ಪ್ರತಿಭಟನಾ ರ್ಯಾಲಿಗೆ ತಡೆ; ಬಿಎಸ್ವೈ ಸೇರಿ ಹಲವರು ವಶಕ್ಕೆ
ಸಚಿವ ವೆಂಕಟರಾವ್ ನಾಡಗೌಡರಿಂದ ಸಂಧಾನ
Team Udayavani, Jun 16, 2019, 12:18 PM IST
ಬೆಂಗಳೂರು: ಸರಕಾರಿ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ
ನೀಡುತ್ತಿರುವ ರಾಜ್ಯ ಸರಕಾರದ ನಿರ್ಧಾರ ಖಂಡಿಸಿ ಬಿಜೆಪಿ
ಹಮ್ಮಿಕೊಂಡಿದ್ದ ಅಹೋರಾತ್ರಿ ಪ್ರತಿಭಟನೆ ವಿವಾರ ಬೆಳಗ್ಗೆ ಮುಕ್ತಾಯವಾಗಿದ್ದು, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕುವ ಬಿಜೆಪಿ ಮುಖಂಡರ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದು, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹಿತ ಹಲವು ಪ್ರಮುಖರನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗ್ಗೆ ಪ್ರತಿಭಟನಾ ಸ್ಥಳಕ್ಕೆ ಸರಕಾರದ ಪರವಾಗಿ ಸಚಿವ ವೆಂಕಟರಾವ್ ನಾಡಗೌಡ ಅವರು ಆಗಮಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬರೆದಿದ್ದ ಪತ್ರವನ್ನು ಯಡಿಯೂರಪ್ಪ ಅವರ ಕೈಗೆ ನೀಡಿದ್ದರು.
ನಿಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿದ್ದು, ನೀವು ಸೂಚಿಸಿದ ಸಮಯದಲ್ಲಿ ಮಾತುಕತೆಗೆ ಸಿದ್ಧನಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದರು.
ಸಂಧಾನದಕರೆಯ ಹೊರತಾಗಿಯೂ ಪ್ರತಿಭಟನಾ ರ್ಯಾಲಿ ಮುಂದುವರಿಸಿದ ಬಿಜೆಪಿ ಯ ನಾಯಕರನ್ನು ಶಿವಾನಂದ ಸರ್ಕಲ್ ಬಳಿ ಭಾರೀ ಸಂಖ್ಯೆಯ ಪೊಲೀಸರು ತಡೆದು ಪ್ರಮುಖರನ್ನು ವಶಕ್ಕೆ ಪಡೆದರು.
ಪ್ರತಿಭಟನಾ ರ್ಯಾಲಿ ವೇಳೆ ಪೊಲೀಸರು ಮತ್ತು ಬಿಜೆಪಿ ನಾಯಕರ ನಡುವೆ ತಳ್ಳಾಟ ನಡೆದು ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾದವು.