ಮಕ್ಕಳಿಗೆ ಲಸಿಕೆ, ಬೂಸ್ಟರ್ ಡೋಸ್ ರಾಜ್ಯದಲ್ಲಿ ಸಿದ್ಧತೆ
Team Udayavani, Dec 27, 2021, 6:50 AM IST
ಬೆಂಗಳೂರು: ದೇಶದಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಜ. 3ರಿಂದ ಲಸಿಕೆ ನೀಡುವುದಾಗಿ ಪ್ರಧಾನಿ ಘೋಷಿಸಿದ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆ ಲಸಿಕೆ ವಿತರಣೆಗೆ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ 15ರಿಂದ 18ವರ್ಷದೊಳಗಿನ 43 ಲಕ್ಷ ಮಕ್ಕಳಿದ್ದಾರೆ ಎಂದು ಅಂದಾಜಿಸ ಲಾಗಿದೆ. ಅವರೆಲ್ಲರಿಗೂ ಜ. 3ರಿಂದ ಲಸಿಕೆ ನೀಡಲು ರಾಜ್ಯದ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಸಿದ್ಧತೆ ನಡೆಸುತ್ತಿವೆ.
ಶನಿವಾರ ರಾತ್ರಿ ಪ್ರಧಾನಿ ಘೋಷಣೆ ಮಾಡಿದ್ದು, ರವಿವಾರ ಸರಕಾರಿ ರಜೆ ಇರುವುದರಿಂದ ರಾಜ್ಯ ಸರಕಾರಕ್ಕೆ ಮತ್ತು ಸಂಬಂಧ ಪಟ್ಟ ಇಲಾಖೆಗಳಿಗೆ ಅಧಿಕೃತ ಆದೇಶಗಳು ಬಂದಿಲ್ಲ. ಆದರೂ ಈಗಾಗಲೇ ಆರೋಗ್ಯ ಇಲಾಖೆ ಸಿದ್ಧವಿದೆ. ಮಕ್ಕಳಿಗೆ ಲಸಿಕೆನೀಡಲು ಯಾವ ಮಾರ್ಗ ಸೂಚಿ ಅನುಸರಿಸಬೇಕು ಎಂದು ಕೇಂದ್ರ ಅಥವಾ ರಾಜ್ಯ ಸರಕಾರ ಸೂಚಿಸಿ ದರೆ ಆ ಪ್ರಕಾರವಾಗಿ ಇಲಾಖೆ ಪ್ರಕ್ರಿಯೆ ಆರಂಭಿ ಸಲಿದೆ. ಒಂದು ವೇಳೆ ಯಾವುದೇ ಮಾರ್ಗಸೂಚಿ ನೀಡದಿದ್ದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಿದ್ಧಗೊಂಡಿದೆ ಶಿಕ್ಷಣ ಇಲಾಖೆ:
ಶಿಕ್ಷಣ ಇಲಾಖೆ ಕೂಡ ಸಿದ್ಧವಿದ್ದು, ಸರಕಾರ ಮತ್ತು ಆರೋಗ್ಯ ಇಲಾಖೆ ಕೈಗೊಳ್ಳುವ ನಿರ್ಧಾರಗಳಿಗೆ ಸಹಕಾರ ನೀಡಲಾಗುತ್ತದೆ. ಮುಂದಿನ 2-3 ತಿಂಗಳಿನಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಸೇರಿದಂತೆ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯಲಿವೆ. ಆ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಬಹಳ ಮುಖ್ಯವಾಗಿದೆ.
ಜ. 10ರಿಂದ ಬೂಸ್ಟರ್ ಡೋಸ್ :
ಪ್ರಧಾನಿ ಘೋಷಣೆ ಪ್ರಕಾರ ರಾಜ್ಯದ ಆರೋಗ್ಯ ಇಲಾಖೆ ಬೂಸ್ಟರ್ ಡೋಸ್ ವಿತರಣೆಗೆ ಸಿದ್ಧತೆ ನಡೆಸಿದ್ದು, ಆದೇಶಕ್ಕಾಗಿ ಕಾಯುತ್ತಿದೆ. ಸದ್ಯ ರಾಜ್ಯದಲ್ಲಿ ಎರಡನೇ ಡೋಸ್ ಪಡೆದಿರುವ 7,19,303 ಆರೋಗ್ಯ ಕಾರ್ಯಕರ್ತರು, 8,90,739 ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರು 59,92,946 ಮಂದಿ ಹಿರಿಯ ನಾಗರಿಕರಿದ್ದು, ಇವರೆಲ್ಲರೂ ಬೂಸ್ಟರ್ ಡೋಸ್ ಪಡೆಯಲು ಅರ್ಹರಿದ್ದಾರೆ.
ಗೊಂದಲ :
ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮುಂಚೂಣಿ ಕಾರ್ಯಕರ್ತರ ಕೇಂದ್ರ ಮತ್ತು ರಾಜ್ಯ ಪಟ್ಟಿ ತಯಾರಿಸಿದೆ. ಕೇಂದ್ರ ಪಟ್ಟಿಯಲ್ಲಿ ಸ್ಥಳೀಯ ಸಂಸ್ಥೆಗಳ ಸಿಬಂದಿ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಂದಾಯ ಇಲಾಖೆ ಸಿಬಂದಿಯನ್ನು ಮಾತ್ರ ಪರಿಗಣಿಸಲಾಗಿದೆ. ಆದರೆ ರಾಜ್ಯ ಪಟ್ಟಿಯಲ್ಲಿ ಶಿಕ್ಷಕರು, ಸಾರಿಗೆ, ಶ್ಮಶಾನದಲ್ಲಿ ಕಾರ್ಯನಿರ್ವಹಿಸುವವರು, ಆಟೋಮತ್ತು ಕ್ಯಾಬ್ ಚಾಲಕರು, ಅಂಚೆ ಇಲಾಖೆ ಸಿಬಂದಿ, ಬೀದಿ ಬದಿ ವ್ಯಾಪಾರಿಗಳು, ನ್ಯಾಯಾಂಗ ಅಧಿಕಾರಿ ಗಳು, ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬಂದಿ, ಮಾಧ್ಯಮ, ಪೆಟ್ರೋಲ್ ಬಂಕ್ ಕೆಲಸಗಾರರು, ಆಹಾರ ನಿಗಮ, ಎಪಿಎಂಸಿ ಸೇರಿದಂತೆ ಹಲವು ಕ್ಷೇತ್ರಗಳನ್ನು ಪರಿಗಣಿಸಲಾಗಿದೆ.