ದೇಶ, ದೇಹ ರಕ್ಷಣೆಗೆ ಬೇಕಿದೆ ಆಂತರ್ಯದ ಬಲ…
Team Udayavani, Jul 1, 2021, 6:20 AM IST
ಎಲ್ಲಿಂದಲೋ ಒಳನುಸುಳಿ ಬಂದು ಅಂಕೆಗೆ ಸಿಗದಂತೆ ಜೀವವನ್ನು ಆವರಿಸಿಕೊಂಡ ವೈರಾಣು ಕಣಗಳ ಹಾವಳಿಯಲ್ಲಿ ಜನರ ಜೀವ-ಜೀವನಗಳು ದಾರುಣವಾಗಿ ನಲು ಗಿದ ಹೊತ್ತಿನಲ್ಲಿಯೇ ಗಡಿಯಲ್ಲಿ, ನೆರೆಹೊರೆಯವರಾದ ಚೀನಿಯರ ದಾಳಿಯಾಗಿತ್ತು. ದೇಶರಕ್ಷಣೆ ಮತ್ತು ದೇಹ ರಕ್ಷಣೆಗಳೆಂಬ ವಿಭಿನ್ನವೂ ಗಂಭೀರವೂ ಆದ ಆತಂಕ ಮತ್ತು ಸವಾಲುಗಳನ್ನು ಏಕಕಾಲಕ್ಕೆ ಎದುರುಗೊಳ್ಳಬೇಕಾದ ವಿಪರ್ಯಾಸದ ಸಂದರ್ಭವನ್ನು ದೇಶ ಅನುಭವಿಸಿತ್ತು. ಇದೀಗ ಚೀನದಿಂದಲೇ ಶಕ್ತಿ ಪಡೆದು ಬಂತೆಂದು ಹೇಳಲಾಗುತ್ತಿರುವ ವೈರಾಣು ರೋಗದೊಟ್ಟಿಗೆ, ಅದೇ ಚೀನದೊಂದಿಗಿನ ಗಡಿ ವಿವಾದದಲ್ಲಿ ಶಾಶ್ವತ ಸಂಧಾನ ಸೂತ್ರವೂ ಗೋಚರಿಸಬೇಕಿದೆ. ಜತೆಗದು ಜನತೆಯನ್ನು ಆತ್ಮಶೋಧನೆಗೂ ಈಡುಮಾಡುತ್ತಿದೆ.
ನಮ್ಮ ದೇಶ ಮತ್ತು ದೇಹರಕ್ಷಣ ವ್ಯವಸ್ಥೆಯಲ್ಲಿ ಸಾಮ್ಯತೆ ಇದೆ. ದೇಶದ ಕಾವಲಿಗೆ ರಕ್ಷಣ ಪಡೆಗಳಿರುವ ಹಾಗೆ ಜೀವಿಗಳ ದೇಹ ಕಾಯಲು ಒಳಗೊಂದು ರೋಗನಿರೋಧಕ ವ್ಯವಸ್ಥೆ ಜಾಗೃತವಾಗಿರುತ್ತದೆ. ಸೇನಾಶಕ್ತಿಯನ್ನು ಪುನಶ್ಚೇತನಗೊಳಿಸಲು ಆಗಿಂದಾಗ್ಗೆ ಸೈನಿಕ ತರಬೇತಿ, ಸಾಮರ್ಥ್ಯ ಹೆಚ್ಚಳ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಹೊಸ ತಂತ್ರಜ್ಞಾನಗಳ ಅಳವಡಿಕೆಗಳಂತಹ ಕ್ರಮಗಳಿರುವಂತೆ ದೇಹದ ರೋಗ ನಿರೋಧಕ ವ್ಯವಸ್ಥೆಯ ಬಲವೃದ್ಧಿಗೂ ಕೈಗೊಳ್ಳಬೇಕಾದ ಅವಶ್ಯ ಕ್ರಮಗಳಿವೆ. ನಿಯಮಿತ ವ್ಯಾಯಾಮ, ಸಕಾರಾತ್ಮಕ ಮಾನಸಿಕತೆೆ, ಪ್ರತಿ ರೋಧಕ ಬಿಳಿ ರಕ್ತಕಣಗಳ ಸಾಮರ್ಥ್ಯ ಹೆಚ್ಚಿಸಬಲ್ಲ ಪೌಷ್ಟಿಕಾಂಶಗಳು ಮತ್ತು ಅಗತ್ಯ ಜೀವರಾಸಾ ಯನಿಕ ಕ್ರಿಯೆಗಳನ್ನು ಉತ್ತೇಜಿಸುವ ಅಥವಾ ನಿಯಂತ್ರಿಸಬಲ್ಲ ಖನಿಜಾಂಶಗಳುಳ್ಳ ಸಂತುಲಿತ ಆಹಾರ ಸೇವನೆಯು ಬಹು ಮಹತ್ವದ್ದು. ಅಂತಹ ಮನಃಸ್ಥಿತಿ-ತಯಾರಿಯಲ್ಲಷ್ಟೇ ವೈರಿ ಗಳಿಂದ ದೇಶ ವನ್ನು ಹಾಗೂ ವೈರಾಣುಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.
