ಟೆಂಡರ್ ಪರಿಶೀಲನ ಆಯೋಗಕ್ಕೆ ಮುಕ್ತ ಸ್ವಾತಂತ್ರ್ಯ ನೀಡಿ
Team Udayavani, Apr 21, 2022, 6:00 AM IST
ರಾಜ್ಯದಲ್ಲಿ ಸರಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗುವ 50 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳ ಟೆಂಡರ್ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ಆಯೋಗವೊಂದನ್ನು ರಚಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಸಾರ್ವಜನಿಕ ಯೋಜನೆಗಳ ಟೆಂಡರ್ ಪ್ರಕ್ರಿಯೆ, ಅನುದಾನ ಬಿಡುಗಡೆ, ಕಾಮಗಾರಿಗಳ ನಿರ್ವಹಣೆ ಮತ್ತಿತರ ವಿಚಾರಗಳಲ್ಲಿ ಕಮಿಷನ್ ಸಹಿತ ಭಾರೀ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಅಷ್ಟು ಮಾತ್ರವಲ್ಲದೆ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಮೇಲೆ ಬೆಟ್ಟು ಮಾಡಿ, ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣ ಸರಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು. ಈಶ್ವರಪ್ಪ ಅವರ ಸಚಿವ ಸ್ಥಾನವನ್ನೇ ಈ ಪ್ರಕರಣ ಕಿತ್ತುಕೊಂಡಿತ್ತು.
ಭ್ರಷ್ಟಾಚಾರಮುಕ್ತ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೇರಿರುವ ಬಿಜೆಪಿಗೆ ಶೇ. 40 ಕಮಿಷನ್ ಪ್ರಕರಣ ಭಾರೀ ಇರಿಸುಮುರಿಸು ಉಂಟುಮಾಡಿದೆ. ಈ ಹಿಂದಿನ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕಮಿಷನ್ ಸರಕಾರ ಎಂದು ಆರೋಪ ಹೊರಿಸಿದ್ದರಲ್ಲದೆ ಭ್ರಷ್ಟಾಚಾರಮುಕ್ತ ಸರಕಾರ ನೀಡಲು ಬಿಜೆಪಿ ಬದ್ಧ ಎಂದು ಪ್ರತಿಪಾದಿಸಿದ್ದರು. ಆದರೆ ಇದೀಗ ಬಿಜೆಪಿ ಸರಕಾರದ ವಿರುದ್ಧವೇ ಕಮಿಷನ್ ಆರೋಪ ಕೇಳಿಬಂದಿದ್ದು, ವಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಿಗೆ ಬಿಜೆಪಿ ಮೇಲೆ ಮುಗಿ ಬೀಳಲು ಬಲುದೊಡ್ಡ ಅಸ್ತ್ರ ಲಭಿಸಿದಂತಾಗಿದೆ. ಈ ಎಲ್ಲ ಆರೋಪ ಮತ್ತು ಕಳಂಕದಿಂದ ಪಾರಾಗಲು ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಸ್ತಾವನೆಗಳ ಪರಿಶೀಲನೆಗಾಗಿ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತ್ರಿಸದಸ್ಯ ಆಯೋಗ ರಚಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ಆರ್ಥಿಕ ತಜ್ಞರು ಮತ್ತು ತಾಂತ್ರಿಕ ಪರಿಣತರು ಆಯೋಗದ ಇತರ ಈರ್ವರು ಸದಸ್ಯರಾಗಿರಲಿದ್ದಾರೆ. 50 ಕೋಟಿ ರೂ. ಮತ್ತು ಮೇಲ್ಪಟ್ಟ ಮೊತ್ತದ ಎಲ್ಲ ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಸ್ತಾವನೆಗಳ ಅಂದಾಜು ವೆಚ್ಚ, ಟೆಂಡರ್ ಷರತ್ತುಗಳು ಕಾನೂನು ನಿಯಮಾವಳಿಗ ಳಿಗನುಸಾರವಾಗಿವೆಯೇ ಎಂದು ಪರಿಶೀಲಿಸಿದ ಬಳಿಕ ಆಯೋಗ ಪ್ರಸ್ತಾವನೆಗೆ ಅನುಮೋದನೆ ನೀಡಲಿವೆ. ಇದು ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಸಹಾಯಕವಾಗಲಿದೆ. ಆಯೋಗವು ಯಾವುದೇ ಟೆಂಡರ್ ಪ್ರಸ್ತಾವನೆಗೆ 15 ದಿನಗಳ ಒಳಗಾಗಿ ಅನುಮೋದನೆ ನೀಡಲಿದೆ. ಟೆಂಡರ್ ಪ್ರಸ್ತಾ ವನೆಗಳು ಅಧಿಕವಾಗಿದ್ದಲ್ಲಿ ಸಮಾನಾಂತರ ಆಯೋಗ ರಚಿಸಿ ಕಾಮ ಗಾರಿಯ ಅನುಷ್ಠಾನಕ್ಕೆ ಯಾವುದೇ ಅಡಚಣೆಯಾಗದಿರುವಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಜಿಲ್ಲಾಪಂಚಾಯತ್ ಮಟ್ಟದಲ್ಲಿ ಕೆಲವೊಂದು ಕಾಮಗಾರಿ ಗಳನ್ನು ಮೌಖೀಕ ಆದೇಶದ ಮೇರೆಗೆ ಅನುಷ್ಠಾನಗೊಳಿಸಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ಯಾವುದೇ ಸಾರ್ವಜನಿಕ ಕಾಮಗಾರಿಯನ್ನು ಲಿಖೀತ ಆದೇಶವಿಲ್ಲದೆ ನಡೆಸುವಂತಿಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಹೊಸದಾಗಿ ರಚನೆಯಾಗಲಿರುವ ಆಯೋಗದ ಕಾರ್ಯನಿರ್ವಹಣೆಯಲ್ಲಿ ಸರಕಾರ ಮತ್ತು ಜನಪ್ರತಿನಿಧಿಗಳು ಹಸ್ತಕ್ಷೇಪ ನಡೆಸಿದಲ್ಲಿ ಆಯೋಗದ ಉದ್ದೇಶ ನಿಷ#ಲಗೊಳ್ಳುವುದು ನಿಶ್ಚಿತ. ಹೀಗಾಗದಂತೆ ಸರಕಾರ ಎಚ್ಚರ ವಹಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