ಕನ್ನಡನಾಡು ಕಂಡ ರಾಧಾಕೃಷ್ಣನ್ ವೈಭವ
Team Udayavani, Sep 4, 2021, 6:45 AM IST
ಸರ್ವಪಲ್ಲಿ ರಾಧಾಕೃಷ್ಣನ್ ಹೆಸರು ದೇಶ- ಜಾಗತಿಕ ಮಟ್ಟದಲ್ಲಿ ಅಚ್ಚಳಿಯದೆ ಉಳಿದಿದೆ. ಅವರು ಕನ್ನಡನಾಡಿನಲ್ಲಿ 30ನೆಯ ವಯಸ್ಸಿನಲ್ಲಿಯೇ ಶಿಕ್ಷಕರಾಗಿ ಗಳಿಸಿದ ಜನಪ್ರಿಯತೆ ಮರೆಯು ವಂಥದ್ದಲ್ಲ. ಅವರ ನೇರ ಸೇವೆ ಕಂಡ ಬೆರಳೆಣಿಕೆ ನಾಡುಗಳಲ್ಲಿ ಕನ್ನಡನಾಡೂ ಒಂದೆಂಬುದು ಕರ್ನಾಟಕಕ್ಕೆ ಹೆಮ್ಮೆ. ಮೈಸೂರು ವಿ.ವಿ. (ಮಹಾ ರಾಜಾ ಕಾಲೇಜು) ತಣ್ತೀಶಾಸ್ತ್ರ ವಿಭಾಗದಲ್ಲಿ 1918 ರಿಂದ 21ರ ವರೆಗೆ ಪ್ರಾಧ್ಯಾಪಕರಾಗಿದ್ದ ಮೂರೇ ವರ್ಷಗಳಲ್ಲಿ ದಂತಕಥೆಯಾಗಿ ಹೋದರು.
ಅವರ ಪಾಠ ಆರಂಭಕ್ಕೆ ಮುನ್ನ 15 ನಿಮಿಷ ಪ್ರಶ್ನೋತ್ತರ ಅವಧಿ. “ಇಂದಿನ ವಿಶೇಷವೇನು?’ ಎಂದು ವಿದ್ಯಾರ್ಥಿಗಳನ್ನು ಕೇಳಿದಾಗ ಯಾವ ಪ್ರಶ್ನೆಯನ್ನೂ ಹಾಕಬಹುದಿತ್ತು. ಕಾಫಿ ಒಳ್ಳೆಯದೋ? ಚಹಾ ಒಳ್ಳೆಯದೋ? ತೃಪ್ತಿ ಒಳ್ಳೆಯದೋ? ಮಹತ್ವಾಕಾಂಕ್ಷೆ ಒಳ್ಳೆಯದೋ? ಬಂಧನವಿಲ್ಲದ ಸ್ವಾತಂತ್ರ್ಯ ಸಾಧ್ಯವೆ? ಗುರುಗಳು ಇಂಗ್ಲೆಂಡ್ಗೆ ಹೋಗಲಿಲ್ಲವೇಕೆ? ನಿಮ್ಮಂತೆ ಎಲ್ಲರೂ ನಿಲುವಂಗಿ ಹಾಕಿದರೆ ಚೆನ್ನಾಗಿರುತ್ತದೆಯೆ? – ಇಂತಹ ನೂರಾರು ಪ್ರಶ್ನೆಗಳು ಚರ್ಚೆಗೆ ಬರುತ್ತಿದ್ದವು. ಯಾವ ಪ್ರಶ್ನೆಯೂ ಸಣ್ಣದೂ ಅಲ್ಲ, ದೊಡ್ಡದೂ ಅಲ್ಲ. ಏನೋ ಒಂದು ತಿರುವು ಕೊಟ್ಟು ಸಣ್ಣದನ್ನು ದೊಡ್ಡದಾಗಿಯೂ, ದೊಡ್ಡದನ್ನು ಸಣ್ಣದಾಗಿಯೂ ಮಾಡಿ ಮುಂದೆ 40 ನಿಮಿಷಗಳ ಪಾಠ ನೆರವೇರಿಸುತ್ತಿದ್ದರು. ಯಾವುದೇ ವಿಷಯವಾಗಲೀ ಅಮೃತಧಾರೆಯಾಗುತ್ತಿತ್ತು. ತಣ್ತೀಶಾಸ್ತ್ರ ಕಬ್ಬಿಣದ ಕಡಲೆಯಾದರೂ ಮೃದುವೂ, ಸ್ವಾದವೂ ಆಗುತ್ತಿದ್ದಂತೆ ದೋಷವೂ ಒಂದಿತ್ತು: ಪಾಠವಾದ ಮೇಲೆ “ಕರಗತವಾಯಿತು’ ಎನಿಸುತ್ತಿದ್ದರೂ ಹಾಗಾಗುತ್ತಿರಲಿಲ್ಲ. ಅವರ ತರಗತಿಗೆ ಸಂಬಂಧಪಡದ ವಿದ್ಯಾರ್ಥಿಗಳೂ ಬಂದು ಕುಳಿತುಕೊಳ್ಳುವುದು ಪಾಠದ ಆಕರ್ಷಣೆ. ಇಂತಹ ಅನೇಕ ಶಿಕ್ಷಕರು, ವಿದ್ಯಾರ್ಥಿಗಳೂ ನಾಡಿನಾದ್ಯಂತ ಇದ್ದರು.