ಕೋವಿಡ್-19 ಸೋಂಕಿತರು ಸಾವನ್ನಪ್ಪುತ್ತಿರುವುದು ರೋಗನಿರೋಧಕ ಶಕ್ತಿಯ ಕೊರತೆಯಿಂದಲೇ ಹೊರತು ಕೇವಲ ವೈರಸ್ನಿಂದಲ್ಲ ಎಂಬುದು ಬ್ರಿಟನ್ ಸಂಶೋಧಕರು ನಡೆಸಿದ ಅಧ್ಯಯನದ ವೇಳೆ ಸಾಬೀತಾಗಿದೆ. ರೋಗವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಇಲ್ಲದವರಲ್ಲಿ ಮಾತ್ರವೇ ಅಂಗಾಂಗಗಳು ಹಾನಿಗೀಡಾಗಿ ಸಾವು ಸಂಭವಿಸುತ್ತಿದೆ ಎನ್ನುತ್ತದೆ ಅಧ್ಯಯನ. ನಮ್ಮ ಪ್ರತಿರೋಧ ವ್ಯವಸ್ಥೆಯಲ್ಲಿರುವ ಲಿಂಫೋಸೈಟ್ ಮತ್ತಿತರ ಕೋಶಗಳು ಮತ್ತು ಪ್ರತಿಕಾಯ ಪ್ರೊಟೀನ್ಗಳು ಹುಟ್ಟಿನಿಂದ ಸಾವಿನವರೆಗಿನ ಪ್ರತೀ ಕ್ಷಣ ವನ್ನೂ ಮುತ್ತಿಕೊಳ್ಳಬಹುದಾದ ರೋಗಾಣು ಅಥವಾ ರಾಸಾಯನಿಕಗಳ ಸೋಂಕಿನಿಂದ ದೇಹವನ್ನು ಅಗೋಚರ ಶಕ್ತಿಯಾಗಿ, ರûಾಕವಚವಾಗಿ ಕಾಪಾಡುತ್ತವೆ. ಧನಾತ್ಮಕ ಚಿಂತನೆ ಗಳು ರೋಗನಿರೋಧಕತೆಯನ್ನು ಬಲಗೊಳಿಸುವುದು ಕೂಡ ಅಧ್ಯಯನದಿಂದ ದೃಢವಾಗಿರುವ ಸಂಗತಿ.
