ಸೈನಾ, ಶ್ರೀಕಾಂತ್ಗೆ ಕೈತಪ್ಪಿದ ಒಲಿಂಪಿಕ್ಸ್ ಅರ್ಹತಾ ಟಿಕೆಟ್
Team Udayavani, May 29, 2021, 12:54 AM IST
ಹೊಸದಿಲ್ಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಕೆ. ಶ್ರೀಕಾಂತ್ ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಆಡುವುದು ಅಸಾಧ್ಯ. ಈ ವಿಚಾರವೀಗ ಅಧಿಕೃತಗೊಂಡಿದೆ.
ಕೊರೊನಾ ಕಾರಣದಿಂದ ಸಿಂಗಾಪುರ್ ಬ್ಯಾಡ್ಮಿಂಟನ್ ಅರ್ಹತಾ ಕೂಟ ರದ್ದಾಗಿದೆ, ಮುಂದೆ ಇನ್ನು ಯಾವುದೇ ಕೂಟಗಳು ನಡೆಯುವ ಸಾಧ್ಯತೆಯೇ ಇಲ್ಲ ಎಂದು ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಖಚಿತಪಡಿಸಿದೆ. ಆದ್ದರಿಂದ ಇಲ್ಲಿಯ ವರೆಗೆ ಯಾರ್ಯಾರು ಯಾವ್ಯಾವ ಶ್ರೇಯಾಂಕ ಹೊಂದಿದ್ದಾರೆಯೋ, ಅದನ್ನೇ ಪರಿಗಣಿಸಿ ಒಲಿಂಪಿಕ್ಸ್ ಅರ್ಹತೆ ನೀಡಲಾಗುತ್ತದೆ. ಈ ಲೆಕ್ಕಾಚಾರದಲ್ಲಿ ಶ್ರೀಕಾಂತ್ ಮತ್ತು ಸೈನಾಗೆ ಅರ್ಹತೆ ತಪ್ಪಿಹೋಗುತ್ತದೆ. ವೇಳಾಪಟ್ಟಿಯಂತೆ ಜೂ. 15ರ ವರೆಗೆ ಅರ್ಹತಾ ಸುತ್ತಿನ ಬ್ಯಾಡ್ಮಿಂಟನ್ ಕೂಟಗಳು ನಡೆಯ ಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಎಲ್ಲವನ್ನೂ ರದ್ದುಪಡಿಸಲಾಗಿದೆ.