ಭೈರಪ್ಪನವರು ಯಾವಾಗ ಬಿಜೆಪಿ ಸೇರಿದರು ಗೊತ್ತಿಲ್ಲ, ರಾಜ್ಯಸಭೆಗೆ ಹೋಗುವ ಆಸೆ ಇರಬೇಕು
Team Udayavani, Jan 11, 2020, 8:57 PM IST
ಬೆಂಗಳೂರು: ಎಸ್.ಎಲ್. ಭೈರಪ್ಪ ಅವರಿಗೆ ರಾಜ್ಯಸಭೆಗೆ ಹೋಗುವ ಆಸೆ ಇರಬೇಕು. ಅದಕ್ಕಾಗಿ ಅವರು ಬಿಜೆಪಿಯನ್ನು ಹೊಗಳಿ ಮಾತನಾಡಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರಗಳು ಏನೇ ಆಗಿರಲಿ, ಭೈರಪ್ಪನವರ ಬರವಣಿಗೆ ಅದ್ಭುತ. ಆದರೆ ಅವರು ಯಾವಾಗ ಬಿಜೆಪಿ ಸೇರಿದರು ಗೊತ್ತಿಲ್ಲ. ರಾಜ್ಯಸಭೆಗೆ ಹೋಗುವ ಆಸೆ ಇರಬೇಕು. ಅದಕ್ಕಾಗಿ ಬಿಜೆಪಿ ವಿಚಾರಧಾರೆ ಮಂಡಿಸುತ್ತಿದ್ದಾರೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಎನ್ನುವುದನ್ನು ಭೈರಪ್ಪವನ್ನು ತಿಳಿದುಕೊಳ್ಳಬೇಕು. ಇಳಿ ವಯಸ್ಸಿನಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಳ್ಳಲು ಯಾಕೆ ಹೊರಟಿದ್ದೀರಾ ಎಂದು ಉಗ್ರಪ್ಪ ಪ್ರಶ್ನಿಸಿದರು.
ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಒಂದು ದಿನಕ್ಕೆ ಸೀಮಿತಗೊಳಿಸುವ ಮೂಲಕ ಬಿಜೆಪಿ ಕನ್ನಡಿಗರಿಗೆ ದ್ರೋಹ ಮಾಡಿದೆ. ವಿಠಲ ಹೆಗ್ಡೆ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಕಾರಣಕ್ಕೆ ರಾಜ್ಯ ಸರಕಾರ ಇಷ್ಟು ಕೀಳುಮಟ್ಟಕ್ಕೆ ಇಳಿದಿದೆ ಎಂದವರು ಆರೋಪಿಸಿದರು.
ಶಾಸಕ ಸೋಮಶೇಖರ ರೆಡ್ಡಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಮೇಲಿನ ಕೇಸ್ ವಾಪಸ್ ಪಡೆಯಲು ಹೇಳುತ್ತಿರುವ ಮುಖ್ಯಮಂತ್ರಿಯವರಿಗೆ ನಾಚಿಕೆ ಆಗಬೇಕು ಎಂದು ಉಗ್ರಪ್ಪ ವಾಗ್ಧಾಳಿ ನಡೆಸಿದರು.