ಸಿದ್ದು ದಡ್ಡ-ವಡ್ಡ: ಈಶ್ವರಪ್ಪ
Team Udayavani, Sep 18, 2019, 3:05 AM IST
ಶಿವಮೊಗ್ಗ: “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಲೆ ಇದ್ದಿದ್ದರೆ ಇಲ್ಲ ಸಲ್ಲದ ಹೇಳಿಕೆ ಕೊಡ್ತಿರಲಿಲ್ಲ. ಅವರೊಬ್ಬ ದಡ್ಡ-ವಡ್ಡ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ದಡ್ಡ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯನವರು ವಾಪಸ್ ಪಡೆಯಬೇಕು. ಜತೆಗೆ, ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ನಮ್ಮ ಮೊದಲ ಆದ್ಯತೆ ಕನ್ನಡ. ನಮ್ಮ ತಾಯಿ ಕನ್ನಡ. ಅಮಿತ್ ಶಾ ಹೇಳಿಕೆಯನ್ನು ಡೈವರ್ಟ್ ಮಾಡಲಾಗಿದೆ. ಇದರಲ್ಲಿ ರಾಜಕೀಯ ಕುತಂತ್ರ ಅಡಗಿದೆ ಎಂದು ಹೇಳಿದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೈತ್ರಿ ಇದ್ದರೇನು?. ಇಲ್ಲದಿದ್ದರೇನು?. ಮೈತ್ರಿಯಿದ್ದಾಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸೀಟು ಪಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನಿರ್ನಾಮವಾಗಿದೆ.
ಯಾವುದೇ ಸಂದರ್ಭ ಚುನಾವಣೆ ಬಂದರೂ ಬಿಜೆಪಿ ಪೂರ್ಣ ಬಹುಮತ ಪಡೆಯುತ್ತದೆ. ವಿಪಕ್ಷ ನಾಯಕನ ಸ್ಥಾನ ಹೋಗುತ್ತದೆ ಎಂದು ಸಿದ್ದರಾಮಯ್ಯ ಒದ್ದಾಡ್ತಾ ಇದ್ದಾರೆ ಎಂದು ಲೇವಡಿ ಮಾಡಿದರು. ಜಿ.ಟಿ.ದೇವೇಗೌಡರು ಬಿಜೆಪಿ ಬಗ್ಗೆ ಹೆಚ್ಚು ಒಲವು ತೋರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜಿ.ಟಿ.ದೇವೇ ಗೌಡ್ರು ಮಾತ್ರ ಅಲ್ಲ. ದೇವೇಗೌಡ್ರು, ಸಿದ್ದರಾಮ ಯ್ಯನವರೂ ಬಿಜೆಪಿಗೆ ಬಂದರೆ ಆಶ್ಚರ್ಯವಿಲ್ಲ ಎಂದರು.