ಕೋವಿಡ್-19 ಸಂದಿಗ್ಧದಲ್ಲಿ ಶಾಲೆ ಆರಂಭದ ಗೊಂದಲ; ಪೋಷಕರಲ್ಲಿ ತಳಮಳ
ಸರಕಾರ ,ಶಿಕ್ಷಣ ಇಲಾಖೆಯಿಂದ ದಿನಕ್ಕೊಂದು ತೀರ್ಮಾನ,ಆದೇಶ ;ಆನ್ಲೈನ್ ಶಿಕ್ಷಣ,ಶುಲ್ಕದ ವಿಚಾರದಲ್ಲೂ ಗೊಂದಲ
Team Udayavani, Jun 5, 2020, 5:30 AM IST
ಬೆಂಗಳೂರು: ಆನ್ಲೈನ್ ಶಿಕ್ಷಣ, ಶಾಲೆ ಪುನರಾರಂಭದ ದಿನಾಂಕ ಪ್ರಕಟ, ಖಾಸಗಿ ಶಾಲೆಗಳಿಗೆ ಶುಲ್ಕ ಪಡೆಯಲು ಅನುಮತಿ ಕಲ್ಪಿಸುವ ಸಂಬಂಧ ರಾಜ್ಯ ಸರಕಾರ ಮತ್ತು ಶಿಕ್ಷಣ ಇಲಾಖೆ ದಿನಕ್ಕೊಂದು ಆದೇಶ, ತೀರ್ಮಾನ ಕೈಗೊಳ್ಳುತ್ತಿದ್ದು, ಶಾಲೆ ಆರಂಭ ವಿಚಾರ ಗೊಂದಲದ ಗೂಡಾಗಿದೆ.
ರಾಜ್ಯದ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 1ರಿಂದ 10ನೇ ತರಗತಿಯಲ್ಲಿ ಸರಿಸುಮಾರು 1 ಕೋಟಿಗೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಮತ್ತು ಸರಕಾರ ನೀಡುವ ಪ್ರತೀ ನಿರ್ದೇಶನವೂ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು, ಪೋಷಕರ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡದಿಂದ ಸರಕಾರ ಶಾಲೆ ಆರಂಭ ಕುರಿತು ದಿಢೀರ್ ತೀರ್ಮಾನ ಕೈಗೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ.
ಗೊಂದಲ 1: ಆನ್ ಲೈನ್ ಶಿಕ್ಷಣ
ಮಾರ್ಚ್ ಅಂತ್ಯದಲ್ಲಿ ಲಾಕ್ಡೌನ್ ಘೋಷಣೆ ಯಾಗುತ್ತಿದ್ದಂತೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬೆನ್ನಲ್ಲೇ ಆನ್ಲೈನ್ ತರಗತಿ ಆರಂಭಿಸಲು ಇಲಾಖೆ ಅನುಮತಿ ನೀಡಿತು.
ಇದಕ್ಕೆ ವ್ಯಾಪಕ ವಿರೋಧ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪೂ.ಪ್ರಾ. ತರಗತಿಗಳಿಗೆ ಆನ್ಲೈನ್ ತರಗತಿ ನಡೆಸದಂತೆ ಸುತ್ತೋಲೆ ಹೊರಡಿಸಲು ಶಿಕ್ಷಣ ಸಚಿವರು ಮೇ 12ರಂದು ಶಿಕ್ಷಣ ಇಲಾಖೆಯ ಆಯುಕ್ತರಿಗೆ ನಿರ್ದೇಶಿಸಿದರು. ಆದರೆ ಇಂದಿಗೂ ಅನೇಕ ಶಾಲೆಗಳು ಆನ್ಲೈನ್ ತರಗತಿ ನಡೆಸುತ್ತಿವೆ. ಸರಕಾರ ತುಂಬಾ ಸೂಕ್ಷ್ಮವಾಗಿ ಈ ವಿಚಾರವನ್ನು ತೆಗೆದುಕೊಳ್ಳಬೇಕು ಎಂದು ಶಿಕ್ಷಣ ತಜ್ಞರು ಆಗ್ರಹಿಸಿದ್ದಾರೆ.
