ದರ ಏರಿಕೆ, ರೂಟ್ ಕಡಿತ, ಪ್ರಯಾಣಿಕರ ಕೊರತೆ : ಉಡುಪಿಯಲ್ಲಿ ನರ್ಮ್ ಬಸ್ ಕಲೆಕ್ಷನ್ ಕುಸಿತ
ವಿರಳ ಸಂಖ್ಯೆಯ ಬಸ್ಗಳು;
Team Udayavani, Mar 2, 2022, 11:34 AM IST
ಉಡುಪಿ: ನಗರ ಸಾರಿಗೆ (ನರ್ಮ್ ಬಸ್) ದರ ಏರಿಕೆ, ಎಲ್ಲ ರೂಟ್ಗಳಿಗೆ ಬಸ್ ಸೇವೆ ಇಲ್ಲದಿರುವುದು, ಒಂದು ರೂಟ್ಗೆ ಒಂದೇ ಬಸ್ ಓಡುತ್ತಿರುವ ಕಾರಣ ಜನರು ನರ್ಮ್ ಬಸ್ ಪ್ರಯಾಣದಿಂದ ದೂರ ಉಳಿಯಲಾರಂಭಿಸಿದ್ದಾರೆ. ಇದರಿಂದಾಗಿ ಕೆಎಸ್ಆರ್ಟಿಸಿ ನರ್ಮ್ ಬಸ್ನಲ್ಲಿ ಶೇ.50 ರಷ್ಟು ಕಲೆಕ್ಷನ್ ಆದಾಯ ಕುಸಿತವಾಗಿದೆ ಎನ್ನಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ನರ್ಮ್ ಬಸ್ ಸೌಲಭ್ಯ ಜನರಿಂದ ದೂರವಾಗುವ ಸಾಧ್ಯತೆಗಳಿವೆ.
ಒಂದು ತಿಂಗಳ ಹಿಂದೆ ಉಡುಪಿ, ಮಂಗಳೂರಿನಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ದರ ಏರಿಕೆ ಮಾಡಿದೆ. ಸಾರ್ವಜನಿಕ ವಿರೋಧ ನಡುವೆಯೂ ದರ ಏರಿಕೆ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಇಡೀ ರಾಜ್ಯದಲ್ಲಿ ಎಲ್ಲಿಯೂ ದರ ಏರಿಸದೆ ಉಡುಪಿ (ಕುಂದಾಪುರ ಹೊರತುಪಡಿಸಿ), ಮಂಗಳೂರಿನಲ್ಲಿ ಮಾತ್ರ ದರ ಏರಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ನರ್ಮ್ ಬಸ್ ಆರಂಭಗೊಂಡ ಹಂತದಲ್ಲಿ 5 ರೂ., ದರವಿತ್ತು. ಅನಂತರ ಅದನ್ನು 8 ರೂ.,ಗೆ ಪರಿಷ್ಕರಿಸಲಾಯಿತು. ತಿಂಗಳ ಹಿಂದೆ ಸಾರಿಗೆ ಪ್ರಾಧಿಕಾರವು 2 ರೂ.ಗೆ ಪರಿಷ್ಕರಿಸಿ ಏರಿಕೆ ಮಾಡಿದ್ದು, ಇದೀಗ ನರ್ಮ್ ಬಸ್ ಪ್ರಯಾಣಕ್ಕೆ ಕನಿಷ್ಠ ಟಿಕೆಟ್ ದರ 10 ರೂ., ಇದೆ.
ನಗರದಲ್ಲಿ ಗರಡಿಮಜಲು, ಪಡುಕೆರೆ, ಕೆಮ್ಮಣ್ಣು ಹೂಡೆ, ಮರ್ಣೆ, ಅಲೆವೂರು, ತೊಟ್ಟಂ, ತೆಂಕನಿಡಿಯೂರು-ಹಂಪನಕಟ್ಟೆ ರೂಟ್ಗಳಲ್ಲಿ 10 ನರ್ಮ್ ಬಸ್ಗಳು ಓಡಾಡುತ್ತಿವೆ. ಬಡವರು, ಕೂಲಿ ಕಾರ್ಮಿಕರು ಸ್ಥಳೀಯವಾಗಿ ಸಾರಿಗೆ ಸೇವೆ ನೆಚ್ಚಿಕೊಂಡಿ¨ªಾರೆ. ಆದರೆ ಕೋವಿಡ್ ಮಹಾಮಾರಿಯಿಂದ ಎದುರಾದ ನಾನಾ ಸಂಕಷ್ಟಗಳ ನಡುವೆ ಬಸ್ ಪ್ರಯಾಣ ತುಟ್ಟಿಯಾಗಿರುವುದು ಕೆಳವರ್ಗದವರಿಗೆ ನುಂಗಲಾರದ ತುತ್ತಾಗಿದೆ. ಕೋವಿಡ್ ಪೂರ್ವ ನಗರದಲ್ಲಿ 15ಕ್ಕೂ ಹೆಚ್ಚು ನರ್ಮ್ ಬಸ್ ಓಡಾಡುತ್ತಿದ್ದರೆ ಬಳಿಕ ಪ್ರಯಾಣಿಕರ ಕೊರತೆ, ನಷ್ಟದ ನೆಪದಲ್ಲಿ ಒಂದೊಂದೇ ರೂಟ್ನಲ್ಲಿ ಬಸ್ ಸಂಚಾರ ಕಡಿತ ಮಾಡಲಾಗಿದೆ. ವ್ಯವಹಾರ ಹಿಂದಿನ ಸ್ಥಿತಿಗೆ ಬಂದರೂ, ಜನರ ಬೇಡಿಕೆಯಿದ್ದರೂ ಕೆಲವು ರೂಟ್ಗಳಲ್ಲಿ ಬಸ್ ಸಂಚಾರ ವಿರಳ ಎನ್ನುತ್ತಾರೆ ನಾಗರೀಕರು.
ಇದನ್ನೂ ಓದಿ : ಕಚ್ಚಾ ತೈಲಬೆಲೆ ಏರಿಕೆ ಪರಿಣಾಮ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 800ಕ್ಕೂ ಅಧಿಕ ಅಂಕ ಕುಸಿತ
ಖಾಲಿ ಹೊಡೆಯುತ್ತಿರುವ ನಿಲ್ದಾಣ
ನಗರದ ಹೃದಯ ಭಾಗದಲ್ಲಿ 41 ಸೆಂಟ್ಸ್ ಜಾಗದಲ್ಲಿ 4 ಕೋ. ವೆಚ್ಚದಲ್ಲಿ ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ಈ ನಗರ ಸಾರಿಗೆ ಬಸ್ ನಿಲ್ದಾಣ ಸದ್ಯಕ್ಕೆ ವಿರಳ ಸಂಖ್ಯೆಯ ಬಸ್ಗಳು, ಪ್ರಯಾಣಿಕರ ಕೊರತೆಯಿಂದ ಖಾಲಿ ಹೊಡೆಯುತ್ತಿದೆ. ಸದಾ ಜನರಿಂದ ಗಿಜಿಗುಡುತ್ತಿರಬೇಕಾದ ಬಸ್ ನಿಲ್ದಾಣದಲ್ಲಿ ಬಿಕೋ ಎನ್ನುತ್ತಿದೆ. ಇಲ್ಲಿ ತೆರೆದಿರುವ ವಾಣಿಜ್ಯ ಮಳಿಗೆಗಳು ಬಾಗಿಲು ಮುಚ್ಚಿಕೊಂಡಿವೆ. ಕೋವಿಡ್ ಬಳಿಕ ಹೊಸ ಆಕಾಂಕ್ಷೆಗಳೊಂದಿಗೆ ವ್ಯಾಪಾರ ಆರಂಭಿಸಿದ್ದ ವ್ಯಾಪಾರಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಕೆಲವೇ ತಿಂಗಳಲ್ಲಿ ವ್ಯಾಪಾರ ನಷ್ಟಗೊಂಡು ಬಾಗಿಲು ಮುಚ್ಚಿದ್ದಾರೆ.
ದರ ಪರಿಷ್ಕರಣೆ
ಈ ಹಿಂದೆ ಖಾಸಗಿ ಬಸ್ನಂತೆ ನರ್ಮ್ ಬಸ್ ದರವನ್ನು ಪರಿಷ್ಕರಿಸಿರಲಿಲ್ಲ. ಖಾಸಗಿ, ಸರಕಾರಿ ಬಸ್ ಪ್ರಯಾಣ ದರ ಪರಿಷ್ಕರಣೆ ಅಧಿಸೂಚನೆ ಒಂದೇ ಆಗಿದ್ದು, ಹಳೆ ಅಧಿಸೂಚನೆ ಪ್ರಕಾರವೇ ನರ್ಮ್ ಬಸ್ ಪ್ರಯಾಣ ದರವನ್ನು ಎಸ್ಪಿ, ಡಿಸಿ, ಆರ್ಟಿಒ ಅವರನ್ನು ಒಳಗೊಂಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಪರಿಷ್ಕರಿಸಿದೆ. -ಜೆ.ಪಿ. ಗಂಗಾಧರ,
ಆರ್ಟಿಒ, ಉಡುಪಿ ಜಿಲ್ಲೆ
ಜನರಿಗೆ ಹೊರೆ
ನರ್ಮ್ ಬಸ್ ದರವನ್ನು ಏರಿಕೆ ಮಾಡಿರುವ ನಡೆ ಸರಿಯಾಗಿಲ್ಲ. ಜನ ಸಾಮಾನ್ಯರಿಗೆ ಇದರಿಂದ ಹೊರೆಯಾಗ ಲಿದೆ. ಜಿಲ್ಲಾಧಿಕಾರಿ, ಸಾರಿಗೆ ಅಧಿಕಾರಿ ಗಳು ನರ್ಮ್ ಬಸ್ ದರವನ್ನು ಸಾರಿಗೆ ಪ್ರಾಧಿಕಾರದ ನಿಯಮದಂತೆ ಪರಿಷ್ಕರಿಸಬೇಕು.
-ಶಿವಕುಮಾರ್ ಶೆಟ್ಟಿಗಾರ್, ಮಣಿಪಾಲ