ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇನ್ಮುಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
Team Udayavani, Jul 7, 2021, 8:03 PM IST
ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂಬುದಾಗಿ ತಕ್ಷಣ ಜಾರಿಗೆ ಬರುವಂತೆ ಮರು ನಾಮಕರಣ ಮಾಡಲಾಗಿದೆ.
ಈ ಮುಂಚೆ ಹೈದರಾಬಾದ್ ಕರ್ನಾಟಕ ಎಂಬುದಾಗಿದ್ದ ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂಬುದಾಗಿ ನಾಮಕರಣ ಮಾಡಲಾಗಿದ್ದರೆ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಪ್ರದೇಶ ಅಭಿವೃದ್ಧಿ ಮಂಡಳಿಯನ್ನಾಗಿ ನಾಮಕರಣ ಮಾಡಲಾಗಿದ್ದರೆ ಈಗ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಹಾಗೂ ಮುಂಬೈ ಕರ್ನಾಟಕದ ಒಂದು ಜಿಲ್ಲೆ ಸೇರಿ ಏಂಟು ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನೂ ಬದಲಾಯಿಸಲಾಗಿದೆ.
ಉಪಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಬುಧವಾರ ಕಲಬುರಗಿ ಕೇಂದ್ರೀಯ ಬಸ್ ನಿಲ್ದಾಣದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮರು ನಾಮಕರಣ ಆದೇಶ ಪತ್ರವನ್ನು ಎನ್ಇಕೆಆರ್ಟಿಸಿ ಅಧ್ಯಕ್ಷರಾಗಿರುವ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುರ್ಮಾರಾವ್ ಎಂ ಅವರಿಗೆ ಹಸ್ತಾಂತರಿಸಿ , ಈ ಕೂಡಲೇ ಕಾರ್ಯಾನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕೆಂದರು.
ಇದನ್ನೂ ಓದಿ :ಮೋದಿ ಸಂಪುಟ ಪುನರ್ ರಚನೆ : ಭಗವಂತ ಗುರುಬಸಪ್ಪ ಖೂಬಾ ಪ್ರಮಾಣ ವಚನ ಸ್ವೀಕಾರ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನೂ ಬದಲಾಯಿಸುವ ಪ್ರಸ್ತಾಪ ಸದ್ಯ ಇಲಾಖೆ ಮುಂದಿಲ್ಲ. ಅದೇ ರೀತಿ ಬಸ್ ಪ್ರಯಾಣ ದರ ಹೆಚ್ಚಳ ಸಹ ಸಧ್ಯ ಹೆಚ್ಚಳ ಮಾಡುವುದು ಇಲಾಖೆ ಎದುರಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.
ಕೆಎಸ್ಆರ್ಟಿಸಿ ಹೆಸರಿಗೆ ಧಕ್ಕೆಯಿಲ್ಲ: ರಾಜ್ಯದ ಕೆಎಸ್ಆರ್ಟಿಸಿ ಹೆಸರು ಹಾಗೂ ಲೋಗೋಕ್ಕೆ ಯಾವುದೇ ಧಕ್ಕೆಯಿಲ್ಲ. ಕೇರಳ ಸರ್ಕಾರವು ಕೆಎಸ್ಆರ್ಟಿಸಿ ಹೆಸರು ಹಾಗೂ ಲೋಗೋ ಬಳಕೆಗೆ ಆಕ್ಷೇಪಿಸಿ ಅಪ್ಲಿಟೆಡ್ ಟ್ರಿಬ್ಯೂನಲ್ ನಲ್ಲಿ ಪ್ರಶ್ನಿಸಿ ದೂರು ದಾಖಲಿಸಿತ್ತು. ಆದರೆ ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಮೂಲಕ ಟ್ರಿಬ್ಯುನಲ್ ತೆಗೆದು ಹಾಕಿದೆ. ಹೀಗಾಗಿ ಕೇರಳದ ಆಕ್ಷೇಪ ಮುಗಿದಂತಾಗಿದೆ. ಈಗ ಏನಿದ್ದರೂ ಹೈಕೋರ್ಟ್ ನಲ್ಲಿ ದೂರು ಸಲ್ಲಿಸಬಹುದಾಗಿದೆ. ಕೆಎಸ್ಆರ್ಟಿಸಿ ಹೆಸರು ಮೊದಲು ಬಳಕೆ ಕುರಿತಾಗಿ ಇಲಾಖೆ ಬಳಿ ದಾಖಲೆಗಳಿವೆ. ಹೀಗಾಗಿ ಕೆಎಸ್ಆರ್ಟಿಸಿ ಹೆಸರಿಗೆ ಯಾವುದೇ ಧಕ್ಕೆಯಿಲ್ಲ ಎಂದು ಡಿಸಿಎಂ ಸವದಿ ವಿವರಣೆ ನೀಡಿದರು.
ಎನ್ಇಕೆಆರ್ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್, ಸಂಸ್ಥೆಯ ಎಂಡಿ ಕೂರ್ಮರಾವ್ ಮತ್ತಿತರರು ಉಪಸ್ಥಿತರಿದ್ದರು.