ಸೋಂಕಿಗೆ ಚಿಕಿತ್ಸೆ ಪಡೆಯುವುದಕ್ಕಿಂತಲೂ ಸೋಂಕು ತಗಲದಂತೆ ಮುನ್ನೆಚ್ಚರಿಕೆ ವಹಿಸುವುದು ಯಾವತ್ತಿಗೂ ಕ್ಷೇಮ. ಅನಗತ್ಯ ಭೀತಿ ತೊರೆದು, ಸಮುದಾಯಕ್ಕೆ ವ್ಯಾಪಿಸಿರುವ ವೈರಾಣು ಪ್ರಸರಣೆಯನ್ನು ನಿಯಂತ್ರಿಸಲು ಕಾಳಜಿ ವಹಿಸುವುದರ ಜತೆಯಲ್ಲಿ ವೈಯಕ್ತಿಕ ರೋಗನಿರೋಧ ಕತೆಯಲ್ಲಿ ದೇಹವನ್ನು ಸದೃಢಗೊಳಿಸಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕಾದ ತುರ್ತಿದೆ. ಸಂತುಲಿತ ಆಹಾರ, ವ್ಯಾಯಾಮ ಕ್ರಮಗಳು ಹಲವು ವಿಧಗಳಲ್ಲಿ ಪ್ರತ್ಯೇಕವಾಗಿ ರಕ್ತದೊತ್ತಡ, ಮಧುಮೇಹ, ಕೊಲೆ ಸ್ಟ್ರಾಲ್ಗಳನ್ನು ನಿಯಂತ್ರಿಸುವುದಲ್ಲದೆ ಪೋಷಕಾಂಶಗಳು ಉತ್ಕರ್ಷಣ ನಿರೋಧಕಗಳಾಗಿ, ನೋವು ನಿವಾರಕಗಳಾಗಿ ಮಾತ್ರವಲ್ಲದೆ ಬಿಳಿಯ ರಕ್ತಕಣ, ಸೈಟೋ ಕೈನಿನ್ ಮತ್ತು ಅಗತ್ಯ ಕಿಣ್ವಗಳ ಉತ್ಪಾದನೆಗೆ ಉತ್ತೇಜಕ ಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ವಿಷಾಣುಗಳನ್ನು ಮೀರಬಲ್ಲ ಪ್ರತಿರೋಧ ವ್ಯವಸ್ಥೆ ಯನ್ನು ಸಶಕ್ತವಾಗಿಡುತ್ತವೆ.
ಇನ್ನು ಮಿಲಿಟರಿ ಶಕ್ತಿಯನ್ನು ಹೊಂದಲೇಬೇಕಿರುವ ಅನಿವಾರ್ಯದಲ್ಲಿರುವ ಬಹುತೇಕ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಆದಾಯದ ಬಹುದೊಡ್ಡ ಪಾಲನ್ನು ಸೇನೆಗೆ ವಿನಿಯೋಗಿಸುತ್ತಿವೆ. ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ಸಾರ್ವಜನಿಕ ಹಿತವನ್ನು ರಕ್ಷಿಸಿಕೊಳ್ಳಲು ಸೇನಾಬಲ, ಯುದ್ಧಕ್ಕಿಂತಲೂ ರಾಜತಾಂತ್ರಿಕ ಪ್ರೌಢಿಮೆಗಳು ಅಗತ್ಯ ವೆನಿಸುತ್ತವೆ. ಜಪಾನ್ ಮತ್ತು ಇಸ್ರೇಲ್ನಂತಹ ದೇಶಗಳು ತೋರುತ್ತಿರುವ ಸಂಕಲ್ಪ, ಪುಟಿದೆದ್ದ ವಿಶಿಷ್ಟ ಮಾದರಿಗಳಲ್ಲಿ ಕಲಿಯಬೇಕಾದ ನೀತಿಪಾಠಗಳಿವೆ. ಶ್ರಮಸಂಸ್ಕೃತಿಯಿಂದ ಪ್ರೇರಿತವಾದ ಸ್ವಾವಲಂಬಿ ಮತ್ತು ಸದೃಢ ಆರ್ಥಿಕ ನೀತಿ ಗಳು, ದೇಶೀಯ ಉತ್ಪಾದಕತೆ-ಮಾರುಕಟ್ಟೆ ವ್ಯವಸ್ಥೆ, ಸುಸ್ಥಿರ ಅಭಿವೃದ್ಧಿ, ಸರಳ ಜೀವನಶೈಲಿಗಳನ್ನು ಅಳವಡಿಸಿ ಕೊಳ್ಳು ವುದೇ ಯೋಗ್ಯಮಾರ್ಗ. ನಿಧಾನವಾದರೂ ದೃಢವಾಗಿ ಮೇಲೇಳಬೇಕು, ಮೇಲೇರಬೇಕು. ದುರಿತಕಾಲ ದಲ್ಲಿ ನಮ್ಮನ್ನು ಕಾಯುವುದು ಭಾವನಾತ್ಮಕ ಘೋಷಣೆಗಳಲ್ಲ. ಅರಿವು- ಬದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕಾದ ವಿವೇಚನೆ.
– ಸತೀಶ್ ಜಿ.ಕೆ., ತೀರ್ಥಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