ಬ್ರಿಟಿಷ್ ವಸಾಹತು ಶಾಹಿಗೆ ಸಿಂಹಸ್ವಪ್ನ…ಬುಡಕಟ್ಟು ಜನಾಂಗದ ರಾಣಿ ಗೈಡಿನ್ಲಿಯು ಬಗ್ಗೆ ಗೊತ್ತಾ?
ರಾಣಿ ಗೈಡಿನ್ಲಿಯು ತನ್ನದೇ ಶೈಲಿಯಲ್ಲಿ ಅಸಹಕಾರ ಚಳವಳಿಯೊಂದನ್ನು ಹುಟ್ಟುಹಾಕಿದ್ದರು.
Team Udayavani, Aug 6, 2022, 4:02 PM IST
ಅಂದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷ್ ವಸಾಹತುಶಾಹಿ ವಿರುದ್ಧ ದೇಶದ ಮೂಲೆ, ಮೂಲೆಯಿಂದಲೂ ಪ್ರಾಣತ್ಯಾಗ ಮಾಡಿದವರಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಿಚ್ಚಿನಲ್ಲಿ ಅದೆಷ್ಟೋ ಮಂದಿ ಮನೆ, ಮಠ ಕಳೆದುಕೊಂಡು, ತಮ್ಮ ಸರ್ವಸ್ವವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು. ಅಂತಹ ಮಹಾನುಭಾವ ಹೋರಾಟಗಾರರ ನೂರಾರು ಹೆಸರು ಬೆಳಕಿಗೆ ಬಂದಿದ್ದರೂ ಕೂಡಾ ಹಲವಾರು ಮಂದಿ ಚಾರಿತ್ರಿಕ ದಾಖಲೆಗಳಿಂದ ವಂಚಿತರಾಗಿ ನಿಗೂಢವಾಗಿ ಉಳಿದುಬಿಟ್ಟಿದ್ದಾರೆ.
ಈಕೆ ಬುಡಕಟ್ಟು ಜನಾಂಗದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ:
ರಾಣಿ ಗೈಡಿನ್ಲಿಯು ಎಂಬಾಕೆ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದಾರೆ. ಬುಡಕಟ್ಟು ಜನಾಂಗದವರ ಹಕ್ಕುಗಳಿಗಾಗಿ ಈಕೆ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಯಾವುದೇ ಭಯವಿಲ್ಲದೆ, ದಿಟ್ಟತನದಿಂದ ಹೋರಾಟ ನಡೆಸಿದಾಕೆ ಈ ರಾಣಿ ಗೈಡಿನ್ಲಿಯು.
1930ರಲ್ಲಿ ನಾಗಾ ಬುಡಕಟ್ಟು ಜನಾಂಗದವರ ಹಕ್ಕುಗಳಿಗಾಗಿ ರಾಣಿ ಗೈಡಿನ್ಲಿಯು ತನ್ನದೇ ಶೈಲಿಯಲ್ಲಿ ಅಸಹಕಾರ ಚಳವಳಿಯೊಂದನ್ನು ಹುಟ್ಟುಹಾಕಿದ್ದರು. ಇದರ ಪರಿಣಾಮ ಈ ಪ್ರದೇಶದಲ್ಲಿ ಬ್ರಿಟಿಷರಿಗೆ ಕಾರ್ಯನಿರ್ವಹಿಸುವುದೇ ದೊಡ್ಡ ಸವಾಲಾಗಿ ಬಿಟ್ಟಿತ್ತು!
ಇಂದಿನ ಮಣಿಪುರದ ತೆಮೆಂಗ್ ಗ್ಲಾಂಗ್ ಜಿಲ್ಲೆಯಲ್ಲಿ 1915 ಜನವರಿ 15ರಂದು ಜನಿಸಿದ್ದ ರಾಣಿ ಗೈಡಿನ್ಲಿಯು ರೋಂಗ್ಮೈ ನಾಗಾ ಬುಡಕಟ್ಟಿಗೆ ಸೇರಿದವರಾಗಿದ್ದರು. ಬುಡಕಟ್ಟು ಸಂಸ್ಕೃತಿ, ಸಮುದಾಯದ ರಕ್ಷಣೆಗಾಗಿ ಸದಾ ಉತ್ಸಾಹದಲ್ಲಿದ್ದ ಗೈಡ್ಲಿನಿಯು ತನ್ನ 13ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳವಳಿಗೆ ಕಾಲಿಟ್ಟಿದ್ದಳು.
ಬ್ರಿಟಿಷರ ವಿರುದ್ಧ ಸೆಣಸಾಟ: ರಾಣಿಗೆ 14 ವರ್ಷ ಜೈಲುಶಿಕ್ಷೆ:
1930ರಲ್ಲಿ ಅಂದರೆ ತನ್ನ 13ನೇ ವಯಸ್ಸಿನಲ್ಲಿ ರಾಣಿ ಗೈಡಿನ್ಲಿಯು ಸ್ವಾತಂತ್ರ್ಯ ಸಮರಕ್ಕೆ ಕೈಜೋಡಿಸಿದ್ದರು. ನಂತರದ ಮೂರು ವರ್ಷಗಳ ಕಾಲ ಬ್ರಿಟಿಷರನ್ನು ತನ್ನ ಪ್ರದೇಶದಿಂದ ಹೊರಹಾಕಲು ಜೀವನವನ್ನು ಮೀಸಲಿಟ್ಟಿದ್ದರು.
