ಕಲಬುರಗಿಯಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ಮೂವರು ಬೈಕ್ ಸವಾರರು ಸಾವು
Team Udayavani, Dec 3, 2020, 10:54 PM IST
ಕಲಬುರಗಿ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ.
ಟಂಟಂ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ತಾಪುರ ಸಮೀಪ ನಡೆದಿದೆ. ಚಿತ್ತಾಪುರ ತಾಲೂಕಿನ ಅಲ್ಲೂರ (ಬಿ) ಗ್ರಾಮದ ಮಹಾದೇವ ಅಳ್ಳದ (45) ಮತ್ತು ಲಕ್ಷ್ಮೀಪೂರ ವಾಡಿಯ ಮನೋಹರ ರಾಠೋಡ ಎಂಬುವರೇ ಮೃತರು.
ಇವರು ಬೈಕ್ ಮೇಲೆ ಚಿತ್ತಾಪೂರ ಪಟ್ಟಣದಿಂದ ವಾಡಿ ಮಾರ್ಗವಾಗಿ ಹೊರಡುತ್ತಿದ್ದರು. ಇತ್ತ, ಟಂಟಂ ವಾಹನ ರಾವೂರ ಮಾರ್ಗದಿಂದ ಬರುತ್ತಿತ್ತು. ಈ ವೇಳೆ ಎರಡೂ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿ ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಚಿತ್ತಾಪೂರ ಸಿಪಿಐ ಕೃಷ್ಣಪ್ಪ ಕಲ್ಲದೇವರ ಮತ್ತು ಪಿಎಸ್ಐ ಶ್ರೀಶೈಲ ಅಂಬಾಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಶತ್ರುರಾಷ್ಟ್ರಗಳ ಡ್ರೋನ್ ಸಂಹಾರಕ್ಕೆ ನೌಕಾಪಡೆಯಿಂದ ‘ಸ್ಮ್ಯಾಶ್’- 2000 ರೈಫಲ್ ನಿಯೋಜನೆ
ಕಮಲಾಪುರ ಸಮೀಪ ನಡೆದ ಮತ್ತೊಂದು ಪ್ರಕರಣದಲ್ಲಿ ಓರ್ವ ಯುವಕ ಮೃತಪಟ್ಟಿದ್ದಾನೆ. ಇಲ್ಲಿನ ಚಿಂದಿ ಬಸಣ್ಣ ದೇವಾಲಯದ ಬಳಿ ಬೈಕ್ ಗೆ ಬಸ್ ಡಿಕ್ಕಿಯಾಗಿ ಶರಣಬಸಪ್ಪ ಕಲ್ಯಾಣ (27) ಎಂಬ ಯುವಕ ಸಾವಿಗೀಡಾಗಿದ್ದಾನೆ.
ಮೃತ ಯುವಕ ಕಮಲಾಪುರದಿಂದ ಹುಮನಾಬಾದ್ ಗೆ ತೆರಳುತ್ತಿದ್ದ. ಹುಮನಾಬಾದ್ ನಿಂದ ಕಲಬುರಗಿಗೆ ತೆರಳುತ್ತಿದ್ದ ಬಸ್ ಗುದ್ದಿದೆ. ಇದರಿಂದ ಯುವಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.