ಅರ್ಜಿ ಸಲ್ಲಿಸಿ ಕಾರ್ಡ್ ಸಿಗದವರಿಗೂ ಶೀಘ್ರವೇ ಪಡಿತರ
ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತೀರ್ಮಾನ
Team Udayavani, Apr 18, 2020, 6:00 AM IST
ಸಾಂದರ್ಭಿಕ ಚಿತ್ರ..
ಬೆಂಗಳೂರು: ಲಾಕ್ಡೌನ್ ಜಾರಿಯಲ್ಲಿರುವ ಈ ಸಂಕಟದ ದಿನಗಳಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿದ್ದರೂ ಕಾರ್ಡ್ ಸಿಗದ ಕಾರಣ ಪಡಿತರದಿಂದ ವಂಚಿತರಾಗುತ್ತಿರುವವರು ರಾಜ್ಯದಲ್ಲಿ ಸಾವಿರಾರು ಮಂದಿ ಇದ್ದಾರೆ. ಇನ್ನು ಅವರಿಗೂ ಪಡಿತರ ಸಿಗಲಿದೆ.
ಬಿಪಿಎಲ್ ಮತ್ತು ಎಪಿಎಲ್ ಎರಡೂ ಬಗೆಯ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿ ಕಾರ್ಡ್ ಸಿಗದವರಿಗೂ ಪಡಿತರ ವಿತರಿಸಲು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತೀರ್ಮಾನಿಸಿದೆ.
ಕಾರ್ಡ್ ಇಲ್ಲದ ಬಡವರಿಗೂ ಪಡಿತರ ವಿತರಿಸುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದರೂ ತಾಂತ್ರಿಕ ಅಡಚಣೆಯಿಂದ ಈ ತನಕ ಅದು ಸಾಧ್ಯವಾಗಿರಲಿಲ್ಲ. ಶುಕ್ರವಾರ ಅಧಿಕಾರಿಗಳ ಜತೆ ಸಭೆ ನಡೆಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಪಡಿತರ ವಿತರಣೆಗೆ ಸೂಚನೆ ನೀಡಿದ್ದಾರೆ.
ಶನಿವಾರದಿಂದ ಅಕ್ಕಿ
ಸಭೆಯ ಅನಂತರ ಮಾತನಾಡಿದ ಸಚಿವ ಗೋಪಾಲಯ್ಯ, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿದ್ದ 1.89 ಲಕ್ಷ ಕುಟುಂಬಗಳಿಗೆ ಶನಿವಾರದಿಂದ ತಿಂಗಳಿಗೆ 10 ಕೆ.ಜಿ. ಅಕ್ಕಿಯನ್ನು ಮೂರು ತಿಂಗಳು ಉಚಿತವಾಗಿ ನೀಡಲಾಗುವುದು ಎಂದಿದ್ದಾರೆ.
ಎಪಿಎಲ್ ಕಾರ್ಡ್ಗಳಿಗೆ 1.09 ಲಕ್ಷ ಕುಟುಂಬ ಗಳು ಅರ್ಜಿ ಸಲ್ಲಿಸಿದ್ದು ಅವರಿಗೆ 15 ರೂ. ದರದಲ್ಲಿ ಒಬ್ಬರಿದ್ದರೆ 5 ಕೆ.ಜಿ., ಇಬ್ಬರಿದ್ದರೆ 10 ಕೆ.ಜಿ.ಯಂತೆ ಪ್ರತಿ ತಿಂಗಳು ಅಕ್ಕಿ ನೀಡಲಾಗುವುದು. ಅರ್ಜಿಯ ಸ್ವೀಕೃತಿ ಪತ್ರ ತೋರಿಸಿ ಒಟಿಪಿ ಖಾತರಿಯೊಂದಿಗೆ ಪಡಿತರ ಪಡೆಯಬಹುದು. ಈಗಾಗಲೇ ಎಪಿಎಲ್ ಕಾರ್ಡ್ ಪಡೆದ 20.50 ಲಕ್ಷ ಕುಟುಂಬಗಳು 15 ರೂ. ದರದಲ್ಲಿ ಅಕ್ಕಿ ಪಡೆಯಬಹುದು ಎಂದು ತಿಳಿಸಿದರು.
25 ಕೋ.ರೂ. ಬಿಡುಗಡೆ
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ರಾಜ್ಯದ 37.17 ಲಕ್ಷ ಕುಟುಂಬಗಳ ಪೈಕಿ 29.23 ಕುಟುಂಬಗಳಿಗೆ ಸಬ್ಸಿಡಿ ನೀಡಲಾಗಿದೆ. 8 ಲಕ್ಷ ಸಿಲಿಂಡರ್ಗಳ ಬೇಡಿಕೆಯನ್ನು ಸಲ್ಲಿಸಿದ್ದು ಪೂರೈಸಲಾಗಿದೆ. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 1 ಲಕ್ಷ ಕುಟುಂಬಗಳಿಗೆ ತಲಾ ಮೂರು ಸಿಲಿಂಡರ್ಗಳನ್ನು ನೀಡಲು 25 ಕೋ.ರೂ. ಬಿಡುಗಡೆಯಾಗಿದೆ ಎಂದು ಸಚಿವ ಗೋಪಾಲಯ್ಯ ವಿವರಿಸಿದರು.
ದಾಸ್ತಾನು ಲಭ್ಯ
ಕೇಂದ್ರದ ಪಿಎಂಜಿಕೆವೈ ಯೋಜನೆಯಡಿ ಪಡಿತರ ದಾಸ್ತಾನು ಬಂದಿದ್ದು, ಮೇ 1ರಿಂದ ಬಿಪಿಎಲ್ ಪಡಿತರದಾರ ರಿಗೆ ತಲಾ 5 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ ವಿತರಿಸ ಲಾಗುವುದು. ಎರಡು ತಿಂಗಳ ಪಡಿತರ ಮುಂಗಡ ನೀಡುವಿಕೆ ಶೇ.90ರಷ್ಟು ಪೂರ್ಣಗೊಂಡಿದೆ.
– ಗೋಪಾಲಯ್ಯ,
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