ಇರುವುದೊಂದೇ ಭೂಮಿ; ನಮಗಾಗಿ ಸಂರಕ್ಷಿಸೋಣ
Team Udayavani, Apr 22, 2021, 6:50 AM IST
ಭೂಮಿಯನ್ನು ದೇವರು ಎಂದು ಪೂಜಿಸ ಲಾಗುತ್ತದೆ. ಭೂ ತಾಯಿಯ ತಾಳ್ಮೆ ಮತ್ತು ಸಹನಾ ಶಕ್ತಿಯಿಂದಾಗಿ ಇಡೀ ಜಗತ್ತು ತಲೆ ಎತ್ತಿ ನಿಂತಿದೆ. ಗಾತ್ರದಲ್ಲಿ ಸೌರಮಂಡಲದ 5ನೇ ಅತ್ಯಂತ ದೊಡ್ಡ ಗ್ರಹ ಭೂಮಿ. ಲಕ್ಷ ಕೋಟಿ ಜೀವ ಸಂಕುಲವನ್ನು ಜೀವ ವೈವಿಧ್ಯತೆಯನ್ನು ಈ ಭೂ ತಾಯಿ ಸಲಹು ತ್ತಿದ್ದಾಳೆ. ನೀರು, ಗಿಡ- ಮರ ಹೀಗೆ ಜೀವ ಸಂಕುಲ ಬದುಕಲುಬೇಕಾದ ಎಲ್ಲ ಸೌಲಭ್ಯಗಳನ್ನು ಹೊಂದಿ ರುವ ಕಾರಣ ಇತರ ಗ್ರಹಗಳಿಗಿಂತ ಭೂಮಿ ಭಿನ್ನವಾಗಿ ಗುರುತಿಸಿಕೊಂಡಿದೆ. ಭೂಮಿಯನ್ನು ಸಂರಕ್ಷಿಸುವ ಮಾತುಗಳು ಬಂದಾಗ “ಇರುವುದೊಂದೇ ಭೂಮಿ’ ಎಂದು ಆಗಾಗ ಸಂಬೋಧಿಸುವುದು ಕೂಡ ಇದೇ ಕಾರಣಕ್ಕೆ. ಭಾರತ ಸಹಿತ ಬಹುತೇಕ ರಾಷ್ಟ್ರಗಳಿಗೆ ಭೂಮಿ ತಾಯಿ ಸಮಾನ.
ಭೂಮಿಯ ಸಂರಚನೆಯೂ ಅಷ್ಟೇ ರೋಚಕವಾಗಿದೆ. ಸುಸ್ಥಿರವಾದ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಜೀವಿಗಳು ವಾಸಿಸಲು ಯೋಗ್ಯವಾದ ಏಕೈಕ ಸ್ಥಳವಾಗಿದೆ. ಹಾಗಾಗಿ ಭೂಮಿಗೆ ತಾಯಿ ಸ್ಥಾನ ನೀಡಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆ ಮಾತಿನ ಅರ್ಥ ಕಳೆದುಕೊಳ್ಳುತ್ತಿದೆ. ಭೂಮಿ ಕುರಿತಾದ ಕಾಳಜಿ ಬರೀ ಅಕ್ಷರಕ್ಕೆ ಮತ್ತು ಭಾಷಣಕ್ಕೆ ಸೀಮಿತವಾಗುತ್ತಿದೆ. ಮನುಷ್ಯ ತನ್ನ ಸುಖ ಮತ್ತು ವೈಭೋಗದ ಜೀವನಕ್ಕಾಗಿ ಭೂಮಿಯ ಒಡಲನ್ನು ಬಗೆದು ಬರಿದು ಮಾಡು ತ್ತಿದ್ದಾನೆ. ನೈಸರ್ಗಿಕ ಸಂಪತ್ತನ್ನು ದೋಚಿ ತಾನು ಶ್ರೀಮಂತನಾಗಲು ಹಂಬಲಿಸುತ್ತಿದ್ದಾನೆ. ಇದರಿಂದ ಸಂತುಲಿತ ಪರಿಸರವೂ ಕೂಡ ನಾಶವಾಗುತ್ತಿದೆ.
