ಬೆಳೆಯ ಸಿರಿ ಬಜೆಟ್ನಲ್ಲಿ2022-23ನೇ ಸಾಲಿನಲ್ಲಿ ಕೃಷಿ ವಲಯಕ್ಕೆ 33,700 ಕೋ. ಅನುದಾನ ಮೀಸಲು
ರೈತ ಶಕ್ತಿ ಯೋಜನೆಗೆ 500 ಕೋಟಿ ರೂ. ಅನುದಾನ ; ಕೃಷಿ ಉತ್ಪನ್ನ ಮಾರಾಟಕ್ಕೆ ಉತ್ತೇಜನ
Team Udayavani, Mar 5, 2022, 6:35 AM IST
ಬಜೆಟ್ನಲ್ಲಿ ಸಮಗ್ರ ಕೃಷಿ ಒಳಗೊಂಡ ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ, ನೀರಾವರಿ, ಮೀನುಗಾರಿಕೆ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಘೋಷಿಸಿರುವುದು ರೈತರ ಬದುಕಿಗೆ ಬೆಳಕಾಗುವ ಭರವಸೆ ಮೂಡಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಚೊಚ್ಚಲ ಬಜೆಟ್ನಲ್ಲಿ ಕೃಷಿ ವಲಯಕ್ಕೆ ಆದ್ಯತೆ ನೀಡಿದ್ದು, 2022-23ನೇ ಸಾಲಿನಲ್ಲಿ ಕೃಷಿ ವಲಯಕ್ಕೆ 33,700 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವ ಹಾಗೂ ಆತ್ಮನಿರ್ಭರ ಭಾರತ ಕಲ್ಪನೆಯಡಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣದ ಬಳಕೆ ಹೆಚ್ಚಿಸಲು ರೈತರಿಗೆ ಪ್ರತಿ ಎಕರೆಗೆ 250 ರೂ.ಗಳಂತೆ ಗರಿಷ್ಠ 5 ಎಕರೆಗೆ ಡಿಬಿಟಿ ಮೂಲಕ ಡಿಸೇಲ್ ಸಹಾಯಧನ ನೀಡಲು ರೈತ ಶಕ್ತಿ ಎಂಬ ಹೊಸ ಯೋಜನೆ ಘೋಷಿಸಿದ್ದು, ಅದಕ್ಕಾಗಿ 500 ಕೋಟಿ ರೂ. ಬಜೆಟ್ನಲ್ಲಿ ಮೀಸಲಿಡಲಾಗಿದೆ.
ಎಲ್ಲ ಹೋಬಳಿಗೂ ವಿಸ್ತರಣೆ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣ ಕೈಗೆಟಕುವಂತೆ ಮಾಡಲು ಹಾಗೂ ಕೃಷಿ ಉತ್ಪಾದನೆ ಹೆಚ್ಚಿಸಲು ಕೃಷಿ ಯಂತ್ರಧಾರೆ ಯೋಜನೆಯನ್ನು ಎಲ್ಲ ಹೋಬಳಿಗೂ ವಿಸ್ತರಿಸಲು ಘೋಷಿಸಲಾಗಿದೆ. ಕೆಪೆಕ್ ಮೂಲಕ ರೈತ ಉತ್ಪಾದಕ ಸಂಸ್ಥೆಗಳಿಗೆ ಸಾಮಾನ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ ಕೃಷಿ ಉತ್ಪನ್ನಗಳನ್ನು ಮಾರಾಟ ಮತ್ತು ರಪು¤ ಮಾಡಲು 50 ಕೋಟಿ ರೂ. ಮೀಸಲಿಡಲಾಗಿದೆ.
ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳು ಹಾಳಾಗುವುದನ್ನು ತಡೆಗಟ್ಟಿ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆಗೆ ಕ್ರಮ, ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸಲು ರಾಜ್ಯದ ಎಲ್ಲ ಕೃಷಿ ಮತ್ತು ತೋಟಗಾರಿಕೆ ವಿವಿಗಳಲ್ಲಿ ತಲಾ 1000 ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿಗೆ ಉತ್ತೇಜನ ನೀಡುವುದು, ರಾಜ್ಯದ 57 ತಾಲೂಕುಗಳ ವ್ಯಾಪ್ತಿಯ 2.75 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ 642 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯ್ ಯೋಜನೆ ಜಲಾನಯನ ಅಭಿವೃದ್ಧಿ ಘಟಕ 2.0 ಜಾರಿಗೊಳಿಸುವುದಾಗಿ ಬಜೆಟ್ನಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆಗೆ ಪ್ರೋತ್ಸಾಹ: ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಉತ್ಪಾದನೆ ಹೆಚ್ಚಿಸಲು ರೈತರಿಗೆ 48 ಲಕ್ಷ ಕಸಿ ಸಸಿಗಳನ್ನು ವಿತರಿಸಲಾಗಿದೆ. ತೊಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಹೆಚ್ಚಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.90ರಷ್ಟು ಇತರೆ ವರ್ಗದವರಿಗೆ ಶೇ.75ರಷ್ಟು ಸಹಾಯಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಉತ್ಪಾದನೆಗೆ ಪ್ರೋತ್ಸಾಹಿಸಲು ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ ಮೂಲಕ ತೊರವಿ ಗ್ರಾಮದಲ್ಲಿ 35 ಕೋಟಿ ರೂ., ವೆಚ್ಚದಲ್ಲಿ ಅತ್ಯಾಧುನಿಕ ಶೈತ್ಯಾಗಾರ ನಿರ್ಮಾಣ, ರಾಷ್ಟ್ರೀಯ ಖಾದ್ಯ ತೈಲಗಳು -ತಾಳೆ ಎಣ್ಣೆ ಅಭಿಯಾನದಡಿ ಮುಂದಿನ 5 ವರ್ಷಗಳಲ್ಲಿ 25000 ಹೆಕ್ಟೇರ್ಗೆ ಹೆಚ್ಚಿಸಲು 35 ಕೋಟಿ ರೂ. ಅನುದಾನ. ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಹಾಗೂ ಯಂತ್ರೋಪಕರಣ ಅಳವಡಿಸಲು 25 ಕೋಟಿ ರೂ. ಅನುದಾನ. ಮೆಣಸು ಸಾಂಬಾರ ಪದಾರ್ಥ ಗುಣಮಟ್ಟ ಹೆಚ್ಚಿಸಲು ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ, ಹಾನಗಲ್ನಲ್ಲಿ ಮಾವು ಸಂಸ್ಕರಣಾ ಘಟಕ, ಕೊಡಗು ಹಾಗೂ ಜಾಂಬೋಟಿ ಜೇನು ತುಪ್ಪಗಳನ್ನು ಜನಪ್ರೀಯಗೊಳಿಸಲು ಹಾಗೂ ಉತ್ಪಾದನೆಯನ್ನು ಹೆಚ್ಚಿಸಲು ಸುಧಾರಿತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಬ್ರ್ಯಾಂಡಿಂಗ್ ಮೂಲಕ ಜಾಗತಿಕ ಮಟ್ಟಕ್ಕೇರಿಸಲು 5 ಕೋಟಿ ರೂ. ಮೀಸಲಿಡುವುದಾಗಿ ಬಜೆಟ್ನಲ್ಲಿ ತಿಳಿಸಿದ್ದಾರೆ.