1921ರಲ್ಲಿ ಕೋಲ್ಕತ್ತ ವಿ.ವಿ.ಗೆ ಪ್ರಾಧ್ಯಾಪಕರಾಗಿ ಹೋಗುವಾಗ ಅವರಿಗೆ ಸಿಕ್ಕಿದ ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರ ಲಾರದು. ವೈಭವವಲ್ಲ, ಹೃದಯದಿಂದ ನೇರ ಹೊರಹೊಮ್ಮಿದ ಗುರುಭಕ್ತಿ, ಭಕ್ತಿ, ಪ್ರೇಮಗಳ ಚಿಲುಮೆ ಹಠಾತ್ತಾಗಿ ವಿದ್ಯಾರ್ಥಿಗಳೆಲ್ಲರಲ್ಲೂ ಉಕ್ಕಿ ಬಂತು. ಇದಕ್ಕೆ ಯಾರ ನೇತೃತ್ವವೂ ಇದ್ದಿರಲಿಲ್ಲ ಎನ್ನುತ್ತಾರೆ ಕಣ್ಣಾರೆ ಕಂಡ ಶಿಷ್ಯ, ಸಾಹಿತಿ ಎ.ಎನ್.ಮೂರ್ತಿರಾಯರು.
ಆ ದಿನ ರಾಧಾಕೃಷ್ಣನ್ರಿಗೆ ಆಪ್ತರನ್ನು ನೋಡುವುದೂ ಕಷ್ಟವಾಯಿತಂತೆ. ಸಂಜೆ ಹೊತ್ತಿಗೆ ದೊಡ್ಡ ಶಿಷ್ಯಸೇನೆ ಲಕ್ಷ್ಮೀಪುರದಲ್ಲಿದ್ದ ಅವರ ಮನೆ ಬಳಿ ಸೇರಿತು. ಒಂದು ತಂಡ ಅವರನ್ನು ರೈಲ್ವೇ ಸ್ಟೇಶನ್ಗೆ ಕರೆದೊಯ್ಯುವ ಸಾರೋಟ್ಗೆ (ಕೋಚ್) ಅಲಂಕಾರ ಮಾಡಿ ಕುದುರೆಗಳ ಕೆಲಸವನ್ನೂ ನಡೆಸಿತು. ಇನ್ನೊಂದು ಗುಂಪಿಗೆ ರೈಲ್ವೇ ಕಂಪಾರ್ಟ್ಮೆಂಟ್ನ್ನು ಸಿಂಗರಿಸಲು ಸ್ಟೇಶನ್ ಮಾಸ್ಟರರು ನಿರಾಕರಿಸುತ್ತಿರುವಾಗ ಮತ್ತೂಂದು ತಂಡ ಗಾಡಿ ನಿಲ್ಲಿಸಿದ ಕಡೆ ಹೋಗಿ ವಶಪಡಿಸಿಕೊಂಡಾಗಿತ್ತು. ಒರಗುದಿಂಬು, ರತ್ನಗಂಬಳಿ, ಸುಪ್ಪತ್ತಿಗೆಯಂತೆ ನೆಲದ ಮೇಲೂ ಸೀಟಿನ ಮೇಲೂ ಹರಡಿದ್ದ ಹೂವು- ಒಟ್ಟಾರೆ ದೈವಮಂದಿರವನ್ನು ಭಕ್ತರು ಅಲಂಕರಿಸುವಂತೆ ಕಂಪಾರ್ಟ್ಮೆಂಟ್ ಅಲಂಕರಣಗೊಂಡಿತು.
