ಕೊಲ್ಲೂರು: ಆರ್ಥಿಕ ದುಸ್ಥಿತಿಯಲ್ಲಿ ಜನಜೀವನ
Team Udayavani, May 9, 2021, 6:10 AM IST
ಕೊಲ್ಲೂರು : ಕೋವಿಡ್ ಕರ್ಫ್ಯೂನಿಂದಾಗಿ ಪ್ರಸಿದ್ಧ ಯಾತ್ರಾ ಸ್ಥಳ ವಾಗಿರುವ ಇಲ್ಲಿನ ಪ್ರದೇಶ ಬಿಕೋ ಎನ್ನುತ್ತಿದ್ದು, ಇದು ಇಲ್ಲಿನ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಿದೆ. ಭಕ್ತರಿಗೆ ನಿರ್ಬಂಧವಿರುವುದರಿಂದ ಪೇಟೆ ನಿಸ್ತೇಜವಾಗಿದೆ.
ವ್ಯಾಪಾರ ವ್ಯವಹಾರದ ಮೇಲೆ ಪರಿಣಾಮ ಅಂಗಡಿ, ಹೋಟೆಲ್, ವಸತಿ ಗೃಹ ಗಳು ಬಂದ್ ಆಗಿರುವುದರಿಂದ ತೀವ್ರ ಆರ್ಥಿಕ ಹಿನ್ನಡೆಯಾಗಿದೆ. ಕಳೆದ ಬಾರಿಯ ಲಾಕ್ಡೌನ್ ಬಳಿಕ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ತುಸು ಆರ್ಥಿಕ ಚೇತರಿಕೆ ಕಂಡು ಬಂದಿದ್ದು ಮತ್ತೆ ಹಳಿಗೆ ಬರುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಎರಡನೇ ಅಲೆ ಲೆಕ್ಕಾಚಾರ ಬುಡಮೇಲು ಮಾಡಿದೆ. ಅಂಗಡಿ ವ್ಯಾಪಾರಕ್ಕೆ ಬಂಡವಾಳ ಹಾಕಿದವರು, ಲಾಡಿjಂಗ್ನವರು ದಿಕ್ಕೇ ತೋಚದಂತಾಗಿದ್ದಾರೆ.
ರಿಕ್ಷಾ, ಟ್ಯಾಕ್ಸಿ, ಜೀಪು ಮಾಲಕರ ಬವಣೆ
ದೇವಸ್ಥಾನಕ್ಕೆ ದೂರದ ಊರಿನ ಭಕ್ತರು ಆಗಮಿಸಿದಾಗ ಇಲ್ಲಿನ ಟ್ಯಾಕ್ಸಿ, ಜೀಪು ಮಾಲಕರಿಗೆ ನಿತ್ಯವೂ ಬಾಡಿಗೆ ಸಿಗುತ್ತಿತ್ತು. ಕೊಡಚಾದ್ರಿಗೂ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದರು. ಆದರೆ ಈಗ ಅವರ್ಯಾರೂ ಇಲ್ಲ. ಯಾತ್ರಾರ್ಥಿಗಳು ಇಲ್ಲದ್ದರಿಂದ ಆಟೋ, ಟ್ಯಾಕ್ಸಿಯವರು ಬ್ಯಾಂಕ್ ಸಾಲ ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಲಾಕ್ಡೌನ್ ತೆರವಾದರೂ ಭಕ್ತರ ಸಂಖ್ಯೆ ಹೆಚ್ಚಾಗಲು ಇನ್ನಷ್ಟು ಸಮಯ ಬೇಕಾಗಿರುವುದರಿಂದ ಅಲ್ಲಿಯವರೆಗೆ ಬದುಕಿನ ದಾರಿ ಏನು ಎಂಬ ಚಿಂತೆ ಇಲ್ಲಿನವರದ್ದಾಗಿದೆ.