ಆಳ ಸಮುದ್ರದ ಮೀನುಗಾರಿಕೆಗೆ ಮತ್ಸéಸಿರಿ
300 ಕಿ.ಮೀ ಉದ್ದದ ಕರಾವಳಿ ತೀರ ಪ್ರದೇಶ ಹೊಂದಿರುವ ಕರ್ನಾಟಕದಲ್ಲಿ ಆಳ ಸಮುದ್ರ ಮೀನುಗಾರಿಕೆ ಉತ್ತೇಜಿಸಲು 100 ಆಳ ಮೀನುಗಾರಿಕಾ ದೋಣಿಗಳಿಗೆ ಪ್ರಧಾನಮಂತ್ರಿ ಮತ್ಸé ಸಂಪದ ಯೋಜ ನೆಯೊಂದಿಗೆ ಸಂಯೋಜಿಸಿ ಮತ್ಸé ಸಿರಿ ಎಂಬ ವಿಶೇಷ ಯೋಜನೆ ಘೋಷಣೆ ಮಾಡಲಾಗಿದೆ. 5000 ವಸತಿ ರಹಿತ ಮೀನುಗಾರರಿಗೆ ರಾಜೀವ್ಗಾಂಧಿ ವಸತಿ ನಿಗಮದಡಿ ಮನೆ ನಿರ್ಮಾಣ, ರಾಜ್ಯದ 8 ಮೀನುಗಾರಿಕಾ ಬಂದರುಗಳಲ್ಲಿ ಮೀ ನುಗಾರಿಕಾ ದೋಣಿ ಸುಗಮವಾಗಿ ಸಂಚರಿಸಲು ನ್ಯಾವಿಗೇಷ ನ್ ಚಾನೆಲ್ಗಳಲ್ಲಿ ಹಂತ ಹಂತವಾಗಿ ಹೂಳೆತ್ತಲು ಕ್ರಮ, ಗ್ರಾಪಂ ಮಟ್ಟದಲ್ಲಿ ಕೆರೆಗಳಲ್ಲಿ ಮೀನು ಕೃಷಿಗೆ ಪ್ರೋತ್ಸಾಹಿಸಲು ಉಚಿತವಾಗಿ ಮೀನುಮರಿ ನೀಡುವುದಾಗಿ ಸಿಎಂ ತಿಳಿಸಿದ್ದಾರೆ.
ಕೃಷಿ ಚಟುವಟಿಕೆಗೆ ಪ್ರೋತ್ಸಾಹ
ಬಳ್ಳಾರಿಯ ಹಗರಿಯಲ್ಲಿ ಡಿಎಂಎಫ್, ಕೆಕೆಆರ್ಡಿಬಿ ಅನು ದಾನ ಬಳಸಿ ಹೊಸ ಕೃಷಿ ಕಾಲೇಜು, ಬೆಳಗಾವಿಯ ಅಥಣಿ ಯಲ್ಲಿ ಕೃಷಿ ಕಾಲೇಜು ಸ್ಥಾಪನೆ. ಕಲಬು ರಗಿ, ಯಾದಗಿರಿಯಲ್ಲಿ ಬೆಳೆಯುವ ವಿಶಿಷ್ಟವಾದ ಭೌಗೋಳಿಕ ಸೂಚ್ಯಂಕ ಹೊಂದಿರುವ ತೊಗರಿ ಬೆಳೆಯನ್ನು ಭೀಮಾ ಪಲ್ಸ್ ಬ್ರ್ಯಾಂಡ್ ನಡಿ ಮಾರಾ ಟಕ್ಕೆ ಯೋಜನೆ. ಹಾವೇರಿಯ ಹಿರೇಕೆರೂರಿ ನಲ್ಲಿ ಗೋವಿನ ಜೋಳ ಸಂಶೋಧನಾ ಕೇಂದ್ರ, ಧಾರವಾಡ ಕೃಷಿ ವಿವಿಯಲ್ಲಿ ಡಾ. ಎಸ್.ವಿ. ಪಾಟೀಲ್ ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಸ್ಥಾಪನೆ, ಮಹಿಳೆಯ ರನ್ನು ಕೃಷಿ ಕಾರ್ಯದಲ್ಲಿ ಪ್ರೋತ್ಸಾಹಿಸಲು ಪ್ರತ್ಯೇಕ ಕೃಷಿ ಪ್ರಶಸ್ತಿ ಕೃಷಿ ಪಂಡಿತ ಪ್ರಶಸ್ತಿ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.
ರೇಷ್ಮೆ ಬೆಳೆಗಾರರಿಗೆ ಭರಪೂರ ಉತ್ತೇಜನ
ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿ ದ್ದು, ರೈತರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದ್ವಿತಳಿ ರೇಷ್ಮೆ ಗೂಡನ್ನು ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ರೈತರಿಗೆ ಪ್ರತಿ ಟನ್ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದ್ದಾರೆ.
