ಸಮ್ಮಿಶ್ರದಲ್ಲಿ ಕುಚಿಕು ಟ್ವೀಟ್ನಲ್ಲಿ ಕುಟುಕು
ಸಿದ್ದು-ವಿಶ್ವ ಸಮರ: ಆನೆ, ಚಮಚಾ, ನಾಯಿ ಮಾತು ಪ್ರವೇಶ
Team Udayavani, May 14, 2019, 6:00 AM IST
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡುವಿನ ವಾಕ್ಸಮರದ ನಂತರ ಟ್ವೀಟ್ ಸಮರ ಮುಂದುವರಿದಿದ್ದು, ಸಿದ್ದರಾಮಯ್ಯ ಪರ ಕಾಂಗ್ರೆಸ್ ಶಾಸಕರು ಬ್ಯಾಟಿಂಗ್ ನಡೆಸಿ ವಿಶ್ವನಾಥ್ ವಿರುದ್ಧ ಮುಗಿಬಿದ್ದರೆ, ಜೆಡಿಎಸ್ನ ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ, ಕಾಂಗ್ರೆಸ್ನವರು ಬೇರೆ ದಾರಿ ನೋಡಿಕೊಳ್ಳಲಿ ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಇಷ್ಟೆಲ್ಲಾ ಆದರೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಅವರ ಮೌನ ‘ಸಮ್ಮಿಶ್ರ’ ಕುತೂಹಲ ಮೂಡಿಸಿದೆ.
ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವಿನ ವಾಕ್ಸಮರ, ಸಿದ್ದರಾಮಯ್ಯ -ಎಚ್.ವಿಶ್ವನಾಥ್ ನಡುವಿನ ಸಮರ ಎಲ್ಲೆ ಮೀರಿದ್ದು ಬಿಜೆಪಿ ನಾಯಕರು ‘ ಇಬ್ಬರ ಜಗಳ’ದ ಲಾಭದ ನಿರೀಕ್ಷೆಯಲ್ಲಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಎಚ್.ವಿಶ್ವನಾಥ್ ಮೂಲಕ ಎಚ್.ಡಿ.ಕುಮಾರಸ್ವಾಮಿಯವರೇ ಮಾತನಾಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಾಂಬ್ ಹಾಕಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂಬ ಮಾತುಗಳ ನಡುವೆಯೇ ಫಲಿತಾಂಶಕ್ಕೆ ಹತ್ತು ದಿನ ಇರುವಾಗಲೇ ಆರಂಭವಾಗಿರುವ ಈ ಗುದ್ದಾಟ ಉಪ ಚುನಾವಣೆ ಮೆಲೆ ಪರಿಣಾಮ ಬೀರುವ ಆತಂಕವೂ ಕಾಂಗ್ರೆಸ್ಗಿದೆ. ಇದು ಸಹ ಸಮ್ಮಿಶ್ರ ಸರ್ಕಾರದ ಮೇಲೆ ಆತಂಕದ ಛಾಯೆ ಆವರಿಸಿದಂತಿದೆ.
ಸಿದ್ದರಾಮಯ್ಯ ಆನೆ ಇದ್ದಂತೆ. ಆನೆ ನಡೆದು ಹೋಗುತ್ತಿದ್ದರೆ ನಾಯಿಗಳು ಬೊಗಳುತ್ತವೆ. ಆದರೆ, ಅದಕ್ಕೆ ಆನೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರೆ, ಇದನ್ನೇ ನಾನು ಚಮಚಾಗಿರಿ ಎಂದು ಹೇಳುವುದು; ಸಿದ್ದರಾಮಯ್ಯ ಆನೆಯೋ ನಾಯಿಯೋ ಬೇರೆ ವಿಚಾರ, ಚಮಚಾಗಿರಿ ಬಿಡಬೇಕು ಎಂದು ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಇದರ ನಡುವೆ ಸಚಿವ ಜಮೀರ್ ಅಹಮದ್, ನಾವ್ಯಾರು ಚಮಚಾಗಿರಿ ಮಾಡುತ್ತಿಲ್ಲ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ವಿಶ್ವನಾಥ್ ಅವರಿಗೆ ಚಮಚಾಗಿರಿ ಮಾಡಿ ಅಭ್ಯಾಸ ಎಂದು ಕಿಡಿ ಕಾರಿದ್ದಾರೆ.
