ಕಲ್ಯಾಣ ಕರ್ನಾಟಕಕ್ಕೆ ಎಲ್ಲಾ ವಿಚಾರದಲ್ಲೂ ಅನ್ಯಾಯ: ರಾಜುಗೌಡ ಅಸಮಾಧಾನ
ಕಾವೇರಿ ತಾಯಿಯ ನೋಡಿಕೊಂಡಂತೆ ಕೃಷ್ಣ ತಾಯಿಯನ್ನು ನೋಡಿ....!
Team Udayavani, Jul 14, 2021, 6:38 PM IST
ಯಾದಗಿರಿ: ಕಲ್ಯಾಣ ಕರ್ನಾಟಕಕ್ಕೆ ರಾಜಕೀಯ ಸ್ಥಾನಮಾನ ಸೇರಿ ಎಲ್ಲಾ ವಿಚಾರಗಳಲ್ಲೂ ಅನ್ಯಾಯವಾಗಿದೆ ಎಂದು ಶಾಸಕ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಸುರಪುರ ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಆರ್ ಸ್ ಡ್ಯಾಮ್ ಬಿರುಕು ವಿಷಯದಲ್ಲಿ ನಡೆಯುತ್ತಿರುವ ರಾಜಕೀಯ ವಾಕ್ಸಮರದ ಕುರಿತು ಪ್ರತಿಕ್ರಿಯಿಸಿದ ಅವರು ವೈಯಕ್ತಿಕ ಹೇಳಿಕೆಗಳು ಸರಿಯಲ್ಲ. ಸುಮಲತಾ ಅವರು ಗಣಿಗಾರಿಕೆಯಿಂದ ಮುಂದೆ ಅನಾಹುತ ಆಗಬಹುದು ಎಂದು ಹೇಳಿರಬಹುದು ಎಂದರು.
ಡ್ಯಾಮ್ ಯಾವುದೇ ಇರಲಿ ಈ ಕುರಿತು ರಾಜಕೀಯ ಮಾಡಬಾರದು, ಡ್ಯಾಮ್ ಬಿರುಕು ಬಿಟ್ಟಿದ್ದರೆ ತಾಂತ್ರಿಕ, ಆಡಳಿತ ಅಧಿಕಾರಿಗಳು ಪರಿಶೀಲಿಸುತ್ತಾರೆ.
ಅಕ್ರಮ ಗಣಿಗಾರಿಕೆ ಕುರಿತು ಮಾತನಾಡಿದ ಅವರು ಅಲ್ಲಿನ ಶಾಸಕರೇ ಸುಮಾರು ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದೆ ಎಂದು ಹೇಳುತ್ತಿದ್ದು ಸರ್ಕಾರ ಅಕ್ರಮ ವಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದರು.
ಇದೇ ವೇಳೆ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿ, ಕಾವೇರಿ ತಾಯಿಯ ನೋಡಿಕೊಳ್ಳುವಂತೆ ಕೃಷ್ಣ ತಾಯಿಯನ್ನು ನೋಡಿಕೊಳ್ಳಬೇಕು, ಪ್ರವಾಹ ವೇಳೆ ಕೃಷ್ಣಾನದಿಯಲ್ಲಿ ಲಕ್ಷಾಂತರ ಟಿಎಂಸಿ ನೀರು ನೆರೆ ರಾಜ್ಯಕ್ಕೆ ಹರಿದು ಹೋಗುತ್ತಿದ್ದು ತಿಂಥಣಿ ಬ್ರಿಜ್ ಕಾಲುವೆ ವಿಸ್ತರಣೆಯಿಂದ 42 ರಿಂದ 46 ಟಿಎಂಸಿ ನೀರನ್ನು ಸಂಗ್ರಹಿಸಬಹುದು ಇದರಿಂದ ಈ ಭಾಗದ ಕುಡಿಯುವ ನೀರು ಸೇರಿದಂತೆ ನೀರಾವರಿಗೂ ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ :ಲಾಭ ಗಳಿಸಿದ ಇನ್ಫೋಸಿಸ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ
ಸರ್ಕಾರದ ವಿರುದ್ಧ ಉಮೇಶ್ ಕತ್ತಿ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಅವರು, ಕಲ್ಯಾಣ ಕರ್ನಾಟಕ, ಕರಾವಳಿ, ಮೈಸೂರು ಭಾಗಕ್ಕೆ ಸೂಕ್ತ ಸ್ನಾನ ದೊರಕಿಲ್ಲ. ಉಮೇಶ್ ಕತ್ತಿಯವರಿಗೆ ಯಾವುದಾದರೂ ಒಂದು ರಾಜ್ಯದ ರಾಜ್ಯಪಾಲರನ್ನಾಗಿ ಮಾಡಬೇಕೆಂದು ಪ್ರಧಾನಿ ನರೇಂದ್ರಮೋದಿ ಅವರನ್ನು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಕೇಂದ್ರ ಸಚಿವರಾಗಿದ್ದ ಡಿ.ವಿ. ಸದಾನಂದಗೌಡ ರಾಜ್ಯದ ಮುಖ್ಯಮಂತ್ರಿ ಮಾಡಲಿದ್ದಾರೆ ಎಂಬ ಮಾತುಗಳು ಚರ್ಚೆಯಾಗುತ್ತಿರುವ ವಿಷಯಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುವರು ಎಂದು ಭರವಸೆ ವ್ಯಕ್ತಪಡಿಸಿದರು.
ತಮಗೆ ಸಚಿವ ಸ್ಥಾನ ದೊರಕದಿರುವ ಕುರಿತು ಅಸಮಾಧಾನವಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿ ತಮಗೆ ಯಾವುದೇ ಸಚಿವ ಸ್ಥಾನ ಬೇಡ, ಅಭಿವೃದ್ಧಿಗೆ ಸಮರ್ಪಕ ಅನುದಾನ ಕೊಟ್ಟರೆ ಸಾಕು ಎಂದರು.