ರೇಷ್ಮೆ ಮೊಟ್ಟೆ ಉತ್ಪಾದಿಸಿ ಶೈತ್ಯೀಕರಿಸಲು ಮದ್ದೂರು, ರಾಣೆಬೆನ್ನೂರು, ದೇವನಹಳ್ಳಿಯಲ್ಲಿ 15 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಶೈತ್ಯಾಗಾರ ನಿರ್ಮಿಸಲು ಉದ್ದೇಶಿಸಲಾ ಗಿದೆ. ಹಾವೇರಿ, ಕಲಬುರ್ಗಿಯಲ್ಲಿ ನಬಾರ್ಡ್ ನೆರವಿನೊಂದಿಗೆ 30 ಕೋಟಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ. ರೇಷ್ಮೆ ಬೆಳೆಗಾರರ ಆದಾಯ ಹೆಚ್ಚಿಸಲು ದ್ವಿತಳಿ ಬಿತ್ತನೆ ಗೂಡಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಪ್ರತಿ ಕೆಜಿಗೆ 50 ರೂ. ಹೆಚ್ಚಳ ಹಾಗೂ ನೂಲು ಬಿಚ್ಚಣಿಕೆದಾರರು ಉತ್ಪಾದಿಸಿದ ಕಚ್ಚಾ ರೇಷ್ಮೆಗೂ ಪ್ರೋತ್ಸಾಹ ಧನ ನೀಡಲಾಗುವುದು. ಮಂಡ್ಯದ ಕೆ.ಆರ್. ಪೇಟೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೇಷ್ಮೆ ಉತ್ಪಾದನಾ ಚಟುವಟಿಕೆಗೆ ಸಂಬಂಧಿಸಿದ ಸುಸಜ್ಜಿತ ತರಬೇತಿ ಕೇಂದ್ರ ಸ್ಥಾಪನೆ. ರೇಷ್ಮೆ ಬೆಳೆಗಾರರಿಗೆ ನ್ಯಾಯಯುತ ಹಾಗೂ ಪಾರದರ್ಶಕ ಬೆಲೆ ಒದಗಿಸಲು ಎಲ್ಲ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿ ಇ-ವೇಯಿಂಗ್ ಮತ್ತು ಇ-ಪೇಮೆಂಟ್ ಅನುಷ್ಠಾನಗೊಳಿಸುವುದು. ರೇಷ್ಮೆ ಗೂಡು ಮತ್ತು ಕಚ್ಚಾ ರೇಷ್ಮೆ ದರ ಕುಸಿತವಾದಾಗ ಕಚ್ಚಾ ರೇಷ್ಮೆಯನ್ನು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯಿಂದ ಖರೀದಿಸುವುದಾಗಿ ಭರವಸೆ ನೀಡಿದ್ದಾರೆ.
ಮುಖ್ಯಾಂಶಗಳು
1.ಬಳ್ಳಾರಿಯ ಹಗರಿ, ಬೆಳಗಾವಿಯ ಅಥಣಿ ತಾಲೂಕಿನಲ್ಲಿ ಕೃಷಿ ಕಾಲೇಜು ಸ್ಥಾಪನೆ
2.ಕೃಷಿ ಉತ್ಪನ್ನ ಮಾರಾಟ ಮತ್ತು ರಫ್ತು ಮಾಡಲು 50 ಕೋಟಿ ರೂ. ಮೀಸಲು
3.ಖಾಸಗಿ ಸಹಭಾಗಿತ್ವದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆಗೆ ಕ್ರಮ
4.ಕೃಷಿ, ತೋಟಗಾರಿಕೆ ವಿವಿ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿಗೆ ಉತ್ತೇಜನ
5.ತೊರವಿ ಗ್ರಾಮದಲ್ಲಿ ಅತ್ಯಾಧುನಿಕ ಶೈತ್ಯಾಗಾರ ನಿರ್ಮಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