ನೀರು, ವಾಯು ಮಲಿನವಾಗುತ್ತಿದೆ. ಜೀವವೈವಿಧ್ಯ ಅಳಿವಿನಂಚಿಗೆ ತಲುಪಿದೆ. ಮನುಷ್ಯನಲ್ಲಿ ಹೆಚ್ಚುತ್ತಿರುವ ಸಂಪತ್ತಿನ ದಾಹದಿಂದಾಗಿ ಈ ಎಲ್ಲ ಕೃತ್ಯಗಳು ನಡೆ ಯುತ್ತಲೇ ಇವೆ. ಇದರಿಂದ ಸಂಭವಿಸಬಹುದಾದ ಅಪಾಯವನ್ನು ಮಾನವ ಅರಿತಿದ್ದರೂ ಅಂಥ ಕೃತ್ಯಗಳಿಗೆ ಕಡಿವಾಣ ಹಾಕುವ ಅಥವಾ ಪರಿಸರ ಸಂರಕ್ಷಿಸುವತ್ತ ಕಾರ್ಯಪ್ರವೃತ್ತನಾಗುತ್ತಿಲ್ಲ.
ಈ ಬಾರಿಯ “ಭೂ ದಿನ’ ಈ ಹಿಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ಕಳೆದ ವರ್ಷ ಜಗತ್ತನ್ನು ಕಾಡಿದ ಕೊರೊನಾ ತನ್ನ ಎರಡನೇ ಬಾಹುವನ್ನು ವಿಸ್ತರಿಸಿದ ಕಾರಣ ಜಗತ್ತಿನ ಕೆಲವೊಂದು ರಾಷ್ಟ್ರಗಳು ಮತ್ತೆ ಲಾಕ್ಡೌನ್ನ ಮೊರೆ ಹೋಗಿವೆ. ಕಳೆದ ವರ್ಷ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಹೇರಿದ್ದರ ಪರಿಣಾಮವಾಗಿ ಜನರು ಮನೆಯೊಳಗೆ ಬಂಧಿಯಾಗಿದ್ದರು. ಇದು ನಮ್ಮ ಪ್ರಪಂಚದ ಪರಿಸರ ವ್ಯವಸ್ಥೆಗೆ “ಆಮ್ಲಜನಕ’ ವನ್ನು ಒದಗಿಸಿದಂತಾಗಿತ್ತು. ಜನರ ಚಲನವಲನ ಮತ್ತು ಚಟುವಟಿಕೆಗಳು ಕಡಿಮೆಯಾದ ಕಾರಣ ಪರಿಸರ ಮಾಲಿನ್ಯ ಕಡಿಮೆಯಾಗಿತ್ತು. ಹೀಗೆ ಪರಿಸರ ವ್ಯವಸ್ಥೆಯಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆ ಗಳಾಗಿದ್ದವು. ಕಳೆದ ಕೆಲವು ವರ್ಷಗಳಿಂದ ಜಾಗತಿಕ ಹವಾಮಾನದಲ್ಲಿ ಭಾರೀ ಬದಲಾವಣೆಗಳನ್ನು ನಾವು ಕಾಣತೊಡಗಿದ್ದೇವೆ.
ಭೌಗೋಳಿಕವಾಗಿ ವಾತಾವ ರಣದಲ್ಲಿ ವ್ಯತ್ಯಯವಾಗಿದ್ದು, ಜಾಗತಿಕ ತಾಪಮಾನ ಹೆಚ್ಚುತ್ತಲೇ ಸಾಗಿದೆ. ಅರಣ್ಯಗಳು ಬರಿದಾಗುತ್ತಿದ್ದು, ಕಾಂಕ್ರೀಟ್ ಕಟ್ಟಡಗಳು ಆಗಸದೆತ್ತರಕ್ಕೆ ಬೆಳೆದು ನಿಂತಿವೆ. “ಭೂಮಿ ಇರುವುದು ಬಗೆಯಲು ಮತ್ತು ಕಟ್ಟಡ ಗಳನ್ನು ನಿರ್ಮಾಣಕ್ಕೆ’ ಎಂಬ ತೀರ್ಮಾನಕ್ಕೆ ಜನ ಬಂದಂತಿದೆ.
