ರಾಜ್ಯಕ್ಕೆ ಮಹಾ ಜಲಾಘಾತ; ಜನರ ಬದುಕು ಮೂರಾಬಟ್ಟೆ
ಭಾರೀ ಮಳೆಗೆ ಮತ್ತೆ 4 ಬಲಿ; ಕೃಪೆ ತೋರದ ಕೃಷ್ಣಾ, ಭೀಮಾ, ಕಾಳಿ
Team Udayavani, Aug 7, 2019, 6:00 AM IST
ಹುಬ್ಬಳ್ಳಿ/ಬೆಂಗಳೂರು: ‘ಮಹಾಘಾತ’ ಜಲಪ್ರಳಯಕ್ಕೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಜನರ ಬದುಕು ಮೂರಾಬಟ್ಟೆಯಾಗಿದೆ.
ಕೃಷ್ಣಾ, ಭೀಮಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ, ಕಾಳಿ, ಅಘನಾಶಿನಿ ಸೇರಿದಂತೆ ಎಲ್ಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 52 ಸೇತುವೆಗಳು ಮುಳುಗಡೆಯಾಗಿವೆ. 9420 ಜನರನ್ನು ಸ್ಥಳಾಂತರಿಸಲಾಗಿದೆ. ಪುಣೆ-ಬೆಂಗಳೂರು, ವಿಜಯಪುರ-ಧಾರವಾಡ ರಸ್ತೆ ಸಂಚಾರ, ಕರ್ನಾಟಕ-ಗೋವಾ ರೈಲು ಸಂಚಾರ ಬಂದ್ ಆಗಿದೆ. ಮತ್ತೆ ನಾಲ್ವರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ ಮಳೆಗೆ ಬೆಳಗಾವಿ ನಲುಗಿ ಹೋಗಿದೆ. 30 ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿದ್ದು, 140 ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. 8,012 ಜನರನ್ನು ಸ್ಥಳಾಂತರಿಸಲಾಗಿದೆ. ಆರು ಜಾನುವಾರುಗಳು ಮೃತಪಟ್ಟಿವೆ. ಬೆಳಗಾವಿ ನಗರದಲ್ಲಿ ಒಂದೇ ದಿನ 27 ಸೇರಿ 599 ಮನೆಗಳು ಹಾನಿಯಾಗಿವೆ. 80,590 ಹೆಕ್ಟೇರ್ ಪ್ರದೇಶ ಜಲಾವೃತವಾಗಿದೆ. 1,048 ಕಿಮೀ ರಸ್ತೆ ಕಿತ್ತು ಹೋಗಿದೆ. ಆರು ಸರ್ಕಾರಿ ಕಟ್ಟಡಗಳು ಧರೆಗುರುಳಿವೆ. 23 ಗಂಜಿ ಕೇಂದ್ರ ಆರಂಭಿಸಲಾಗಿದೆ.
ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ, ಗೋಕಾಕ, ಖಾನಾಪುರ, ಮೂಡಲಗಿ, ಹುಕ್ಕೇರಿ ತಾಲೂಕುಗಳ 96 ಹಳ್ಳಿಗಳು ಪ್ರವಾಹ ಬಾಧಿತವಾಗಿವೆ. ರಾಜಾಪುರ ಬ್ಯಾರೇಜ್ದಿಂದ 2,52,585 ಕ್ಯೂಸೆಕ್, ದೂಧಗಂಗಾದಿಂದ 42,240 ಕ್ಯೂಸೆಕ್ ಸೇರಿದಂತೆ ಕೃಷ್ಣಾ ನದಿಗೆ ಒಟ್ಟು 2,94,825 ಕ್ಯೂಸೆಕ್ ನೀರು ಬರುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಕಿತ್ತೂರಿನ ಐತಿಹಾಸಿಕ ಕೋಟೆಯಲ್ಲಿ ಎರಡು ವರ್ಷಗಳ ಹಿಂದಷ್ಟೇ ನಿರ್ಮಿಸಿದ್ದ ಗೋಡೆಯ ಅಲ್ಪಭಾಗ ಕುಸಿದಿದೆ.
ಹೆದ್ದಾರಿ ಸಂಪರ್ಕ ಕಡಿತ: ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಕರ್ನಾಟಕ-ಮಹಾರಾಷ್ಟ್ರ ನಡುವಿನ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಭೂ ಕುಸಿತದ ಕಾರಣ ಬೆಳಗಾವಿಯಿಂದ ಕೊಲ್ಲಾಪುರದವರೆಗೆ ಮುಂದಿನ 24 ಗಂಟೆಗಳ ಕಾಲ ರಸ್ತೆ ಸಂಚಾರ ನಿಷೇಧಿಸಲಾಗಿದೆ. ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
3 ಹೆದ್ದಾರಿ ಸಹಿತ 12 ಸೇತುವೆ ಬಂದ್: ಕೃಷ್ಣಾ, ಘಟಪ್ರಭಾ ಉಕ್ಕಿ ಹರಿಯುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ನೆರೆ ಹಾವಳಿ ಮಿತಿ ಮೀರಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಘಟಪ್ರಭಾ ನದಿಗೆ 1.28 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಹೀಗಾಗಿ ಮುಧೋಳದ ಕಾಂಬಳೆ ಗಲ್ಲಿ ಮತ್ತು ಕುಂಬಾರ ಗಲ್ಲಿಗಳು ಜಲಾವೃತಗೊಂಡಿದ್ದು, ಇಲ್ಲಿನ 35 ಕುಟುಂಬಗಳ 105 ಜನರನ್ನು ಸ್ಥಳಾಂತರಿಸಲಾಗಿದೆ. ಇನ್ನೂ 150 ಕುಟುಂಬಗಳ ಸುಮಾರು 350ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ಧಾರವಾಡ-ವಿಜಯಪುರ, ಜಮಖಂಡಿ-ಜತ್ತ, ಜಮಖಂಡಿ- ಸಾವಳಗಿ ಹೆದ್ದಾರಿ ಸೇರಿದಂತೆ ಮುಧೋಳ, ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಒಟ್ಟು 12 ಸೇತುವೆಗಳು ಜಲಾವೃತಗೊಂಡಿವೆ. ಹೀಗಾಗಿ ಈ ಮಾರ್ಗಗಳ ಸಂಚಾರ ಬಂದ್ ಆಗಿವೆ. ಕೃಷ್ಣಾ ನದಿಗೆ 4.22 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಮಖಂಡಿ ತಾಲೂಕಿನ 27 ಹಳ್ಳಿಗಳು ಬಾಧಿತಗೊಂಡಿವೆ. ನಾಲ್ಕು ಗ್ರಾಮಗಳು ಜಲಾವೃತಗೊಂಡಿದ್ದು, ಈವರೆಗೆ 225 ಕುಟುಂಬಗಳ 825 ಜನ ಹಾಗೂ 1,415 ಜಾನುವಾರು ಸ್ಥಳಾಂತರಿಸಲಾಗಿದೆ. ಜಮಖಂಡಿ ತಾಲೂಕಿನಲ್ಲಿ 11 ಹಾಗೂ ಮುಧೋಳ ನಗರದಲ್ಲಿ 2 ಸೇರಿ ಒಟ್ಟು 13 ಗಂಜಿ ಕೇಂದ್ರ ತೆರೆಯಲಾಗಿದೆ.
ಹೆದ್ದಾರಿಗಳ ಸಂಪರ್ಕವೇ ಕಡಿತ
ಮಳೆಗೆ ಮತ್ತೆ ನಾಲ್ವರು ಬಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