ಮತ್ತೂಂದೆಡೆ ಜೆಡಿಎಸ್ನ ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ, ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಕಾಂಗ್ರೆಸ್ನವರು ಬೇಕಾದರೆ ಬೇರೆ ದಾರಿ ನೋಡಿಕೊಳ್ಳಲಿ ಎಂದು ಹೇಳಿದ್ದು ಇದು ಕಾಂಗ್ರೆಸ್ನ ನಾಯಕರ ಆಕ್ರೋಶ ಹೆಚ್ಚಿಸಿದೆ. ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು, ನಾವು ಕುಪೇಂದ್ರರೆಡ್ಡಿ ಕೇಳಿ ಮೈತ್ರಿ ಮಾಡಿಕೊಂಡಿಲ್ಲ. ದೇವೇಗೌಡರು ಹಾಗೂ ರಾಹುಲ್ಗಾಂಧಿ ನಡುವೆ ಮೈತ್ರಿ ಮಾತುಕತೆ ಯಾಗಿದೆ. ಆ ರೀತಿ ಕುಪೇಂದ್ರರೆಡ್ಡಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಶಾಸಕ ಎಸ್.ಟಿ.ಸೋಮಶೇಖರ್, ಕುಪೇಂದ್ರರೆಡ್ಡಿಗೆ ದೇವೇಗೌಡರು ಪವರ್ ಆಫ್ ಅಟಾರ್ನಿ ಬರೆದುಕೊಟ್ಟಿದ್ದಾರಾ ಎಂದು ಕೇಳಿದ್ದಾರೆ.
ಇಷ್ಟೆಲ್ಲ ವಿದ್ಯಮಾನಗಳ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೋಮವಾರ ಬೆಳಗ್ಗೆ ಗೌಡರ ನಿವಾಸದಲ್ಲಿ ಇವರಿಬ್ಬರೂ ಚರ್ಚಿಸಿದರು. ಈ ಮಧ್ಯೆ ಕುಂದಗೋಳದಲ್ಲಿ ಮಾತನಾಡಿದ ಸಿಎಂ, ನಾನು ಸಿದ್ದರಾಮಯ್ಯ ಅಣ್ಣ-ತಮ್ಮ ಇದ್ದ ಹಾಗೆ ಎಂದರು. ಈ ಸರ್ಕಾರದ ಮೇಲೆ ಅವರ ಆಶೀರ್ವಾದ ಇರುವ ವರೆಗೂ ಸರ್ಕಾರ ಗಟ್ಟಿ. ಬಿಜೆಪಿಯ ಗೊಂದಲದ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಎಂದರು.
ಲಾಭದ ನಿರೀಕ್ಷೆ ಯಲ್ಲಿ ಬಿಜೆಪಿ: ಕಾಂಗ್ರೆಸ್-ಜೆಡಿಎಸ್ ನಡುವಿನ ಜಗಳದಲ್ಲಿ ಬಿಜೆಪಿ ಲಾಭದ ನಿರೀಕ್ಷೆಯಲ್ಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿಕೆ ಕೇವಲ ಅವರ ಹೇಳಿಕೆಯಲ್ಲ. ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ವಿಶ್ವನಾಥ್ ಮೂಲಕ ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಮೈತ್ರಿ ಸರ್ಕಾರದ ಜಗಳ ಬೀದಿಗೆ ಬಂದಿದ್ದಾಗಿದೆ. ಸರ್ಕಾರದ ಸಮ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಮೂಲಕ ಸಿಎಂ ಕುಮಾರ ಸ್ವಾಮಿ ಧ್ವನಿ ಎತ್ತುವ ಪ್ರಯತ್ನ ಮಾಡಿದ್ದಾರೆ. ಇದು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎನ್ನುವುದನ್ನು ಕಾಯ್ದು ನೋಡುತ್ತೇವೆ ಎಂದು ಹೇಳಿದ್ದಾರೆ.
ಎಚ್. ವಿಶ್ವನಾಥ್ ಅವರು ಮಾಜಿ ಸಿಎಂ ಸಿದ್ದರಾ ಮಯ್ಯ ಬಗ್ಗೆ ಸತ್ಯವನ್ನೇ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಸತ್ಯದ ಪರಾಮರ್ಶೆ ನಡೆಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಿಡಿಗೇಡಿತನದ ಯುದ್ಧ
ರಾಜ್ಯಾದ್ಯಂತ ಭಾರೀ ಗದ್ದಲಕ್ಕೆ ಕಾರಣವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ನಡುವಿನ ಟ್ವೀಟ್ ಮೈತ್ರಿ ವಾರ್ನ ಸ್ವರೂಪ ಹೀಗಿದೆ…
ಸಿದ್ದರಾಮಯ್ಯ: ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿ ಹಾಕಿದೆ. ಇದರಿಂದಾಗಿ ಎಚ್. ವಿಶ್ವನಾಥ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು, ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ.
ವಿಶ್ವನಾಥ್: ಮೈತ್ರಿ ಧರ್ಮಕ್ಕೆ ಧಕ್ಕೆ ಬರುವ ‘ನಾನೇ ಮುಖ್ಯಮಂತ್ರಿ’ ಎನ್ನುವ ವಿಷಯ ಪ್ರಸ್ತಾವನೆ. ಪ್ರಥಮವಾಗಿ ಸಿದ್ದರಾಮಯ್ಯನವರೇ ನಿಮ್ಮಿಂದಲೇ ಆಗಿದ್ದು, ನನ್ನ ಹೇಳಿಕೆ ಬಹಳ ಜವಾಬ್ದಾರಿಯುತವಾಗಿದೆ. ಕಿಡಿಗೇಡಿತನ, ಕುಖ್ಯಾತಿ, ಎಲ್ಲರನ್ನೂ ಏಕ ವಚನದಲ್ಲಿ ಸಂಬೋಧಿಸುವುದು, ಸುಳ್ಳು ಹೇಳುವುದು, ನನ್ನ ಜನ್ಮದಲ್ಲಿ ನನ್ನ ರಕ್ತದಲ್ಲಿಯೇ ಬಂದಿಲ್ಲ.
ಸಿದ್ದರಾಮಯ್ಯ: ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಮೊದಲು ಜಿ.ಟಿ. ದೇವೇಗೌಡ, ಈಗ ವಿಶ್ವನಾಥ್, ಮುಂದೆ ಯಾರೊ ಗೊತ್ತಿಲ್ಲ. ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು.
ವಿಶ್ವನಾಥ್: ಸಮನ್ವಯ ಸಮಿತಿಗೆ ನನ್ನನ್ನು ಆಹ್ವಾನಿಸಿ. ಬಂದು ಉತ್ತರಿಸುತ್ತೇನೆ. ನಿಮಗೆ ನಮ್ಮ ಕುಲದೈವ ಬೀರೇಶ್ವರ ಒಳ್ಳೆಯ ಬುದ್ದಿ ಕೊಡಲಿ.
ಸಿದ್ದರಾಮಯ್ಯ: ಒಳ್ಳೆಯ ಕೆಲಸ ಮಾಡಿದವರ ಬಗ್ಗೆ ವರ್ತಮಾನ ಕ್ರೂರವಾಗಿರುತ್ತದೆ. ಇತಿಹಾಸ ಸ್ಮರಿಸುತ್ತದೆ. ದೇವರಾಜ್ ಅರಸು ಅವರ ಜನಪರ ಕೆಲಸಗಳನ್ನು ಮರೆತು ಜನ ಸೋಲಿಸಿದರು. ಅವರನ್ನು ಗುರುಗಳೆಂದು ಈಗ ಹೇಳುತ್ತಿರುವ ನಾಯಕರೂ ಕೂಡ ಬಿಟ್ಟು ಹೋಗಿದ್ದರು. ಆದರೆ, ಅರಸು ಅವರನ್ನು ಈಗ ಇತಿಹಾಸ ಸ್ಮರಿಸುತ್ತದೆ. ಈಷ್ರ್ಯೆಗೆ ಕಾಲವೇ ಉತ್ತರ.
ಮುಂದುವರೆದು.. ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ ಮುಖ್ಯಮಂತ್ರಿ ಎಂಬ ಹೆಮ್ಮೆ ನನ್ನದು. ಇದನ್ನು ಪುಸ್ತಕ ಮಾಡಿ ಹಂಚಿದ್ದೇನೆ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಸದಾ ಸಿದ್ದ. ಮೈ ಪರಚಿಕೊಳ್ಳುತ್ತಿರುವ ಕೈಲಾಗದವರ ಜೊತೆ ನನ್ನ ವಾದ ಇಲ್ಲ.
ನಾನು, ಸಿದ್ದರಾಮಯ್ಯ ಅಣ್ಣ ತಮ್ಮ ಇದ್ದ ಹಾಗೆ. ಅವರ ಆಶೀರ್ವಾದ ಇರುವವರೆಗೂ ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗಲ್ಲ. ಮಾಧ್ಯಮಗಳ ಧಾರಾವಾಹಿ ವರದಿಯನ್ನು ನಂಬಲು ಹೋಗಬೇಡಿ.
-ಎಚ್.ಡಿ. ಕುಮಾರಸ್ವಾಮಿ, ಸಿಎಂ
ಟ್ವೀಟ್ನಲ್ಲಿ ಸಿದ್ದರಾಮಯ್ಯ ಅವರು, ನನ್ನ ಹೆಸರು ಯಾಕೆ ಪ್ರಸ್ತಾಪಿಸಿದ್ದಾರೋ ಗೊತ್ತಿಲ್ಲ.
– ಜಿ.ಟಿ.ದೇವೇಗೌಡ, ಸಚಿವ
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್ ಅವರು ದೇವೇಗೌಡರ ಜತೆ ಚರ್ಚಿಸಿ ಮಾತನಾಡುವುದು ಸೂಕ್ತ. ಮೈತ್ರಿ ಧರ್ಮ ಪಾಲಿಸುವ ನಿಟ್ಟಿನಲ್ಲಿ ನಾವೆಲ್ಲಾ ನಡೆದುಕೊಂಡು ಬಂದಿದ್ದೀವಿ.
-ಸಿ.ಎಸ್.ಪುಟ್ಟರಾಜು, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!