ಹುಟ್ಟೂರ ಮಣ್ಣಿಗೆ ರಾಷ್ಟ್ರಪತಿ ನಮನ
Team Udayavani, Jun 28, 2021, 7:25 AM IST
ಲಕ್ನೋ/ಕಾನ್ಪುರ: ಉತ್ತರಪ್ರದೇಶದ ಕಾನ್ಪುರ ದೆಹತ್ ಜಿಲ್ಲೆಯ ತಮ್ಮ ಹುಟ್ಟೂರು ಪಾರಾಂವ್ ಗೆ ಭೇಟಿ ನೀಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ರವಿವಾರ ಭಾವುಕರಾಗಿದ್ದಾರೆ. ಹಳ್ಳಿಯನ್ನು ಪ್ರವೇಶಿಸುವಾಗ ಅವರು ನೆಲವನ್ನು ಮುಟ್ಟಿ ನಮಸ್ಕರಿಸಿದ್ದಾರೆ.
ಬಳಿಕ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಅವರು,. “ಸಾಮಾನ್ಯ ಹಳ್ಳಿಹುಡುಗನಾಗಿದ್ದ ತಾವು ಭಾರತದ ಪರಮೋನ್ನತ ಹುದ್ದೆಗೇರುತ್ತೇನೆಂದು ಕನಸುಮನಸ್ಸಿನಲ್ಲೂ ಊಹಿಸಿರಲಿಲ್ಲ. ಇದು ದೇಶದ ಪ್ರಜಾಪ್ರಭುತ್ವದ ಶಕ್ತಿ. ಈ ಊರು ತನಗೆ ಕೇವಲ ಊರಲ್ಲ, ಮಾತೃಭೂಮಿ. ಇಲ್ಲಿನ ಜನ, ನೆಲದ ಆಶೀರ್ವಾದದಿಂದಲೇ ನಾನು ಈ ಸ್ಥಾನಕ್ಕೇರಿದ್ದೇನೆ. ತನ್ನ ಸಾಧನೆಯ ಅಷ್ಟೂ ಶ್ರೇಯಸ್ಸು ಈ ಹಳ್ಳಿಗೆ ಸೇರುತ್ತದೆ’ ಎಂದು ನುಡಿದಿದ್ದಾರೆ.
ಈ ಹಳ್ಳಿಯ ಆಶೀರ್ವಾದದಿಂದ ಮೊದಲು ತಾನು ಉಚ್ಚ ನ್ಯಾಯಾಲಯದಲ್ಲಿ ವಕೀಲನಾದೆ, ನಂತರ ಸರ್ವೋಚ್ಚ ನ್ಯಾಯಾಲಯ ಪ್ರವೇಶಿಸಿದೆ. ಅನಂತರ ರಾಜ್ಯಸಭೆ, ಬಳಿಕ ರಾಜಭವನ ಪ್ರವೇಶಿಸಿ ಕಡೆಗೆ ರಾಷ್ಟ್ರಪತಿ ಭವನ ತಲುಪಿದ್ದೇನೆ ಎಂದು ಹೇಳಿದ ಕೋವಿಂದ್, ಜನನೀ ಜನ್ಮಭೂಮಿಶ್ಚ ಸರ್ಗಾದಪೀ ಗರೀಯಸಿ (ತಾಯಿ, ತಾಯಿನಾಡು ಸ್ವರ್ಗಕ್ಕಿಂತಲೂ ಶ್ರೇಷ್ಠವಾದದ್ದು) ಎಂದು ಬಣ್ಣಿಸಿದರು. ಈ ವೇಳೆ ಉತ್ತರಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ತಮ್ಮ ಹಳ್ಳಿಯಲ್ಲಿ ಒಂದು ಸುತ್ತು ಹಾಕಿದರು. ಕೋವಿಂದ್ ಅವರು ಶುಕ್ರವಾರವಷ್ಟೇ ವಿಶೇಷ ರೈಲಿನಲ್ಲಿ ತಮ್ಮ ಹಳ್ಳಿಯತ್ತ ಸಂಚರಿಸಿದ್ದರು.