ಉತ್ತರಾಖಂಡದಲ್ಲಿ ಮತ್ತೆ ಕಠಿಣ ನಿರ್ಬಂಧ : ಪ್ರವಾಸಿಗರಿಗೆ ಮನೆ ದಾರಿ ತೋರಿಸಿದ ಪೊಲೀಸರು!
ಉತ್ತರಾಖಂಡದಲ್ಲಿ 2 ಸಾವಿರಕ್ಕೂ ಹೆಚ್ಚು ವಾಹನಗಳು ವಾಪಸ್
Team Udayavani, Jul 11, 2021, 9:29 PM IST
ನವ ದೆಹಲಿ: ಪ್ರವಾಸಿಗರನ್ನು ತಡೆಯುವ ಮೂಲಕ ಕೊರೊನಾ 3ನೇ ಅಲೆಗೆ ಕಡಿವಾಣ ಹಾಕಲು ಮುಂದಾಗಿರುವ ಉತ್ತರಾಖಂಡ ಸರ್ಕಾರ ಭಾನುವಾರ ಪ್ರವಾಸಿ ತಾಣ ಮಸೂರಿಯತ್ತ ತೆರಳುತ್ತಿದ್ದ ಸುಮಾರು 2 ಸಾವಿರಕ್ಕೂ ಅಧಿಕ ವಾಹನಗಳನ್ನು ವಾಪಸ್ ಕಳುಹಿಸಿದ್ದಾರೆ.
ನಿರ್ಬಂಧ ಸಡಿಲಿಕೆ ಬೆನ್ನಲ್ಲೇ ಭಾರೀ ಸಂಖ್ಯೆಯ ಪ್ರವಾಸಿಗರು ಮಸೂರಿಯಲ್ಲಿ ಸೇರಿದ್ದ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಮತ್ತೆ ಕಠಿಣ ನಿರ್ಬಂಧಗಳನ್ನು ಘೋಷಿಸಿದೆ. ಕುಥಾಲ್ ಗೇಟ್, ಕಿಮಾಡಿ ಸೇರಿದಂತೆ ಹಲವೆಡೆ ತಪಾಸಣಾ ಕೇಂದ್ರಗಳನ್ನು ಪೊಲೀಸರು ಸ್ಥಾಪಿಸಿ, ಪ್ರವಾಸಿಗರನ್ನು ತಡೆಯುವ ಕೆಲಸ ಮಾಡುತ್ತಿದೆ.
24 ಗಂಟೆಗಳಲ್ಲಿ 41,506 ಕೇಸು:
ಶನಿವಾರದಿಂದ ಭಾನುವಾರಕ್ಕೆ 24 ಗಂಟೆಗಳಲ್ಲಿ ದೇಶಾದ್ಯಂತ 41,506 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 895 ಮಂದಿ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,54,118ಕ್ಕಿಳಿದಿದೆ.
ಇದನ್ನೂ ಓದಿ : ಲಾಕ್ಡೌನ್ನಲ್ಲಿ ವಿದ್ಯುತ್ ಬೇಡಿಕೆ ಅಗಾಧ ಹೆಚ್ಚಳ : ಕೇಂದ್ರ ಇಂಧನ ಸಚಿವಾಲಯ ಹೇಳಿಕೆ
ಆಲ್ಫಾ, ಬೀಟಾ ಸೋಂಕಿದ್ದ ಮಹಿಳೆ ಸಾವು:
ಕೊರೊನಾ ವೈರಸ್ನ ಆಲ್ಫಾ ಮತ್ತು ಬೀಟಾ ಎರಡೂ ರೂಪಾಂತರಿಗಳು ಏಕಕಾಲಕ್ಕೆ ತಗುಲಿದ್ದ ಬೆಲ್ಜಿಯಂನ 90 ವರ್ಷದ ಮಹಿಳೆ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಮಾ.3ರಂದೇ ಈ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕೊರೊನಾ ಲಸಿಕೆ ಪಡೆದಿರಲಿಲ್ಲ. ದಿನಕಳೆದಂತೆ ಆರೋಗ್ಯ ಸ್ಥಿತಿ ಹದಗೆಟ್ಟು ಭಾನುವಾರ ಅಸುನೀಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇದೇ ವೇಳೆ, ಆಸ್ಟ್ರೇಲಿಯಾದಲ್ಲಿ ಕೊರೊನಾ ಸೋಂಕಿಗೆ ಈ ವರ್ಷ ಮೊದಲ ಬಲಿಯಾಗಿದೆ. ಸೋಂಕು ದೃಢಪಟ್ಟ ಕೆಲವೇ ಗಂಟೆಗಳಲ್ಲಿ 90 ವರ್ಷದ ಮಹಿಳೆ ಸಾವಿಗೀಡಾಗಿದ್ದಾರೆ.