ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ : ಉಡುಪಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ
Team Udayavani, Sep 18, 2021, 6:30 AM IST
ಕೋಟ/ ಕಾರ್ಕಳ: ಭತ್ತಕ್ಕೆ ಕೇಂದ್ರ ಸರಕಾರ ಬೆಂಬಲ ಬೆಲೆಯನ್ನು ನಿಗದಿಪಡಿಸುತ್ತದೆ. ಆದರೆ ಶೀಘ್ರ ಖರೀದಿ ಕೇಂದ್ರವನ್ನು ಸ್ಥಾಪಿಸಿ ರೈತರಿಂದ ಭತ್ತ ಖರೀದಿ ಮಾಡಬೇಕಾದದ್ದು ರಾಜ್ಯ ಸರಕಾರ. ಉಡುಪಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಕೇಂದ್ರ ವಿಳಂಬವಾಗಿ ಆರಂಭವಾಗುವುದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿದ್ದು, ಈ ಬಾರಿ ಶೀಘ್ರವಾಗಿ ತೆರೆಯುವಂತೆ ರಾಜ್ಯ ಕೃಷಿ ಸಚಿವರಿಗೆ ತತ್ಕ್ಷಣ ಸೂಚನೆ ನೀಡುತ್ತೇನೆ ಎಂದು ಕೇಂದ್ರ ಕೃಷಿ ಖಾತೆಯ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಖರೀದಿ ಕೇಂದ್ರ ಆರಂಭಿಸಿದರೆ ಮಧ್ಯವರ್ತಿಗಳ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗಲಿದೆ ಎಂದರು.
ರೈತ ಸಂಘದಿಂದ ಮನವಿ
ಬೆಂಬಲ ಬೆಲೆಗಿಂತ ಕಡಿಮೆಗೆ ಭತ್ತವನ್ನು ಯಾರೂ ಖರೀದಿಸದಂತೆ ಸರಕಾರ ಅಧ್ಯಾದೇಶ ಹೊರಡಿಸಬೇಕು. ರಸಗೊಬ್ಬರದ ದರ ಕಡಿತಗೊಳಿಸಬೇಕು, ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಯಂತ್ರಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಕೋಟ ರೈತಧ್ವನಿ ಸಂಘಟನೆ ವತಿಯಿಂದ ಈ ಸಂದರ್ಭ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಅಡಿಕೆಯಲ್ಲಿ ವಿಷಾಂಶ ಇಲ್ಲ:
ಮನವರಿಕೆಗೆ ವಕೀಲರ ನೇಮಕ ಅಡಿಕೆಯಲ್ಲಿ ವಿಷಕಾರಿ ಅಂಶ ಇಲ್ಲ ಎನ್ನುವುದನ್ನು ಸುಪ್ರಿಂ ಕೋರ್ಟ್ಗೆ ಮನವರಿಕೆ ಮಾಡಿಕೊಡಲು ಸೂಕ್ತ ವಕೀಲರನ್ನು ನೇಮಿಸುವ ಬಗ್ಗೆ ಪ್ರಧಾನಿಯವರ ಜತೆ ಚರ್ಚಿಸಿದ್ದು, ಪ್ರಧಾನಿ ಸ್ಪಂದಿಸಿ ಸೂಚನೆ ನೀಡಿದ್ದಾರೆ. ಶೀಘ್ರವೇ ಅನುಭವಿ ವಕೀಲರ ನೇಮಕವಾಗಲಿದೆ. ಅಡಿಕೆ ಅಭಿವೃದ್ಧಿ ಮಂಡಳಿ ರಚನೆಗಾಗಿ ಕೃಷಿಕರು ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಕೇಂದ್ರ ಸರಕಾರ ಸದ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಮುಂದೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕಾರ್ಕಳದಲ್ಲಿ ಶುಕ್ರವಾರ ರೈತರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ರೈತರ ಅಹವಾಲು ಆಲಿಸಿ ಅವರು ಮಾತನಾಡಿದರು. ಅನ್ಯ ದೇಶಗಳಿಂದ ಅಕ್ರಮವಾಗಿ ಅಡಿಕೆ ಆಮದಾಗುವುದನ್ನು ತಡೆದ ಕಾರಣ ಇಂದು ಅಡಿಕೆಗೆ ಉತ್ತಮ ಧಾರಣೆ ಇದೆ. ಮ್ಯಾನ್ಮಾರ್, ಬಾಂಗ್ಲಾ, ನೇಪಾಲಗಳಿಂದ ಅಡಿಕೆ ಅಕ್ರಮ ಆಮದಿಗೆ ಕಡಿವಾಣ ಹಾಕಿದ್ದೇವೆ ಎಂದರು.