ಕೋವಿಡ್ ನಡುವೆಯೂ ಈಜುಕೊಳದಲ್ಲಿ ಸುಧಾಕರ್ ಮಸ್ತಿ: ಟೀಕೆಗಳ ಬೆನ್ನಲ್ಲೇ ಟ್ವೀಟ್ ಡಿಲೀಟ್
Team Udayavani, Apr 13, 2020, 11:00 AM IST
ಬೆಂಗಳೂರು: ದೇಶಾದ್ಯಂತ ಜನರು ಕೋವಿಡ್-19 ಸೋಂಕಿನ ಲಾಕ್ ಡೌನ್ ಕಾರಣದಿಂದ ಪರಿತಪಿಸುತ್ತಿದ್ದಾರೆ. ಆದರೆ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ತಮ್ಮ ಈಜುಕೊಳದಲ್ಲಿ ಈಜುತ್ತಾ ಆಡುತ್ತಾ ಇರುವ ಫೊಟೋವನ್ನು ಅವರು ಟ್ವೀಟ್ ಮಾಡಿದ್ದು, ಇದೀಗ ಟೀಕೆಗೆ ಗುರಿಯಾಗಿದ್ದಾರೆ.
ಸಚಿವ ಸುಧಾಕರ್ ಅವರು ತಮ್ಮ ಕುಟುಂಬಿಕರೊಂದಿಗೆ ಈಜುಕೊಳದಲ್ಲಿರುವ ಫೊಟೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು. ತುಂಬಾ ಸಮಯದ ನಂತರ ಮಕ್ಕಳೊಂದಿಗೆ ಈಜುತ್ತಿದ್ದೇನೆ. ಇಲ್ಲೂ ಸಾಮಾಜಿಕ ಅಂತರ ಕಾಪಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಸಚಿವರ ಈ ಟ್ವೀಟ್ ಗೆ ಟೀಕೆ ವ್ಯಕ್ತವಾಗಿದ್ದು, ಸರಕಾರದ ಪ್ರತಿನಿಧಿಯಾಗಿ ಇಂತಹ ಸಂಕಷ್ಟದ ಸಮಯದಲ್ಲಿ ಈಜು ಕೊಳದಲ್ಲಿ ನಿಮ್ಮ ಅಂತರ ಅಯ್ಯೋ ದೇವರೆ, ಎಲ್ಲಾ ವೈದ್ಯರೂ ಮತ್ತು ಪೊಲೀಸ್ ಇಲಾಖೆಯವರು ಕಷ್ಟ ಪಡುವಾಗ ಇದೆಲ್ಲಾ ಬೇಕಿತ್ತಾ, ಇದನ್ನು ಇಂತಹ ಸಮಯದಲ್ಲಿ ಪೋಸ್ಟ್ ಮಾಡುವ ಅವಶ್ಯಕತೆಯಿರಲಿಲ್ಲ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ಟ್ವೀಟ ಗೆ ಭಾರಿ ಟೀಕೆಗಳು ಎದುರಾದ ಹಿನ್ನಲೆಯಲ್ಲಿ ಸಚಿವ ಸುಧಾಕರ್ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.