ಮಹಾದೇವ ಭೈರಗೊಂಡ ಹತ್ಯಾಯತ್ನ ಪ್ರಕರಣದ ಪ್ರಮುಖ ಆರೋಪಿ ಸೆರೆ: ಬಂಧಿತರ ಸಂಖ್ಯೆ 28ಕ್ಕೆ ಏರಿಕೆ
Team Udayavani, Dec 8, 2020, 4:35 PM IST
ವಿಜಯಪುರ : ನಗರದ ಹೊರ ವಲಯದಲ್ಲಿ ಮಹಾದೇವ ಭೈರಗೊಂಡ ಮೇಲೆ ನಡೆದ ಹತ್ಯಾಯತ್ನ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಡಿವಾಳಯ್ಯ ಪಂಚಯ್ಯ ಹಿರೇಮಠ ಎಂಬವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಬೈರಗೊಂಡ ಹತ್ಯಾಯತ್ನ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 28 ಜನರನ್ನು ಬಂಧಿಸಲಾಗಿದೆ.
ನವೆಂಬರ್ 2 ರಂದು ಮಹದೆವ ಭೈರಗೊಂಡ ಪ್ರಯಾಣಿಸುತ್ತಿದ್ದ ಕಾರಿಗೆ ನಗರದ ಹೊರ ವಲಯದಲ್ಲಿರುವ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಾಳ ಕ್ರಾಸ್ ಬಳಿ ಟಿಪ್ಪರ್ ಡಿಕ್ಕಿ ಹೊಡೆಸಿ ಹತ್ಯೆಗೆ ಯತ್ನಿಸಲಾಗಿತ್ತು. ಅಪಘಾತ ಮಾಡಿದ ಬಳಿಕ ಕಲ್ಲು ತೂರಾಟ ಮಾಡಿ, ಮಚ್ಚಿನಿಂದ ದಾಳಿ ನಡೆಸಿ, ಗುಂಡಿನ ದಾಳಿ ಮಾಡಿದ್ದರು. ಘಟನೆಯಲ್ಲಿ ಮಹಾದೇವ ಭೈರಗೊಂಡ ದೇಹದೊಳಗೆ ಗುಂಡು ಸೇರಿಕೊಂಡು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.
ಘಟನೆಯ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವ ಹಾಗೂ ತನಿಖೆ ನಡೆಸಲು ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದಲ್ಲಿ ಪೊಲೀಸ್ ತನಿಖಾ ತಂಡವನ್ನು ರಚಿಸಲಾಗಿತ್ತು. ಪ್ರಮುಖ ಆರೋಪಿ ಮಡಿವಾಳಯ್ಯನ ಬಂಧನದೊಂದಿಗೆ ಈ ವರೆಗೆ 28 ಆರೋಪಿಗಳನ್ನು ಬಂಧಿಸಿದಂತಾಗಿದೆ. 33 ವರ್ಷದ ಮಡಿವಾಳಯ್ಯ ಉರ್ಫ್ ಮಡು ಘಟನೆಯ ಬಳಿಕ ತಲೆ ಮರೆಸಿಕೊಂಡಿದ್ದ 36 ದಿನಗಳ ನಂತರ ಬಂಧಿಸಿಸಲಾಗಿದೆ.
ಬಂಧಿತನಿಂದ ಕೃತ್ಯಕ್ಕೆ ಬಳಸಿದ ಒಂದು ಪಿಸ್ತೂಲ್, ಒಂದು ಜೀವಂತ ಗುಂಡು, ಒಂದು ಕಾರು, ಒಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿಯನ್ನು ವಾರದ ಹಿಂದೆಯೇ ಬಂಧಿಸಿದ್ದರೂ ಪೊಲೀಸರು ಆರೋಪಿಯ ಬಂಧನದ ಸುಳಿವು ನೀಡದೇ ವಿಳಂಬವಾಗಿ ಮಾಹಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸುವಂತೆ ಮಾಡಿದೆ.