ಕೃಷ್ಣಾ ನದಿಗೆ 2.58 ಲಕ್ಷ ಕ್ಯೂಸೆಕ್ ನೀರು: ರಾಜ್ಯ ಹೆದ್ದಾರಿ ಬಂದ್ ಭೀತಿ
Team Udayavani, Aug 4, 2019, 9:00 PM IST
ಸಾಂದರ್ಭಿಕ ಚಿತ್ರ
ಬಾಗಲಕೋಟೆ : ಜಿಲ್ಲೆಯ ಕೃಷ್ಣಾ ನದಿಗೆ ರವಿವಾರ 2.58 ಲಕ್ಷ ಕ್ಯೂಸೆಕ್ ನೀರು, ಮಹಾರಾಷ್ಟ್ರದಿಂದ ಹರಿದು ಬರುತ್ತಿದ್ದು, ಸೋಮವಾರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಧಾರವಾಡ ವಿಜಯಪುರ ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗುವ ಭೀತಿ ಎದುರಾಗಿದೆ.
ಧಾರವಾಡ ವಿಜಯಪುರ ರಾಜ್ಯ ಹೆದ್ದಾರಿ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಮೂಲಕ ಹಾದು ಹೋಗಿದ್ದು, ಚಿಕ್ಕ ಪಡಸಲಗಿ ಬಳಿ ಸೇತುವೆ ನಿರ್ಮಿಸಲಾಗಿದೆ. ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ರವಿವಾರ ಸೇತುವೆ ಮೇಲೆ ನೀರು ಹರಿಯಲು ಒಂದು ಅಡಿ ಮಾತ್ರ ಬಾಕಿ ಇತ್ತು. ಸಧ್ಯ ನದಿಗೆ 2.48 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೊಯ್ನಾ ಜಲಾಶಯದಿಂದ ಮತ್ತೆ 10 ಸಾವಿರ ಕ್ಯೂಸೆಕ್ ನೀರು ಹೆಚ್ಚುವರಿಯಾಗಿ ಬಿಡಲಾಗಿದೆ. ಈ ನೀರು ಸೋಮವಾರ ಸಂಜೆ ಚಿಕ್ಕಪಡಸಲಗಿ ಬ್ಯಾರೇಜ್ ತಲುಪಲಿದ್ದು, ಆ ವೇಳೆ ಹೆದ್ದಾರಿ ಸಂಚಾರಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 10 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಬಿಡುಗಡೆ. ಸೋಮವಾರ ಸಂಜೆಯ ವೇಳೆಗೆ ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಇನ್ನೂ ಹೆಚ್ಚಾಗಲಿರುವ ಪ್ರವಾಹ ಭೀತಿ. ಧಾರವಾಡ ವಿಜಯಪುರ ರಾಜ್ಯ ಹೆದ್ದಾರಿ ಮೇಲೆ ಭಾರಿ ವಾಹನ ಸಂಚಾರ ನಿಷೇಧ.
ಕೃಷ್ಣಾ ನದಿ ಅಕ್ಕ ಪಕ್ಕದ ಹಳ್ಳಿಯ ಜನರು ಕೂಡಲೇ ಜಾನುವಾರು ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳು ಜಿಲ್ಲಾಡಳಿತ ಮನವಿ. ಜಮಖಂಡಿ ತಾಲೂಕಿನ ವಿವಿಧೆಡೆ ಗಂಜಿ ಕೇಂದ್ರ ತೆರೆಯಲು ತಡರಾತ್ರಿ ನಿರ್ಧಾರ. ಜಾನುವಾರುಗಳಿಗೆ ಮೇವು ವಿತರಿಸಲು ಜಮಖಂಡಿ ತಾಲೂಕು ಆಡಳಿತ ತಯಾರಿ.