ಬಜೆಟ್ನಲ್ಲಿ ಮೈಷುಗರ್ಗೆ ಸಿಗುತ್ತಾ ಮುಕ್ತಿ !
ಸರ್ಕಾರಿ ಸ್ವಾಮ್ಯದಲ್ಲಿ ಉಳಿಸುವಂತೆ ಸದನದಲ್ಲಿ ಚರ್ಚೆ ನಡೆಸಲು ಜನಪ್ರತಿನಿಧಿಗಳಿಗೆ ಆಗ್ರಹ
Team Udayavani, Mar 4, 2021, 10:00 PM IST
ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಸರ್ಕಾರ ಈಗಾಗಲೇ 40 ವರ್ಷಗಳ ಕಾಲ ಗುತ್ತಿಗೆಗೆ ನೀಡಲು ನಿರ್ಧರಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಈ ಬಾರಿಯ ಬಜೆಟ್ನಲ್ಲಿ ಕಾರ್ಖಾನೆ ಆರಂಭದ ಬಗ್ಗೆ ನಿರ್ಧಾರವಾಗಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ.
ಅದರಂತೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಳ್ಳುವಂತೆ ಸದನದಲ್ಲಿ ಚರ್ಚೆ ನಡೆಸುವಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಒತ್ತಾ ಯಗಳು ಕೇಳಿ ಬರುತ್ತಿವೆ. ಒಂದೆಡೆ ರೈತರು ಕಾರ್ಖಾನೆ ಆರಂಭವಾದರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದರೆ, ಮತ್ತೂಂದೆಡೆ ಸಂಘಟನೆಗಳು ಸರ್ಕಾರಿ ಹಾಗೂ ಒ ಅಂಡ್ ಎಂ ಮೂಲಕ ಆರಂಭಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಕಾರ್ಮಿಕರಿಗೆ ವಿಆರ್ಎಸ್: 40 ವರ್ಷಗಳ ಕಾಲ ಖಾಸಗಿಗೆ ನೀಡುವ ಹಿನ್ನೆಲೆಯಲ್ಲಿ ಈಗಾಗಲೇ ಬಹುತೇಕ ನೌಕರರಿಂದ ವಿಆರ್ಎಸ್ ಪಡೆದುಕೊಳ್ಳಲಾಗಿದೆ. ಕೆಲವು ನೌಕರರು ವಿಆರ್ಎಸ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಅವರ ಮನವೊಲಿಕೆಯು ಮುಂದುವರಿದಿದೆ.
ರೈತರಿಗೆ ಸಂಕಷ್ಟ: ಈಗಾಗಲೇ ಕೆಲವು ವರ್ಷಗಳಿಂದ ಕಾರ್ಖಾನೆ ಆರಂಭವಾಗದಿರುವುದರಿಂದ ಈ ವ್ಯಾಪ್ತಿಯ ಕಬ್ಬು ಬೆಳೆಗಾರರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಕಬ್ಬು ಸಾಗಾಣಿಕೆಯಲ್ಲೂ ತಾರತಮ್ಯ, ರಾಜಕೀಯ ಪ್ರಭಾವಗಳು ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಕಾರ್ಖಾನೆ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ.
ಈ ವರ್ಷವೂ ಕಾರ್ಖಾನೆ ಆರಂಭ ನಿರೀಕ್ಷೆ: ಪ್ರಸ್ತುತ ವರ್ಷವೂ ಕಾರ್ಖಾನೆ ಆರಂಭವಾಗುವ ಯಾವುದೇ ಮುನ್ಸೂಚನೆಗಳು ಕಾಣುತ್ತಿಲ್ಲ. ಈಗಾಗಲೇ ಕಾರ್ಖಾನೆ ಪುನಶ್ಚೇತನಗೊಳಿಸಲು ಸರ್ಕಾರ ಮುಂದಾಗಬೇಕಿತ್ತು. ಆದರೆ, ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ. ಮುಂದಿನ ಜುಲೈನೊಳಗೆ ಕಾರ್ಖಾನೆ ಆರಂಭಿಸಬೇಕಾದರೆ ಈಗಿನಿಂದಲೇ ಸಿದ್ಧತೆಗಳು ನಡೆಯಬೇಕು. ಕಾರ್ಖಾನೆ ವ್ಯಾಪ್ತಿಯಲ್ಲಿ ರೈತರು ಕಬ್ಬು ಬೆಳೆದಿದ್ದು, ಮೂರ್ನಾಲ್ಕು ತಿಂಗಳೊಳಗೆ ಕಟಾವಿಗೆ ಬರಲಿದೆ. ಅಷ್ಟರಲ್ಲಿ ಕಾರ್ಖಾನೆ ಆರಂಭಿಸಬೇಕು ಎಂದು ರೈತ ಮುಖಂಡರ ಒತ್ತಾಯವಾಗಿದೆ.