ಒಂದೆಡೆ ಮನೆಯಿಂದ, ಇನ್ನೊಂದೆಡೆ ಕಾಲೇಜಿನಿಂದ, ಮತ್ತೂಂದೆಡೆ ಊರೊಳಗಿಂದ- ಉಪನದಿಗಳು ದೊಡ್ಡ ನದಿಯನ್ನು ಸೇರುವಂತೆ ವಿದ್ಯಾರ್ಥಿಗಳು ಸೇರಿದರು. ಹುಚ್ಚು ಹೊಳೆ ಹರಿದಂತೆ ಪ್ರವಾಹ ಸ್ಟೇಶನ್ಗೆ ಹೊರಟಿತು. ರಸ್ತೆಯಲ್ಲಿ ಇತರ ವಾಹನಗಳಿಗೆ ಅವಕಾಶವಿರಲಿಲ್ಲ. ಎಷ್ಟೋ ಜನರು ಗಾಡಿ ಬಳಿಗೆ ಹೋಗಲು ಶತಪ್ರಯತ್ನ ಮಾಡಿ ವಿಫಲರಾದರು. ಕೋಚ್ ದೂರ ಇದ್ದಾಗಲೇ “ರಾಧಾಕೃಷ್ಣನ್ ಕೀ ಜಯ್’ ಎಂಬ ಘೋಷಣೆ ಸಾವಿರ ಸಾವಿರ ಕಂಠಗಳಿಂದ ಮೊಳಗುತ್ತಿತ್ತು. “ಈ ಸಮುದ್ರಕ್ಕೆ ಹೇಗೆ ತಡೆ ಹಾಕಲಿ’ ಎಂದು ಸ್ಟೇಶನ್ ಮಾಸ್ಟರ್ ಕೈಕೊಡವಿರಬೇಕು. ಆಪ್ತರಾದ ಎ.ಆರ್.ವಾಡಿಯಾ, ಎ.ಸಿ.ಲಿಂಗರಾಜ ಅರಸು ಮತ್ತು ಕೆಲವರು “ಗುಡ್ಬೈ’ ಹೇಳಲು ಹಾತೊರೆಯುತ್ತ ಕೊನೆಗೆ ವಿದ್ಯಾರ್ಥಿಗಳನ್ನು ಕಾಡಿ ಬೇಡಿ ಅವಕಾಶ ಪಡೆದುಕೊಂಡರು. ಅಂದು ಎಷ್ಟು ಜನ ಅತ್ತರೋ ಹೇಳಲಾಗದು. ಭಾರತದ ಉಪಾಧ್ಯಕ್ಷರಾದ ಮೇಲೆ ಶಿಷ್ಯರೊಬ್ಬರೊಡನೆ “ಆ ದಿನ ಶಿಷ್ಯರು ನನ್ನಲ್ಲಿ ತೋರಿದ ವಿಶ್ವಾಸವನ್ನು ನೆನೆದರೆ ಈಗಲೂ ಕಣ್ಣೀರು ಉಕ್ಕುತ್ತದೆ’ ಎಂದರಂತೆ. ಬೀಳ್ಕೊಡುವ ದಿನವೂ ರಾಧಾಕೃಷ್ಣನ್ ಕಣ್ಣೂ ಒದ್ದೆಯಾಗಿರಬೇಕು.
