ನಾಲ್ಕು ಸೂತ್ರದ ಮೂಲಕ ಯುವ ವಿಜ್ಞಾನಿಗಳು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು; ಮೋದಿ
ಹೊಸ ದಶಕ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದ ಜತೆ ಸಂಪರ್ಕ ಹೊಂದಿದೆ.
Team Udayavani, Jan 3, 2020, 11:48 AM IST
ಬೆಂಗಳೂರು:ನನ್ನ ಧ್ಯೇಯಸೂತ್ರದಂತೆ ಈ ದೇಶದಲ್ಲಿರುವ ಯುವ ವಿಜ್ಞಾನಿಗಳು ಆವಿಷ್ಕಾರ, ಪೇಟೆಂಟ್, ಉತ್ಪಾದನೆ ಮತ್ತು ಅಭಿವೃದ್ಧಿ ಈ ನಾಲ್ಕು ಹಂತಗಳ ಮೂಲಕ ನಮ್ಮ ದೇಶವನ್ನು ವೇಗವಾಗಿ ಅಭಿವೃದ್ದಿಪಡಿಸುವತ್ತ ಹೆಜ್ಜೆ ಹಾಕಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಂಗಳೂರಿನ ಯಲಹಂಕದ ಸಮೀಪದ ಜಿವಿಕೆಯಲ್ಲಿ ಗುರುವಾರ 107ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮ್ಮೇಳನವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು.
ಹೊಸ ವರ್ಷದಲ್ಲಿ ನನಗೆ ಖುಷಿ ಕೊಟ್ಟ ಮೊದಲ ಸಮಾರಂಭ ಇದಾಗಿದ್ದು, ಹೊಸ ದಶಕ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದ ಜತೆ ಸಂಪರ್ಕ ಹೊಂದಿದೆ. ವಿಜ್ಞಾನ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಈ ನಗರ ವಿಜ್ಞಾನ ಮತ್ತು ಆವಿಷ್ಕಾರದ ಜತೆ ನಿಕಟ ಸಂಪರ್ಕ ಹೊಂದಿದೆ ಎಂದರು.
ನಾವು 2020ನೇ ಇಸವಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಧನಾತ್ಮಕ ಹಾಗೂ ಆಶಾವಾದದ ಮೂಲಕ ಹೆಜ್ಜೆ ಹಾಕುವ ಮೂಲಕ ನಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕಾಗಿದೆ. ಆವಿಷ್ಕಾರದ ರಾಂಕಿಂಗ್ ನಲ್ಲಿ ಭಾರತ ಪ್ರಗತಿ ಸಾಧಿಸಿದೆ. ನಮ್ಮ ಯೋಜನೆಗಳು ಹೆಚ್ಚಿನ ತಾಂತ್ರಿಕ ಉದ್ಯಮವನ್ನು ಬೆಳೆಸಿದೆ. ಕಳೆದ 50 ವರ್ಷಗಳಲ್ಲಿ ಸಾಧ್ಯವಾಗದಿರುವುದು ಐದು ವರ್ಷಗಳಲ್ಲಿ ಈಡೇರಿದೆ. ಈ ಹಿನ್ನೆಲೆಯಲ್ಲಿ ನಾನು ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.