ತ್ರಿಶೂಲ ದೇವರ ಮನೆಯಲ್ಲಿಟ್ಟು ಪೂಜೆ ಮಾಡಲಿ: ರಾಮಲಿಂಗಾರೆಡ್ಡಿ
Team Udayavani, Oct 15, 2021, 9:00 PM IST
ಬೆಂಗಳೂರು:ಆಯುಧಪೂಜೆ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳು ಮಂಗಳೂರಿನಲ್ಲಿ ಸಾರ್ವಜನಿಕರಿಗೆ ತ್ರಿಶೂಲ ಹಂಚಿದ್ದು ಅದನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ತ್ರಿಶೂಲಕ್ಕೆ ಅದರದೇ ಆದ ವಿಶೇಷ ಸ್ಥಾನಮಾನ ನೀಡಲಾಗಿದೆ. ತ್ರಿಶೂಲ ಇಟ್ಟುಕೊಳ್ಳುವುದು ತಪ್ಪಲ್ಲ. ಅವುಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಲಿ. ಬೇರೆ ಇತರೆ ಕೆಲಸಕ್ಕೆ ಬಳಸುವುದು ಬೇಡ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಸಂಘ ಪರಿವಾರದ್ದೇ ಅಂತಿಮ ನಿರ್ಧಾರ. ಆಡ್ವಾಣಿ ಅವರು ಪಾಕಿಸ್ತಾನಕ್ಕೆ ಹೋಗಿ ಜಿನ್ನಾ ಅವರನ್ನು ಜಾತ್ಯಾತೀತ ನಾಯಕ ಎಂದು ಹೇಳಿದ ತಕ್ಷಣವೇ ಅವರನ್ನು ಅವರ ಸ್ಥಾನದಿಂದ ಕೆಳಗಿಳಿಸಿದರು. ಅಲ್ಲಿ ಸಂಘ ಪರಿವಾರ ಹೇಳಿದಂತೆ ಪ್ರಧಾನಮಂತ್ರಿಗಳೂ, ಕೇಂದ್ರ ಮಂತ್ರಿಗಳು ಹಾಗೂ ಬೇರೆ ರಾಜ್ಯಗಳ ಸಿಎಂ ಕೇಳಬೇಕು. ಇಲ್ಲದಿದ್ದರೆ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ, ಅವರಿಗೆ ಬೆಲೆ ಇಲ್ಲವಾಗುತ್ತದೆ. ಹೀಗಾಗಿ ಇಡೀ ಸರ್ಕಾರವೇ ಸಂಘ ಪರಿವಾರದ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಇದನ್ನೂ ಓದಿ:ದಚ್ಚು ಜೊತೆ “ಕ್ರಾಂತಿ”ಗೆ ಸಜ್ಜಾದ ಡಿಂಪಲ್ ಕ್ವೀನ್ ರಚಿತಾ ರಾಮ್
ಪರ್ಸೆಂಟೇಜ್ ರಾಜಕಾರಣ
ನಮ್ಮ ನಾಯಕರಾಗಲಿ, ಬೆರೆಯವರಾಗಲಿ ಲೋಕಾರೂಢಿಯಲ್ಲಿ ಮಾತನಾಡಿದ್ದಕ್ಕೆ ಬೆಲೆ ಕೊಡುವ ಅಗತ್ಯವಿಲ್ಲ. ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್, ವಿಶ್ವನಾಥ್ ಹಾಗೂ ಇತರೆ ನಾಯಕರು ಅಧಿಕೃತವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡಲಿ ಎಂದು ತಿಳಿಸಿದರು.
ಸಲೀಂ ಹಾಗೂ ಉಗ್ರಪ್ಪ ಅವರು ಮಾತನಾಡಿಕೊಂಡಿರುವುದಕ್ಕೆ ಯಾವುದೇ ಆಧಾರವಿಲ್ಲ. ಇದರಿಂದ ಪಕ್ಷಕ್ಕೆ ಮುಜುಗರ ಆಗಿದೆ. ಆದರೆ ಅದಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ ಎಂದು ಹೇಳಿದರು.