ಕೃಷ್ಣ ಅಳಿಯ ಸಿದ್ದಾರ್ಥ್ ಕಾಫಿ ಸಾಮ್ರಾಜ್ಯ ಕಟ್ಟಿದ ಕಥೆ
Team Udayavani, Jul 30, 2019, 9:34 AM IST
ಮಂಗಳೂರು: ಮಾಜಿ ಮುಖ್ಯಮಂತ್ರಿ, ಎಸ್. ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ದಾರ್ಥ್ ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಪ್ರತಿಷ್ಠಿತ ಉದ್ಯಮಿಯಾಗಿರುವ ಸಿದ್ದಾರ್ಥ್ ಕೆಫೆ ಕಾಫಿ ಡೇ ಎಂಬ ಬಹುರಾಷ್ಟ್ರೀಯ ಕಂಪೆನಿಯ ಮಾಲಕ. ಇದಲ್ಲದೇ ಎಬಿಸಿ ಸಂಸ್ಥೆಗಳು ಮತ್ತು ಚೆನ್ನೈನ ಲಾಜಿಸ್ಟಿಕ್ ಕಂಪೆನಿಗಳನ್ನು ಸಿದ್ದಾರ್ಥ್ ಕುಟುಂಬ ನಡೆಸುತ್ತಿದೆ.
ವಿ.ಜಿ. ಸಿದ್ದಾರ್ಥ್ 1996ರ ಜುಲೈನಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಕೆಫೆ ಕಾಫಿ ಡೇಯ ಮೊದಲ ಶಾಖೆ ಆರಂಭಿಸಿದ್ದರು. ಸದ್ಯ ದೇಶ ವಿದೇಶಗಳಲ್ಲಿ ನೂರಾರು ಶಾಖೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ದೊಡ್ಡ ಮಟ್ಟದಲ್ಲಿ ಬೆಳೆದಿದೆ.
ಚಿಕ್ಕಮಗಳೂರಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಎಕರೆ ಜಾಗದಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ಕೆಫೆ ಕಾಫಿ ಡೇ, ಮಲೇಶಿಯಾ, ಈಜಿಪ್ಟ್, ಆಸ್ಟ್ರೀಯಾ ಮುಂತಾದ ದೇಶಗಳಲ್ಲಿ ತನ್ನ ಶಾಖೆ ಹೊಂದಿದೆ.