ಮೇ 15 ರ ವರೆಗೂ ಕಾರ್ಮಿಕರಿಗೆ ರೈಲು ಸೇವೆ :ಆರ್. ಅಶೋಕ್
Team Udayavani, May 8, 2020, 9:20 PM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲು ಶುಕ್ರವಾರದಿಂದ ಮೇ 15ರ ವರೆಗೂ ರೈಲು ಸೇವೆ ಪಡೆಯಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯ ಸರಕಾರ 16 ವಿಶೇಷ ರೈಲುಗಳನ್ನು ನಿಗದಿಪಡಿಸಿದ್ದು, ಉತ್ತರ ಭಾರತದ 11 ರಾಜ್ಯಗಳಿಗೆ ಕಾರ್ಮಿಕರನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಐದು ರಾಜ್ಯಗಳು ಮಾತ್ರ ತಮ್ಮ ಕಾರ್ಮಿಕರನ್ನು ಕಳುಹಿಸಿಕೊಡಲು ಅನುಮತಿ ನೀಡಿವೆ.
ಉಳಿದ 6 ರಾಜ್ಯಗಳು ಇನ್ನೂ ಅನುಮತಿ ಕೊಟ್ಟಿಲ್ಲ . ಹೀಗಾಗಿ ರಾಜ್ಯ ಸರಕಾರ ಕಾರ್ಮಿಕರನ್ನು ಬಲವಂತವಾಗಿ ಇಟ್ಟುಕೊಂಡಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಸಂಬಂಧಪಟ್ಟ ರಾಜ್ಯಗಳು ಅನುಮತಿ ನೀಡಿದ ತತ್ಕ್ಷಣ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಚಿತ್ರೀಕರಣಕ್ಕೆ ಅವಕಾಶವಿಲ್ಲ
ಕನ್ನಡ ಚಲನಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವಂತೆ ಚಲನಚಿತ್ರಗಳ ನಿರ್ಮಾಪಕರು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದರೆ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ. ಕೇವಲ ಡಬ್ಬಿಂಗ್ ಮತ್ತು ಎಡಿಟಿಂಗ್ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ ಕೇವಲ ಐದು ಮಂದಿಯನ್ನು ಮಾತ್ರ ಇಟ್ಟುಕೊಂಡು ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.