ಬ್ರಿಟಿಷ್ ಆಳ್ವಿಕೆ ವಿರುದ್ಧ ದಂಗೆಯ ನೇತೃತ್ವದ ವಹಿಸಿದ್ದ ತನ್ನ ಸೋದರ ಸಂಬಂಧಿ ಹೈಪೋ ಜಡೋನಾಂಗ್ ಅವರ ಧಾರ್ಮಿಕ(ಹರೇಕಾ) ಚಳವಳಿಯಲ್ಲಿ ರಾಣಿ ಕೈಜೋಡಿಸಿದ್ದಳು. ನಂತರ ಈ ಚಳವಳಿಯೇ ಬ್ರಿಟಿಷರ ವಿರುದ್ಧದ ಹೋರಾಟವಾಗಿ ಮಾರ್ಪಟ್ಟಿತ್ತು. ಈ ಹೋರಾಟ ಝೆಲಿಯಾಂಗ್ ಗ್ರೋಗ್ ಬುಡಕಟ್ಟು ಜನರನ್ನು ಹೆಚ್ಚು ಆಕರ್ಷಿಸಿದ ಪರಿಣಾಮ ಹೈಪೋ ಹೋರಾಟ ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೂ 1931ರಲ್ಲಿ ಜಡೋನಾಂಗ್ ಅವರನ್ನು ಬ್ರಿಟಿಷರು ಸೆರೆಹಿಡಿದು ಬಿಟ್ಟಿದ್ದರು. ಕಾಟಾಚಾರದ ವಿಚಾರಣೆ ನಂತರ 1931 ಆಗಸ್ಟ್ 29ರಂದು ವಸಾಹತುಶಾಯಿ ಆಡಳಿತವನ್ನು ವಿರೋಧಿಸಿದ್ದಕ್ಕೆ ನೇಣುಗಂಬಕ್ಕೆ ಏರಿಸಿದ್ದರು.
ಆದರೆ ಜಡೋನಾಂಗ್ ಸಾವಿನ ನಂತರ ಸ್ವಾತಂತ್ರ್ಯ ಹೋರಾಟದ ಕಿಚ್ಚು ಅಲ್ಲಿಗೆ ಕೊನೆಗೊಳ್ಳಲಿಲ್ಲ. ಬದಲಾಗಿ ಸೋದರ ಸಂಬಂಧಿಯ ಹೋರಾಟವನ್ನು ರಾಣಿ ಗೈಡಿನ್ಲಿಯು ಮುಂದುವರಿಸಿದ್ದಳು.
ಕುಕೀ ಜನಾಂಗ (ಇವರು ಮಿಜೋರಾಂ ಮತ್ತು ಮಣಿಪುರದ ಪರ್ವತ ಪ್ರದೇಶಗಳಲ್ಲಿ ವಾಸವಾಗಿದ್ದರು) ಮತ್ತು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ರಾಣಿ ಗೈಡಿನ್ಲಿಯುವನ್ನು ಬ್ರಿಟಿಷರು ಬಂಧಿಸಿದ್ದರು. ಆಗ ಆಕೆಯ ವಯಸ್ಸು ಕೇವಲ 16. ಕೋರ್ಟ್ ವಿಚಾರಣೆಯಲ್ಲಿ ರಾಣಿಗೆ 14 ವರ್ಷಗಳ ಜೈಲುಶಿಕ್ಷೆ ವಿಧಿಸಲಾಯಿತು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 1947ರಲ್ಲಿ ಗೈಡಿನ್ಲಿಯು ಅವರನ್ನು ಪ್ರಧಾನಿ ಜವಾಹರಲಾಲ್ ನೆಹರು ಅವರ ಆದೇಶದ ಮೇರೆಗೆ ಬಂಧಮುಕ್ತಗೊಳಿಸಲಾಯಿತು. 14 ವರ್ಷಗಳ ಜೈಲುಶಿಕ್ಷೆಯ ನಂತರ 1952ರವರೆಗೂ ಗೈಡಿನ್ಲಿಯು ತನ್ನ ಕಿರಿಯ ಸಹೋದರ ಮರಾಂಗ್ ಜೊತೆ ತುಯೆನ್ಸಾಂಗ್ ನ ವಿಮ್ರಾಪ್ ಗ್ರಾಮದಲ್ಲಿ ವಾಸವಾಗಿದ್ದರು.
ಗೈಡಿನ್ಲಿಯು ಅವರನ್ನು ಪ್ರಧಾನಿ ಜವಾಹರಲಾಲ್ ನೆಹರು “ಬೆಟ್ಟಗಳ ಮಗಳು” ಎಂದು ಬಣ್ಣಿಸಿದ್ದಲ್ಲದೇ, ಆಕೆಯ ಧೈರ್ಯಕ್ಕಾಗಿ “ರಾಣಿ” ಎಂಬ ಬಿರುದನ್ನು ನೀಡಿದ್ದರು. ಅಂದಿನಿಂದ ಈಕೆ ರಾಣಿ ಗೈಡಿನ್ಲಿಯು ಎಂದೇ ಖ್ಯಾತರಾದರು. ಅಲ್ಲದೇ 1982ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ತನ್ನ ಹುಟ್ಟೂರಾದ ಲೊಂಗ್ಕಾವೋದಲ್ಲಿ ವಾಸವಾಗಿದ್ದ ರಾಣಿ 1993ರ ಫೆಬ್ರುವರಿಯಲ್ಲಿ ಇಹಲೋಕ ತ್ಯಜಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA