. ಆಗ ಆಶ್ಚರ್ಯವಾಗಿತ್ತು.
– ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದೀರಾ?
ಸಂಘ ಪರಿವಾರದ ಸಂಘಟನೆಗಳಲ್ಲಿ 25 ವರ್ಷ ಗಳಿಂದಲೂ ಸಕ್ರಿಯನಾಗಿದ್ದೇನೆ. ಮಂಗಳೂರಿನ ದಿಗಂತ ಮುದ್ರಣಾಲಯದಲ್ಲಿ 25 ವರ್ಷಗಳಿಂದ ತಾಂತ್ರಿಕ ನಿರ್ದೇಶಕನಾಗಿದ್ದೇನೆ. ಹಿಂದೂ ಸೇವಾ ಪ್ರತಿಷ್ಠಾನದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇನೆ. ಪರಿವಾರದ ಸಂಸ್ಕೃತ ಪತ್ರಿಕೆ “ಸಂಭಾಷಣಾ ಸಂದೇಶ’ದ ಪ್ರಕಾಶಕನಾಗಿದ್ದೇನೆ.
– ಬಿಜೆಪಿ ಹಾಗೂ ರಾಜಕಾರಣಿಗಳೊಂದಿಗಿನ ಒಡನಾಟ?
ಬೆಂಗಳೂರಿನಲ್ಲೇ ಇದ್ದರೂ ಬಿಜೆಪಿ ಕಚೇರಿಗೆ ಹೋಗದೆ ಒಂದು ವರ್ಷ ಕಳೆದಿದೆ. ಯಾರನ್ನೂ ಭೇಟಿ ಮಾಡಿಲ್ಲ. ನಮ್ಮ ಇಡೀ ಕುಟುಂಬದಲ್ಲಿ ರಾಜಕೀಯವಾಗಿ ಗುರುತಿಸಿ ಕೊಂಡವರ್ಯಾರೂ ಇಲ್ಲ. ನನಗೂ ಯಾವುದೇ ರಾಜಕೀಯ ನಾಯಕರ ಸಹವಾಸವೂ ಇಲ್ಲ. ಸಮಾಜ ಸೇವೆಯೇ ಈ ಆಯ್ಕೆಗೆ ಮಾನದಂಡವಾದಂತಿದೆ.
– ಪಕ್ಷ ಗುರುತಿಸಿರುವ ಬಗ್ಗೆ ಏನೆನ್ನುತ್ತಿರಿ?
ಫಲಾಪೇಕ್ಷೆ ಇಲ್ಲದೆ ಸಮಾಜದ ಸೇವೆ ಮಾಡುತ್ತಿದ್ದರೆ ಒಂದು ದಿನ ಸಮಾಜ ನಮ್ಮನ್ನು ಗುರುತಿಸುತ್ತದೆ ಎನ್ನುವುದಕ್ಕೆ ಇದು ನಿದರ್ಶನ. ನಾವು ಮಾಡಿದ ಸಮಾಜ ಸೇವೆ ಒಂದಲ್ಲೊಂದು ದಿನ ಫಲ ಕೊಟ್ಟೇ ಕೊಡುತ್ತದೆ.
– ರಾಜು ಖಾರ್ವಿ ಕೊಡೇರಿ