ಇತ್ತ ಮಾನವ ತನ್ನ ತಪ್ಪು, ಅತಿರೇಕಗಳನ್ನು ಮುಂದುವ ರಿಸುತ್ತಿದ್ದರೆ, ಅತ್ತ ಭೂಮಿ ತಾಯಿ ನೂರಾರು ಅವಘಡಗಳ ಮೂಲಕ ಎಚ್ಚರಿಕೆ ಕೊಡುತ್ತಿದ್ದಾಳೆ. ಈ ಎಲ್ಲ ಸಂದರ್ಭಗಳಲ್ಲಿ ಮಾನವನ ವರ್ತನೆಯ ಬಗೆಗೆ ಒಂದಿಷ್ಟು ಚರ್ಚೆಗಳು ನಡೆಯುತ್ತವೆಯಾದರೂ ವಾರ, ತಿಂಗಳು ಕಳೆದ ಬಳಿಕ ನಮ್ಮ ಮನಃಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದೆ ಯಥಾಪ್ರಕಾರ ನಮ್ಮ ವರ್ತನೆಗಳನ್ನು ಮುಂದುವರಿಸುತ್ತಲೇ ಬಂದಿ ದ್ದೇವೆ. ಇದಕ್ಕೆ ತೀರಾ ಇತ್ತೀಚಿನ ನಿದರ್ಶನ ಎಂದರೆ ಕೊರೊನಾ ಸಾಂಕ್ರಾಮಿಕ ಪಸರಿಸಿದ ಸಂದರ್ಭ. ಇಷ್ಟೆಲ್ಲ ನಮ್ಮ ಕಣ್ಣೆದುರೇ ನಡೆಯುತ್ತಿದ್ದರೂ ನಾವು ಗುಲಗಂಜಿ ಯಷ್ಟೂ ಬದಲಾಗಿಲ್ಲ ಎಂಬುದು ದುರಂತ.
ನಮ್ಮ ಹಕ್ಕು, ಕರ್ತವ್ಯಗಳಲ್ಲಿ ಕಿಂಚಿತ್ ಹಸ್ತಕ್ಷೇಪ, ಅನ್ಯಾಯವಾದಾಗಲೂ ಬೀದಿಗಿಳಿದು ಹೋರಾ ಡುತ್ತೇವೆ. ಆದರೆ ಅನ್ನ, ಆಹಾರ, ಗಾಳಿಯನ್ನಿತ್ತು ನಮ್ಮನ್ನು ಪೋಷಿಸುವ ಪರಿಸರದ ಮೇಲೆ ನಾವು ಇಷ್ಟೆಲ್ಲ ಅನ್ಯಾಯ ಎಸಗುತ್ತಿದ್ದರೂ ಒಂದು ದಿನವೂ ನಾವು ಆ ಕುರಿತು ಚಿಂತಿಸಿಯೇ ಇಲ್ಲ. ಈ ವಿಷಯದಲ್ಲಿ ನಮ್ಮದು ದಿವ್ಯ ಮೌನ. ಭೂಮಿಯ ದುರ್ಬಳಕೆ, ಪರಿಸರದ ಮೇಲಿನ ಅತ್ಯಾಚಾರದ ತೀವ್ರತೆ ನಮಗಿನ್ನೂ ಅರ್ಥ ವಾಗಿಲ್ಲ. ಆದರೆ ಇದು ಅರ್ಥವಾಗುವ ಕಾಲ ತುಂಬಾ ದೂರವಿಲ್ಲ ಎಂಬುದನ್ನು ಈ ಪ್ರಕೃತಿ ಪದೇಪದೆ ಎಚ್ಚರಿಸುತ್ತಲೇ ಇದೆ.