ಶಿಕ್ಷಣ, ತಣ್ತೀಶಾಸ್ತ್ರದಲ್ಲಿ ಮಾಡಬಹುದಾದ ಕೆಲಸವನ್ನು ರಾಜಕೀಯ ವಾತಾವರಣಕ್ಕೆ ಹೋದ ಮೇಲೆ ಮಾಡಲಾಗಲಿಲ್ಲ ಎಂಬ ಮಾತು ಡಿವಿಜಿ ಸಹಿತ ಅನೇಕರದ್ದಿದೆ. ಆದರೆ? ಪಾಶ್ಚಾತ್ಯರು ಮಹಾತ್ಮಾ ಗಾಂಧಿಯವರನ್ನು ಕೂಡ ಕೆಟ್ಟದಾಗಿ ಚಿತ್ರಿಸಿ ಭಾರತ ವಿರುದ್ಧ ಪುಸ್ತಕಗಳನ್ನು ಬರೆಸಿ ಪ್ರಚಾರ ಮಾಡಿದ್ದರು. ಸ್ವಾತಂತ್ರ್ಯ ಬರುವ ಮೊದಲು ಪಶ್ಚಿಮ ದೇಶಗಳು ಭಾರತಕ್ಕೆ ಮನ್ನಣೆ ಕೊಡುತ್ತಿರಲಿಲ್ಲ. ಪಾಶ್ಚಾತ್ಯರಿಗಿದ್ದ ಈ ಕಲ್ಪನೆಯನ್ನು ತೊಡೆದು ಹಾಕುವಲ್ಲಿ ರಾಧಾಕೃಷ್ಣನ್ ಪ್ರಯತ್ನಿಸಿದರು. ಪಶ್ಚಿಮ ದೇಶಗಳಲ್ಲಿ ಇವರ ಉಪನ್ಯಾಸಕ್ಕೆ ಎದ್ದು ನಿಂತು ಜಯಕಾರ ಮಾಡಿ Standing ovation ಕೊಟ್ಟದ್ದನ್ನೂ ಕಂಡವರಿದ್ದಾರೆ. ಇವರಿಂದಾಗಿ ಭಾರತದ ಕುರಿತು ಸದಭಿಪ್ರಾಯ ಜಾಗತಿಕವಾಗಿ ಆಯಿತು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಇದರಿಂದಾಗಿ ಭಾರತಕ್ಕೆ ಆಗಬೇಕಾದದ್ದೇನು ಎಂಬ ಪ್ರಶ್ನೆ ಬರುತ್ತದೆ. “ಒಲ್ಲವರಿಂದಲೂ ಹೊಗಳಿಕೆಯನ್ನು ನಾವು ಬೇಡದೆ ಪಡೆಯುವಂಥ ಶಕ್ತಿ ಬೆಳೆಸಿಕೊಳ್ಳುವುದು ಕರ್ತವ್ಯ’ ಎಂದೂ ಮೂರ್ತಿರಾಯರು ಹೇಳಿದ್ದಾರೆ. “ನೀವು ಇಂಗ್ಲೆಂಡಿಗೇಕೆ ಹೋಗಲಿಲ್ಲ’ ಎಂದು ತರಗತಿಯಲ್ಲಿ ಕೇಳುತ್ತಿದ್ದಾಗ ‘We shall go, but we shall go there to teach’ ಎಂದು ಉತ್ತರಿಸಿದ್ದರು, ಆದದ್ದೂ ಹಾಗೆಯೇ.
1962ರಿಂದ 67ರ ವರೆಗೆ ರಾಷ್ಟ್ರಪತಿಯವರಾಗಿದ್ದ ಸಂದರ್ಭ ಶಿಷ್ಯರು ಅವರ ಹುಟ್ಟುಹಬ್ಬ ಆಚರಿಸಲು ಕೋರಿದಾಗ ಶಿಕ್ಷಕರ ದಿನ ಆಚರಿಸಲು ಸೂಚಿಸಿದಂತೆ 1962ರಲ್ಲಿ ಭಾರತದಲ್ಲಿ ಪ್ರಥಮ ಶಿಕ್ಷಕ ದಿನಾಚರಣೆ ಆರಂಭಗೊಂಡಿತು. ರವಿವಾರ ಶಿಕ್ಷಕ ದಿನಾಚರಣೆ ನಡೆಯುವಾಗ ರಾಧಾಕೃಷ್ಣನ್ ಕಾರ್ಯಶ್ರದ್ಧೆಯನ್ನು ಶಿಕ್ಷಕರು ಮಾತ್ರವಲ್ಲ ಎಲ್ಲರೂ ಎಲ್ಲ ಕಾಲಕ್ಕೂ ಪಾಲಿಸುವುದು ಅಗತ್ಯ, ಆಗಲೇ ಸುಭಿಕ್ಷ ಕಾಲ ಬಂತೆನ್ನಬಹುದು.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
World Water Day: ಜುಳು ಜುಳು ಸದ್ದೇಕೆ ಉರಿ ಮೌನ
ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫಕೀರ
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು