ಹೆಗಡೆಗೆ ಸಂವಿಧಾನದ ಕನಿಷ್ಠ ಜ್ಞಾನವಿಲ್ಲ: ಸಿದ್ದು
Team Udayavani, Feb 3, 2020, 10:16 PM IST
ಹುಬ್ಬಳ್ಳಿ: ಸಂಸದ ಅನಂತಕುಮಾರ ಹೆಗಡೆಯವರು ಕನಿಷ್ಠ ಸಂವಿಧಾನದ ಜ್ಞಾನ ಇಲ್ಲದವರಾಗಿದ್ದಾರೆ. ಸಂವಿಧಾನ ಓದದೇ ಅದು ಹೇಗೆ ಸಂಸದರಾದರೋ? ಅವರಿಗೆ ನಾಚಿಕೆಯಾಗಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಅಹಿಂಸೆಯಿಂದ ಸ್ವಾತಂತ್ರ್ಯ ಬಂದಿಲ್ಲ ಎಂದು ಹೇಳುವ ಹೆಗಡೆ, ಗಾಂಧೀಜಿ, ನೆಹರೂ, ಸುಭಾಶ್ಚಂದ್ರ ಬೋಸ್, ವಲ್ಲಭಬಾಯಿ ಪಟೇಲ್ ಜೊತೆ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ ನೋಡಿ ಎಂದು ವ್ಯಂಗ್ಯವಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಅವರ ಬಗ್ಗೆ ಗೌರವದಿಂದ ಮಾತನಾಡಬೇಕು. ಅವರಿಲ್ಲದಿದ್ದರೆ, ಸಂವಿಧಾನ ಇಲ್ಲದಿದ್ದರೆ ಅನಂತಕುಮಾರ ಹೆಗಡೆ ಇಂದು ಸಂಸದ ಆಗುತ್ತಿದ್ದರೆ? ಸಂವಿಧಾನ ಬಂದ ಮೇಲೆಯೇ ಎಲ್ಲರಿಗೂ ಮತ ಹಾಕುವ ಹಕ್ಕು ಸಿಕ್ಕಿದ್ದು. ಸಂವಿಧಾನ ಓದದೆ ಇವರೆಲ್ಲಾ ಯಾಕೆ ಸಂಸದರಾಗ್ತಾರೋ ಗೊತ್ತಾಗುತ್ತಿಲ್ಲ. ಕೇಂದ್ರ ಸರಕಾರವೇ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದರೂ ಕೇಂದ್ರ ಮಂತ್ರಿಯಾಗಿದ್ದರು. ಇಂಥವರು ಮಾನ ಮರ್ಯಾದೆ ಇಲ್ಲದವರು ಎಂದು ವಾಗ್ಧಾಳಿ ನಡೆಸಿದರು.