ಸದನದಲ್ಲಿ ಬೊಮ್ಮಾಯಿ ಮಾಡಿದ್ದು ಕಳಪೆ ಭಾಷಣ : ಸಿದ್ದರಾಮಯ್ಯ ಟೀಕೆ
Team Udayavani, Feb 23, 2022, 10:00 PM IST
ಬೆಂಗಳೂರು: ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನೆ ಬಿಟ್ಟು ನರೇಂದ್ರ ಮೋದಿ ಹಾಗೂ ಕೇಂದ್ರದ ಯೋಜನೆ ಶ್ಲಾಘಿಸುವುದಕ್ಕೆ ಸೀಮಿತಗೊಂಡರು. ನನ್ನ ರಾಜಕೀಯ ಜೀವನದಲ್ಲೇ ಇಂಷ್ಟೊಂದು ಕಳಪೆ ಭಾಷಣ ಹಿಂದೆಂದೂ ಕೇಳಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯದಿಂದ ನರೇಂದ್ರ ಮೋದಿ ಸರ್ಕಾರವು 3 ಲಕ್ಷ ಕೋಟಿ ರೂಗಳಷ್ಟು ವಿವಿಧ ರೂಪದ ತೆರಿಗೆಗಳನ್ನು ಸಂಗ್ರಹಿಸಿ ರಾಜ್ಯಕ್ಕೆ ವಾಪಸ್ಸು ನೀಡುತ್ತಿರುವುದು ಕೇವಲ 43 ಸಾವಿರ ಕೋಟಿ ರೂ. ಇದರಿಂದ ರಾಜ್ಯದ ಆರ್ಥಿಕತೆಯೂ ದಿಕ್ಕುತಪ್ಪಿದೆ. 2018ರವರೆಗೆ 2.42 ಲಕ್ಷ ಕೋಟಿಗಳಷ್ಟಿದ್ದ ರಾಜ್ಯದ ಸಾಲ ಈಗ 4.57 ಲಕ್ಷ ಕೋಟಿಗಳಷ್ಟಾಗಿದೆ.ಇದಕ್ಕೆ ಮೋದಿಗೆ ಶ್ಲಾಘನೆ ಮಾಡಬೇಕಾ ಎಂದು ಪ್ರಶ್ನಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ, ಯುವಜನರ ಕಲ್ಯಾಣ ಮತ್ತು ನೇಕಾರರು ಮೀನುಗಾರರು ಕುಂಬಾರರು ಅಕ್ಕಸಾಲಿಗರು, ಕೌÒರಿಕರು, ಉಪ್ಪಾರರು ವಿವಿಧ ವಾಹನ ಚಾಲಕರು, ಮಡಿವಾಳರು ಮುಂತಾದ ಕುಶಲ ಕರ್ಮಿಗಳ ಕುರಿತು ಭಾಷಣದಲ್ಲಿ ಒಂದಕ್ಷರದ ಪ್ರಸ್ತಾಪವಿಲ್ಲ. ಲೋಕೋಪಯೋಗಿ, ಸಣ್ಣ ಕೈಗಾರಿಕೆ, ನಗರ, ಪಟ್ಟಣಗಳ ಅಭಿವೃದ್ಧಿ ಕುರಿತು ಪ್ರಸ್ತಾಪವಿಲ್ಲ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ರಷ್ಯಾ- ಉಕ್ರೇನ್ ಸಂಘರ್ಷ: ಗೋವಾದಲ್ಲಿ ಪ್ರತಿಕೂಲ ಪರಿಣಾಮ
ರಾಜ್ಯಪಾಲರ ಭಾಷಣದಲ್ಲಿ ಜನರ ಕಲ್ಯಾಣದ ಕುರಿತು ಪ್ರಸ್ತಾಪವೂ ಇಲ್ಲ. ಅಭಿವೃದ್ಧಿ ಕುರಿತಾದ ಪ್ರಸ್ತಾಪವೂ ಇಲ್ಲ. ಈ ಕುರಿತು ತಾನು ಏನೂ ಮಾಡಿಲ್ಲ ಎಂದು ಸರ್ಕಾರವೆ ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆ. ತನ್ನ ಅದಕ್ಷತೆಯನ್ನು ಒಪ್ಪಿಕೊಂಡದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದಿಸುತ್ತೇನೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿ 1 ಅಥವಾ 2 ನೇ ಸ್ಥಾನದಲ್ಲಿ ಕರ್ನಾಟಕ ಇತ್ತು. ಈಗ ಓಲಾ ಬೈಕ್, ಏಥರ್, ಟಾಟಾ ಎಲೆಕ್ಟ್ರಾನಿಕ್ಸ್ ಮುಂತಾದ ಬೃಹತ್ ಬಂಡವಾಳದ ಕಂಪೆನಿಗಳು 10000 ಕೋಟಿ ಬಂಡವಾಳ ಹೂಡಲು ತಯಾರಿದ್ದವು. ಆದರೆ ಈ ಸರ್ಕಾರ ಆಸಕ್ತಿ ವಹಿಸದ ಕಾರಣ ತಮಿಳುನಾಡಿನ ಪಾಲಾದವು. ರಾಜ್ಯವು ಕೈಗಾರಿಕಾಭಿವೃದ್ಧಿಯಲ್ಲೂ ಹಿಂದೆ ಬಿದ್ದಿದೆ ಎಂದು ದೂರಿದ್ದಾರೆ.
ಎನ್ಇಪಿಯಂತ ಮನೆಹಾಳು ನೀತಿಗಳನ್ನು ಸರ್ಕಾರ ಸಾಧನೆ ಎಂದು ಹೇಳಲಾಗಿದೆ. ಕಾಲೇಜು- ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರುಳಿಲ್ಲ, ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕಗಳಿಲ್ಲ ಎಂದು ಹೇಳಿದ್ದಾರೆ.