ಮೃತರ ಸದ್ಗತಿಗಾಗಿ ವಿಷ್ಣು ಪಾದಕ್ಕೆ ಮೊರೆ : ಸಚಿವ ಅಶೋಕ್ ಅವರಿಂದ ಪುಣ್ಯಸ್ಮರಣೆ
Team Udayavani, Jun 5, 2021, 7:10 AM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಅಸ್ಥಿಗಳನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಿ ಮೃತರ ಆತ್ಮಕ್ಕೆ ಶಾಂತಿ ದೊರಕಿಸುವ ಪ್ರಯತ್ನ ಮಾಡಿದ್ದ ಸರಕಾರ ಈಗ ಮೃತರ ಸದ್ಗತಿಗಾಗಿ ವಿಷ್ಣುಪಾದದ ಮೊರೆ ಹೋಗಲು ನಿರ್ಧರಿಸಿದೆ.
ಕೊರೊನಾದಿಂದ ಸಾವಿರಾರು ಮಂದಿ ಸಾವಿಗೀಡಾಗಿದ್ದು, ಅನೇಕರ ಮೃತದೇಹ ಗಳನ್ನು ಪಡೆಯಲು ಕುಟುಂಬಿಕರು ಮುಂದೆ ಬಂದಿರಲಿಲ್ಲ. ಹೀಗಾಗಿ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರದ ಬಳಿಕ ಅಸ್ಥಿಗಳನ್ನು ಸರಕಾರದ ಪರವಾಗಿ ಕಂದಾಯ ಸಚಿವ ಆರ್. ಅಶೋಕ್ ಅವರು ಕಾವೇರಿ ನದಿಯಲ್ಲಿ ವಿಧಿವತ್ತಾಗಿ ವಿಸರ್ಜನೆ ಮಾಡಿದ್ದರು.
ಸದ್ಗತಿಗಾಗಿ ಪೂಜೆ
ಕೊಡಗು – ಕೇರಳ ಗಡಿಯ ಕುಟ್ಟ ಸನಿಹ ತಿರುನಲ್ಲಿ ಎಂಬಲ್ಲಿ ವಿಷ್ಣು ದೇಗುಲ ಇದೆ. ಇಲ್ಲಿ ವಿಷ್ಣು ಪಾದದಡಿ ಮೃತರ ಹೆಸರಿನಲ್ಲಿ ಬೇಡಿಕೊಂಡರೆ ಸದ್ಗತಿ ದೊರೆಯುತ್ತದೆ ಎಂಬುದು ನಂಬಿಕೆ. ಸಚಿವ ಅಶೋಕ್ ಮೃತರೆಲ್ಲರ ಆತ್ಮಗಳಿಗೆ ಸದ್ಗತಿ ಸಿಗುವಂತೆ ಇಲ್ಲಿ ಪೂಜೆ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸರಕಾರದ ವತಿಯಿಂದ ಸಚಿವ ಆರ್. ಅಶೋಕ್ ಅವರು ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿರುವುದು ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಮೃತರ ಸದ್ಗತಿಗಾಗಿ ಎಲ್ಲರ ಪರವಾಗಿ ವಿಷ್ಣು ಪಾದದ ಬಳಿ ಪೂಜೆ ನಡೆಸಲಿದ್ದೇನೆ.
– ಆರ್. ಅಶೋಕ್, ಕಂದಾಯ ಸಚಿವ