ವೇತನದ ಆರ್ಥಿಕ ಹೊರೆ: ಕಾರ್ಖಾನೆಯಲ್ಲಿ ಇನ್ನೂನೂರು ಮಂದಿ ನೌಕರರು ವಿಆರ್ಎಸ್ ಪಡೆಯದೇ ಹಿಂದೇಟು ಹಾಕಿದ್ದಾರೆ. ಇತ್ತ ಕಾರ್ಖಾನೆಯೂ ನಡೆಯುತ್ತಿಲ್ಲ. ಇದರಿಂದ ವೇತನ ಭಾರ ಹೆಚ್ಚುತ್ತಿದೆ. ಕಾರ್ಖಾನೆಯಲ್ಲಿ ವಿವಿಧ ವಿಭಾಗಗಳಲ್ಲಿ ಲಕ್ಷಾಂತರರೂ. ವೇತನಕ್ಕೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಕಾರ್ಖಾನೆ ನಡೆಯದ ಹಿನ್ನೆಲೆಯಲ್ಲಿ ಆರ್ಥಿಕಹೊರೆ ಹೆಚ್ಚುತ್ತಿದೆ. ಕೆಲಸವಿಲ್ಲದಿದ್ದರೂ ಪ್ರತಿ ತಿಂಗಳು ವೇತನ ಪಡೆಯುತ್ತಿದ್ದಾರೆ. ಕಾರ್ಮಿಕರು ಹಾಗೂ ನೌಕರರಿಗೆ ಮಾತ್ರ ಪ್ರತಿ ತಿಂಗಳು ಸಮರ್ಪಕವಾಗಿ ವೇತನ ನೀಡುತ್ತಿಲ್ಲ.
ಅನುಪಯುಕ್ತ ವಸ್ತುಗಳ ಮಾರಾಟ ಪ್ರಕ್ರಿಯೆ: ಸರ್ಕಾರ ಅಧಿಕಾರಿಗಳು ಹಾಗೂ ನೌಕರರ ವೇತನಕ್ಕೆ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿರುವ ಅನುಪಯುಕ್ತ ವಸ್ತುಗಳನ್ನು ಮಾರಾಟ ಮಾಡಿ ವೇತನ ಪಾವತಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿಅಧಿಕಾರಿಗಳ ವರದಿಯನ್ವಯ 25 ಕೋಟಿ ರೂ.ಅನುಪಯುಕ್ತ ವಸ್ತುಗಳಿವೆ. ಆದರೆ, ಇದನ್ನು ಕೇವಲ2.5 ಕೋಟಿ ರೂ.ಗೆ ಟೆಂಡರ್ ಕರೆಯಲಾಗಿತ್ತು. ಆದರೆ,ಅದರ ಪ್ರಕ್ರಿಯೆ ಇನ್ನೂ ವಿಳಂಬವಾಗಿದೆ.
ರಾಜಕೀಯ ಮೇಲಾಟ: ಕಾರ್ಖಾನೆ ಪ್ರಾರಂಭಿಸುವ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ಕಾರ್ಖಾನೆ ಆರಂಭದ ಲಾಭ ಪಡೆಯಲು ಕಸರತ್ತು ಪ್ರಾರಂಭವಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ, ಈ ಬಾರಿ ಬಜೆಟ್ನಲ್ಲಿ ಕಾರ್ಖಾನೆ ಯನ್ನು40 ವರ್ಷಗಳ ಕಾಲ ಖಾಸಗಿಗೆ ಗುತ್ತಿಗೆ ನೀಡಲು ಅನುಮೋದನೆ ಪಡೆಯಲಾಗುವುದು ಎಂದು ಹೇಳಿದ್ದಾರೆ. ಕಾರ್ಖಾನೆ ಆರಂಭದ ಬಗ್ಗೆ ಮೊದಲಿನಿಂದಲೂ ಚರ್ಚೆನಡೆಯುತ್ತಲೇ ಇದೆ. ಆದರೆ, ಇದುವರೆಗೂ ಯಾವುದೇಕ್ರಮ ಆಗದಿರುವುದು ರೈತರಲ್ಲಿ ಬೇಸರ ತರಿಸಿದೆ.
ಎಚ್.ಶಿವರಾಜು