ಸಿಗಲಿದೆ ಇನ್ನಷ್ಟು ವಿನಾಯಿತಿ? ಲಾಕ್ ಡೌನ್ 3 ಮುಕ್ತಾಯ; ಹೊಸ ನಿಯಮ ನಾಳೆ
Team Udayavani, May 17, 2020, 6:15 AM IST
ಬೆಂಗಳೂರು: ಮೂರನೇ ಹಂತದ ಲಾಕ್ಡೌನ್ ರವಿವಾರ ಮುಕ್ತಾಯವಾಗಲಿದ್ದು, ನಾಲ್ಕನೇ ಹಂತ ಸೋಮವಾರದಿಂದ ಆರಂಭವಾಗಲಿದೆ. ಈ ವೇಳೆ ಕಂಟೈನ್ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಬಹುತೇಕ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಿ ಸಾಮಾನ್ಯ ಸ್ಥಿತಿ ನಿರ್ಮಿಸುವ ಬಗ್ಗೆ ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ.
ಈ ಸಂಬಂಧ ರಾಜ್ಯ ಸರಕಾರವು ಕೇಂದ್ರ ಮಾರ್ಗಸೂಚಿಯ ನಿರೀಕ್ಷೆಯಲ್ಲಿದ್ದು, ಅದನ್ನು ಆಧರಿಸಿ ರಾಜ್ಯ ಮಾರ್ಗಸೂಚಿ ಸಿದ್ಧಪಡಿಸಲಿದೆ. ವಲಯ ಮತ್ತು ಕಂಟೈನ್ಮೆಂಟ್ ಪ್ರದೇಶದ ನಿರ್ಬಂಧಿತ ವ್ಯಾಪ್ತಿ ಗುರುತಿಸುವ ಅಧಿಕಾರವನ್ನು ಕೇಂದ್ರವು ರಾಜ್ಯಗಳಿಗೇ ನೀಡಿದರೆ ಕಂಟೈನ್ಮೆಂಟ್ ಪ್ರದೇಶ ಬಿಟ್ಟು ಉಳಿದೆಡೆ ಸಹಜ ಸ್ಥಿತಿ ನಿರ್ಮಾಣವಾಗುವ ನಿರೀಕ್ಷೆ ಮೂಡಿದೆ.ಅದಕ್ಕೆ ಪುಷ್ಟಿ ನೀಡುವಂತೆ ಬಿಎಂಟಿಸಿಯು ಮೇ 18ರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಸಿಬಂದಿಗೆ ಸೂಚಿಸಿದೆ.
ನಾಲ್ಕನೇ ಹಂತದ ಲಾಕ್ಡೌನ್ನಲ್ಲಿ ಹೆಚ್ಚಿನ ನಿರ್ಬಂಧಗಳಿರುವುದಿಲ್ಲ. ಜನಜೀವನ ಸಹಜ ಸ್ಥಿತಿಗೆ ಮರಳಬಹುದು. ಕೇಂದ್ರವು ಮೇ 17ರ ಅನಂತರ ಪಂಚತಾರಾ ಹೊಟೇಲ್ ಹೊರತುಪಡಿಸಿ ಉಳಿದ ಬಹುತೇಕ ನಿರ್ಬಂಧ ಸಡಿಲಿಸಬಹುದು ಎಂಬುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಶುಕ್ರವಾರ ಹೇಳಿದ್ದರು.
ಸೆಲೂನ್ಗಳು, ಫಿಟ್ನೆಸ್ ಕೇಂದ್ರಗಳು, ಹೊಟೇಲ್ಗಳಲ್ಲಿ ಚಟುವಟಿಕೆ ಆರಂಭಕ್ಕೂ ಅವಕಾಶ ನೀಡುವ ನಿರೀಕ್ಷೆಯಲ್ಲಿ ರಾಜ್ಯ ಸರಕಾರವಿದೆ. ಕಂಟೈನ್ಮೆಂಟ್ ಪ್ರದೇಶ ಬಿಟ್ಟು ಬಹುತೇಕ ಸಹಜ ಸ್ಥಿತಿ ನಿರ್ಮಾಣಕ್ಕೆ ಪೂರಕ ಕ್ರಮಗಳನ್ನು ಹಂತಹಂತವಾಗಿ ಕೈಗೊಳ್ಳಲು ಚಿಂತಿಸಿದೆ. ಕೇಂದ್ರದ ಮಾರ್ಗಸೂಚಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ.
ಮತ್ತೆ 36 ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಹಾವಳಿ ಹೆಚ್ಚಾಗು ತ್ತಿದ್ದು, ಶನಿವಾರ ಬೆಂಗಳೂರಿನಲ್ಲಿ 14 ಪ್ರಕರಣಗಳು ಸೇರಿ ಒಟ್ಟು 36 ಪ್ರಕರಣಗಳು ದೃಢಪಟ್ಟಿವೆ.ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 1,092ಕ್ಕೆ ಏರಿದೆ.ಕಳೆದ 48 ತಾಸುಗಳಲ್ಲಿ 105 ಮಂದಿಗೆ ಸೋಂಕು ದೃಢವಾಗಿದೆ.ಬೆಂಗಳೂರಿನಲ್ಲಿ ವರದಿಯಾದ ಎಲ್ಲ ಪ್ರಕರಣಗಳು ಶಿವಾಜಿನಗರದ ಸೋಂಕುಪೀಡಿತ ಹೊಟೇಲ್ ಹೌಸ್ ಕೀಪಿಂಗ್ ಸಿಬಂದಿಯ ದ್ವಿತೀಯ ಸಂಪರ್ಕದಿಂದ ಹರಡಿದವು ಆಗಿವೆ.
ಕೆಲವು ದಿನಗಳ ಹಿಂದೆ ಹಸುರು ವಲಯ ದಲ್ಲಿದ್ದ ಹಾಸನದಲ್ಲಿ ಶನಿವಾರ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಶನಿವಾ ರದ 36 ಪ್ರಕರಣಗಳಲ್ಲಿ 10ಕ್ಕೆ ಮಹಾರಾಷ್ಟ್ರದ ನಂಟಿದ್ದರೆ, ತಲಾ ಒಂದು ದುಬಾೖ, ಅಹ್ಮದಾಬಾದ್ ಪ್ರಯಾಣ ಹಿನ್ನೆಲೆಯವು ಎಂದು ಆರೋಗ್ಯ ಇಲಾಖೆ ತಿಳಿಸಿದೆ.