ಸ್ವ ಹಿತಾಸಕ್ತಿ ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಬೀದಿಗಿಳಿಯುವ ನಾವು ಅರಣ್ಯ ಉಳಿಸಲು, ಅಕ್ರಮ ಗಣಿಗಾರಿಕೆ ತಡೆಯಲು ಹೋರಾಟ ಮಾಡಿದ ಉದಾಹರಣೆಗಳು ತೀರಾ ವಿರಳ. ಇತ್ತೀಚೆಗೆ ಕೊಡಗಿನಲ್ಲಿ ಹೆಲಿಟೂರಿಸಂ ನಿರ್ಮಿಸಲು ದೊಡ್ಡ ಪ್ರಮಾಣದ ಮರಗಳ ಮಾರಣಹೋಮಕ್ಕೆ ಆದೇಶವಾದಾಗ ಅದನ್ನು ಅಲ್ಲಿನ ಜನ, ಜನಪ್ರತಿನಿಧಿಗಳು ಪಕ್ಷಭೇದ ಮರೆತು ಪ್ರತಿಭಟಿಸಿದ್ದರು. ಇಂಥ ಕಾರ್ಯಗಳು ದೇಶದ ಮೂಲೆ ಮೂಲೆಗಳಲ್ಲಿ ನಡೆಯಲೇಬೇಕಾಗಿದೆ. ಅದರ ಬದಲು 200 ಮರಗಳನ್ನು ಕಡಿಯಲು ಅನುಮತಿ ಪಡೆದು, 300 ಮರಗಳನ್ನು ಕಡಿಯುವವರ ಸಾಲಿನಲ್ಲಿ ಗುರುತಿಸಿಕೊಳ್ಳುವುದು ಆತ್ಮಹತ್ಯೆಗೆ ಸಮನಾದುದು.
ಈ ದಿನ ನಾವು ಒಂದಷ್ಟು ಪ್ರತಿಜ್ಞೆಗಳನ್ನು ಮಾಡಿಕೊಳ್ಳಲೇಬೇಕಾಗಿದೆ. ಕೆಲವೊಂದು ವೈಯಕ್ತಿಕ ಜವಾಬ್ದಾರಿಗಳನ್ನು ನಾಳಿನ ಒಳಿತಿಗಾಗಿ ಅನುಸರಿಸುವುದು ಕೂಡ ಅನಿವಾರ್ಯ. ಗಿಡವನ್ನು ನೆಟ್ಟು, ಪೋಷಿಸುವುದು, ಭೂಮಿಗೆ ಕಂಟಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವುದು, ತ್ಯಾಜ್ಯವನ್ನು ಮರುಬಳಕೆ ಮಾಡುವುದು, ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯದಿರುವುದು ಇತ್ಯಾದಿ ಕಾರ್ಯಗಳನ್ನು ಬದ್ಧತೆಯಿಂದ ನಾವು ನಡೆಸಿಕೊಟ್ಟಾಗ ಪರಿಸರ ಜಾಗೃತಿ, ಉಳಿವು ಸಾಧ್ಯ. ಜನರಲ್ಲಿ ಯಾವಾಗ ಪರಿಸರ ಪ್ರಜ್ಞೆ ಮೂಡುತ್ತದೆಯೋ ಅಂದು ವ್ಯವಸ್ಥೆ ಮುಕ್ಕಾಲು ಭಾಗ ಸರಿಯಾದಂತೆ. ಪ್ರಸಕ್ತ ವರ್ಷದಲ್ಲಿ ಭೂಮಿ ಮತ್ತು ಪರಿಸರಸ್ನೇಹಿಯಾಗಿ ಬದುಕುವ ಸಂಕಲ್ಪ ನಮ್ಮೆಲ್ಲರದಾಗಲಿ.
– ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು