ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಿ ಮಾಸ್ಕ್ ದಿನ ಆಚರಿಸಲು ಜಿಲ್ಲಾಡಳಿತಕ್ಕೆ ಸರಕಾರ ಸೂಚನೆ
Team Udayavani, Jun 17, 2020, 11:18 AM IST
ಬೆಂಗಳೂರು :ಜೂನ್ 18ರಂದು ಮಾಸ್ಕ್ ದಿನವನ್ನಾಗಿ ಆಚರಿಸುವ ಸಲುವಾಗಿ ರಾಜ್ಯ ಸರಕಾರ ಜಿಲ್ಲಾಡಳಿತಕ್ಕೆ ಪಾದಯಾತ್ರೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಸೂಚನೆ ನೀಡಿದೆ.
ಕೋವಿಡ್ ಸೋಂಕನ್ನು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು ಮುಖಗವಸನ್ನು ಧರಿಸುವುದು, ಸಾಬೂನಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಪಾಡುವುದು ಮುಖ್ಯವಾಗಿದ್ದು ಈ ವಿಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸರಕಾರ ಜೂನ್ 18 ಗುರುವಾರದಂದು ಮಾಸ್ಕ್ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.
ಆದುದರಿಂದ ಜಿಲ್ಲಾ ಮತ್ತು ತಾಲೂಕು ಆಡಳಿತವು ಚುನಾಯಿತ ಪ್ರತಿನಿಧಿಗಳು, ಗಣ್ಯ ವ್ಯಕ್ತಿಗಳು, ವೈದ್ಯಕೀಯ ಸಿಬ್ಬಂದಿಗಳನ್ನು ಸೇರಿಸಿಕೊಂಡು ಪಾದಯಾತ್ರೆಯ ಮೂಲಕ ಜನರಲ್ಲಿ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಸೂಚನೆ ನೀಡಿದೆ.
ಪಾದಯಾತ್ರೆ ನಡೆಸುವ ಜಿಲ್ಲಾಡಳಿತಕ್ಕೆ ಕೆಲವೊಂದು ಸೂಚನೆಗಳನ್ನು ಸರಕಾರ ಸೂಚಿಸಿದ್ದು
– ಜಿಲ್ಲಾಡಳಿತವು ಜಿಲ್ಲಾ /ತಾಲೂಕು /ಪಂಚಾಯತ್ ಅಥವಾ ಕಂದಾಯ ಇಲಾಖೆಯ ವಾರ್ಡ್ ಗಳಲ್ಲಿ ಪಾದಯಾತ್ರೆಯನ್ನು ಕೈಗೊಂಡು ಕೋವಿಡ್ ಸೋಂಕಿನ ಬಗ್ಗೆ ಜಾಗ್ರತಿ ಮೂಡಿಸಬೇಕು.
– ಪಾದಯಾತ್ರೆಯಲ್ಲಿ ೫೦ ಜನ ಮೀರದಂತೆ ನೋಡಿಕೊಳ್ಳಬೇಕು , ಜೊತೆಗೆ ಸಾಮಾಜಿಕ ಅಂತರ , ಕಡ್ಡಾಯ ಮಾಸ್ಕ್ ಧರಿಸುವುದು , ಆಗಿಂದಾಗ್ಯೆ ಕೈ ತೊಳೆಯುವುದು , ಸ್ಯಾನಿಟೈಸರ್ ಬಳಸುವುದರಿಂದ ಆಗುವ ಉಪಯೋಗಗಳ ಕುರಿತು ಜಾಗೃತಿ ಮೂಡಿಸುವುದು.