ಮಾವ ಅಳಿಯ ಜಗಳ: ಮಾವನ ತುಟಿ ಕಚ್ಚಿ ತುಂಡರಿಸಿದ ಅಳಿಯ!
Team Udayavani, Jan 22, 2020, 8:36 PM IST
ಮುದಗಲ್ಲ: ಸಮೀಪದ ಬಯ್ನಾಪುರ ತಾಂಡಾದಲ್ಲಿ ಮಂಗಳವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಅಳಿಯಂದಿರು ಮಾವನ ತುಟಿ ಕಚ್ಚಿ ತುಂಡರಿಸಿದ್ದಾರೆ. ಮೂಲತ: ಆಶಿಹಾಳ ತಾಂಡಾದ ನಿವಾಸಿಯಾಗಿರುವ ತಿಮ್ಮಣ್ಣ ನಾರಾಯಣಪ್ಪ (38) ಅವರ ತುಟಿ ತುಂಡಾಗಿದೆ. ಈತನ ಅಳಿಯ ಅಮರೇಶ ತುಟ್ಟಿ ಕಚ್ಚಿದ ಆರೋಪಿ.
ಆಶಿಹಾಳ ತಾಂಡಾದ ತಿಮ್ಮಣ್ಣ ನಾರಾಯಣಪ್ಪ, ಪತ್ನಿಯ ತವರೂರು ಬಯ್ನಾಪುರದಲ್ಲೇ ವಾಸವಾಗಿದ್ದಾರೆ. ಮಂಗಳವಾರ ಪತ್ನಿಯ ತಂದೆ ಮಾನಪ್ಪ ಪೂಜಾರಿ ಮನೆಗೆ ಹೋದಾಗ ಕ್ಷುಲ್ಲಕ ಕಾರಣಕ್ಕೆ ಪತ್ನಿಯ ತಮ್ಮಂದಿರಾದ ದೊಡ್ಡಪ್ಪ ಮತ್ತು ಅಮರೇಶ ಎಂಬುವರು ಜಗಳ ತೆಗೆದು ಆತನ ಮೇಲೆ ಹಲ್ಲೆ ನಡೆಸಿದರು. ಈ ವೇಳೆ, ಅಳಿಯ ಅಮರೇಶ, ತಿಮ್ಮಣ್ಣನ ತುಟಿ ಕಚ್ಚಿ ತುಂಡರಿಸಿದ್ದಾನೆ. ಗಾಯಾಳು ತಿಮ್ಮಣ್ಣನಿಗೆ ಮುದಗಲ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ ಬಳಿಕ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.