ರೈಲು ಬೋಗಿಯಲ್ಲಿ ಮಹಿಳೆ ಆತ್ಮಹತ್ಯೆ ಯತ್ನ : ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬದುಕುಳಿದ ಮಹಿಳೆ
Team Udayavani, Jan 11, 2022, 2:44 PM IST
ಸಾಗರ : ಮೈಸೂರು ತಾಳಗುಪ್ಪ ನಡುವೆ ಸಂಚರಿಸುವ ರೈಲು ತನ್ನ ಕೊನೆಯ ತಾಣ ತಲುಪಿದ ನಂತರ ಬೋಗಿಯ ಬಾಗಿಲುಗಳನ್ನು ಭದ್ರಪಡಿಸಿಕೊಂಡು ಎರಡು ಮಕ್ಕಳ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು ರೈಲ್ವೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಮಹಿಳೆಯನ್ನು ರಕ್ಷಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ತಾಳಗುಪ್ಪ ರೈಲ್ವೆ ನಿಲ್ದಾಣಕ್ಕೆ ಮೈಸೂರು – ತಾಳಗುಪ್ಪ ರೈಲು ಗಾಡಿ ಸಂಖ್ಯೆ 16227 ಬೆಳಗ್ಗೆ ಏಳರ ಸಮಯದಲ್ಲಿ ಮುಟ್ಟಿದೆ. ಅರ್ಧ ಘಂಟೆಯ ಬಳಿಕ ರೈಲಿನಲ್ಲಿ ಎಲ್ಲ ಪ್ರಯಾಣಿಕರು ಇಳಿದ ನಂತರ ಅಪರಿಚಿತ ಮಹಿಳೆ ತಾನಿದ್ದ ಬೋಗಿಯ ಎಲ್ಲ ಬಾಗಿಲುಗಳನ್ನು ಹಾಕಿಕೊಂಡು ತನ್ನ ಚೂಡಿದಾರ್ ವೇಲ್ ಬಳಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಮಯದಲ್ಲಿ ರೈಲ್ವೆಯ ಕ್ಲೀನಿಂಗ್ ಹಾಗೂ ವಾಟರಿಂಗ್ ವಿಭಾಗದ ಕೆ.ರವಿ ಹಾಗೂ ತಾಂತ್ರಿಕ ಸಿಬ್ಬಂದಿ ಜಯಶೀಲಾ ಗಮನಿಸಿದ್ದಾರೆ. ತಕ್ಷಣ ಹೊರಗಿನಿಂದಲೇ ಮಹಿಳೆಯ ಕೈಹಿಡಿದು ಆಕೆಯ ಮೂಲಕವೇ ರೈಲು ಬೋಗಿಯ ಬಾಗಿಲು ತೆಗೆಸಿದ ರೈಲ್ವೆ ಸಿಬ್ಬಂದಿ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರೈಲಿನ ಬೋಗಿಯೊಳಗೆ ಮಹಿಳೆಯ ಪುಟ್ಟ ಮಕ್ಕಳು ಕೂಡಾ ಇದ್ದರು ಎನ್ನಲಾಗಿದೆ. ಸಿಬ್ಬಂದಿಗಳು ಈ ಮೂವರನ್ನು ರೈಲ್ವೆ ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ, ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.
ಈ ನಡುವೆ ಮಹಿಳೆಯನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಮುಂದಿನ ವರ್ಷದಿಂದ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಟಾಟಾ ಗ್ರೂಪ್ ತೆಕ್ಕೆಗೆ