ಗೊಂದಲ-2: ಶುಲ್ಕ
ಕಂತುಗಳಾಗಿ ಶುಲ್ಕ ಪಾವತಿಸಲು ಅನುಮತಿ ನೀಡಲಾಯಿತು. ಖಾಸಗಿ ಶಾಲಾಡಳಿತ ಮಂಡಳಿ ಗಳು ಎಲ್ಲ ಹೆತ್ತವರು, ಪೋಷಕರಿಂದಲೂ ಶುಲ್ಕ ಸ್ವೀಕರಿಸಲು ಮುಂದಾದವು. ಈ ಬಗ್ಗೆ ದೂರಿದರೂ ಪ್ರಯೋಜನವಾಗಿಲ್ಲ, ಸಂಕಷ್ಟದಲ್ಲೂ ಶುಲ್ಕ ಪಾವತಿ ಸಲೇ ಬೇಕಾಯಿತು. ಇಲಾಖೆಯಿಂದ ಪರಿಹಾರ ಸಿಗದೆ ಸಮಸ್ಯೆ ಎದುರಿಸುವಂತಾಯಿತು ಎಂದು ಹೆತ್ತವರು, ಪೋಷಕರು ದೂರಿದ್ದಾರೆ.
ಗೊಂದಲ -3: ಶಾಲೆ ಪುನಾರಂಭ
ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಿನ ಶೈಕ್ಷಣಿಕ ವರ್ಷ ಆರಂಭದ ಉದ್ದೇಶಿತ ದಿನಾಂಕವನ್ನು ಈಗಾಗಲೇ ಪ್ರಕಟಿಸಿದ್ದು, ಎಲ್ಲ ಹೆತ್ತವರು, ಪೋಷಕರಲ್ಲಿ ಹೆಚ್ಚು ಆತಂಕ ಸೃಷ್ಟಿಸಿದೆ. ಜುಲೈ ತಿಂಗಳಲ್ಲೇ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ತರಗತಿ ಆರಂಭಿಸುವ ಇರಾದೆ ಪ್ರಕಟಿಸಿರುವುದು ಇನ್ನಷ್ಟು ಭಯ ಹುಟ್ಟಿಸಿದೆ.
ಕೋವಿಡ್-19 ದಿನೇ ದಿನೆ ಹೆಚ್ಚಾಗುತ್ತಿದೆ. ಬಹುತೇಕ ಜಿಲ್ಲೆಗಳ ಶಾಲೆಗಳು ಕ್ವಾರಂಟೈನ್ ಕೇಂದ್ರಗಳಾಗಿವೆ. ಇದೆಲ್ಲದರ ನಡುವೆಯೇ ಇಲಾಖೆ ಶಾಲೆ ಆರಂಭದಉದ್ದೇಶಿತ ದಿನಾಂಕ ಪ್ರಕಟಿಸಿದ್ದು, ಈ ನಡೆಗೆ ವಿಪಕ್ಷಗಳ ಸಹಿತ ಶಿಕ್ಷಣ ತಜ್ಞರು, ಸಾರ್ವಜನಿಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಗಳು ಈ ಶೈಕ್ಷಣಿಕ ವರ್ಷಕ್ಕೆ ಕಳೆದ ವರ್ಷದ ಶುಲ್ಕದ ಶೇ.50ರಷ್ಟು ಮಾತ್ರ ಪಡೆಯಬೇಕು. ಸರಕಾರ ಈ ಸಂಬಂಧ ಆದೇಶ ಹೊರಡಿಸಬೇಕು ಎಂಬುದು ಪೋಷಕರ ಒತ್ತಾಯ.
ಆತಂಕ ಬೇಡ
ರಾಜ್ಯದಲ್ಲಿ ಶಾಲೆ ಪುನರಾರಂಭ ಮಾಡುವ ಸಂಬಂಧ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಮಕ್ಕಳ ಸುರಕ್ಷೆ, ಕಲಿಕೆ ಮತ್ತು ಭವಿಷ್ಯದ ಹಿತವನ್ನು ಗಮನ ದಲ್ಲಿಟ್ಟುಕೊಂಡು ಪ್ರಜಾಸತ್ತಾತ್ಮಕವಾಗಿ ಮುಂದೆ ಸಾಗಲಿದ್ದೇವೆ. ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳನ್ನು ಸದ್ಯ ಆರಂಭಮಾಡಬಾರದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೋವಿಡ್-19 ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಶಾಲೆ ಆರಂಭಿಸಬಾರದು ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಇದರ ಜತೆಗೆ ಕೊರೊನಾ ಪರಿಸ್ಥಿತಿ ಹೀಗೆ ದೀರ್ಘಾವಧಿ ಇರಲಿದೆ. ಆದ್ದರಿಂದ ಸಾಮಾಜಿಕ ಅಂತರ, ಮಾಸ್ಕ್ ಇತ್ಯಾದಿ ಸುರಕ್ಷಾ ಕ್ರಮಗಳೊಂದಿಗೆ ಶಾಲೆ ಆರಂಭಿಸಿ ಎಂಬ ಮನವಿಯೂ ಬಂದಿದೆ. ಎಲ್ಲ ಅಂಶಗಳನ್ನು ಪರಿಶೀಲಿಸಿ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ; ಆತುರ ಅಥವಾ ತರಾತುರಿಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ನಲ್ಲಿ 244 ಮಕ್ಕಳಿಗೆ ಕೋವಿಡ್-19
ಲಾಕ್ ಡೌನ್ ನಡುವೆಯೇ ಶಾಲೆ ತೆರೆದಿದ್ದ ಇಸ್ರೇಲ್ ಪೆಟ್ಟು ತಿಂದಿದೆ. ಎರಡು ವಾರಗಳ ಹಿಂದೆಯೇ ಶಾಲೆಗಳನ್ನು ತೆರೆಯಲಾಗಿದ್ದು, ಸುಮಾರು 244 ಮಕ್ಕಳಿಗೆ ಕೋವಿಡ್-19 ತಗಲಿದೆ. ಅಷ್ಟೇ ಅಲ್ಲ, ಒಂದೇ ಶಾಲೆಯ 130 ಮಕ್ಕಳಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ. ಒಟ್ಟಾರೆ ಯಾಗಿ 42 ಶಾಲೆ ಗಳು ಮತ್ತು ಕಿಂಡರ್ ಗಾರ್ಟನ್ಗಳ 6,800 ಮಕ್ಕಳು ಮತ್ತು ಶಿಕ್ಷಕರನ್ನು ಕ್ವಾರಂಟೈ ನ್ ಮಾಡ ಲಾಗಿದೆ.
ಇದು ಸೂಕ್ಷ್ಮ ವಿಚಾರ
ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣಕ್ಕಿಂತ ಜೀವ ಮುಖ್ಯ. ಶಾಲೆ ಆರಂಭಕ್ಕೆ ಅವಸರಿಸ ಬಾರದು. ಇದು ತುಂಬ ಸೂಕ್ಷ್ಮ ವಿಚಾರ. ನಿತ್ಯ ಪ್ರತಿ ಮಗುವಿನ ಆರೋಗ್ಯ ತಪಾಸಣೆ ಮತ್ತು ಸ್ಯಾನಿಟೈಸೇಶನ್ ಮಾಡಬೇಕಾಗು ತ್ತದೆ. ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಹೀಗಾಗಿ ಶಾಲೆ ಆರಂಭಿಸಲು ಸರಕಾರ ಆತುರಪಡಬಾರದು.
– ವಾಸುದೇಶ ಶರ್ಮಾ,ಶಿಕ್ಷಣ ತಜ್ಞರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