ಎಲ್ಲಾ ಅತೃಪ್ತ ಶಾಸಕರು ಅನರ್ಹ; ಸ್ಪೀಕರ್ ಆದೇಶ
Team Udayavani, Jul 28, 2019, 11:51 AM IST
ಬೆಂಗಳೂರು: ಈಗಾಗಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಜೆಡಿಎಸ್ – ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರವಾಗಿ ವಿಧಾನ ಸಭಾ ಸ್ಪೀಕರ್ ರಮೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ, ರಾಜೀನಾಮೆ ನೀಡಿದ ಎಲ್ಲಾ 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದಾರೆ.
ಎಸ್.ಟಿ. ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಪ್ರತಾಪಗೌಡ ಪಾಟೀಲ್, ರೋಷನ್ ಬೇಗ್, ಎಂಟಿಬಿ ನಾಗರಾಜ್, ಸುಧಾಕರ್, ಬಿಸಿ ಪಾಟೀಲ್, ಶಿವರಾಂ ಹೆಬ್ಬಾರ್, ಗೋಪಾಲಯ್ಯ, ಶ್ರೀಮಂತ ಪಾಟೀಲ್, ಆನಂದ್ ಸಿಂಗ್, ನಾರಯಣ ಗೌಡ, ಹೆಚ್ ವಿಶ್ವನಾಥ್ ರನ್ನು ಈ ವಿಧಾನ ಸಭಾ ಅವಧಿಗೆ ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ.
ಇಂದು ಶಾಸಕರ ಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿಯನ್ನು ಬಹಿರಂಗಗೊಳಿಸಿದರು.
ಪಕ್ಷ ಜಾರಿಗೊಳಿಸಿದ ಆದೇಶವನ್ನು ಉಲ್ಲಂಘಿಸಿದ ಶಾಸಕರನ್ನು ಅನರ್ಹಗೊಳಿಸಿ ಎಂದು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡುರಾವ್ ದೂರು ನೀಡಿದ್ದಾರೆ. ಸೋಮವಾರ ಬೆಳಗ್ಗೆ ಅಧಿವೇಶನದ ತುರ್ತು ಇರುವುದರಿಂದ ಇಂದೇ ಅತೃಪ್ತ ಶಾಸಕರ ರಾಜೀನಾಮೆಯ ಬಗ್ಗೆ ಇತ್ಯರ್ಥ ಮಾಡುವ ಅಗತ್ಯವಿರುವ ಕಾರಣ ತುರ್ತು ಸುದ್ದಿಗೋಷ್ಠಿ ನಡೆಸಿದ್ಧೇನೆ ಎಂದರು.
ಸೋಮವಾರ ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚನೆಗೆ ಮನವಿ ಮಾಡಿದ ಕಾರಣ ಎಲ್ಲಾ ಶಾಸಕರಿಗೆ ಅಧಿವೇಶನಕ್ಕೆ ಸೂಚನೆ ನೀಡಿದ್ದೇವೆ. ಕಾರ್ಯ ಕಲಾಪದ ಬಗ್ಗೆ ಉಲ್ಲೇಖಿಸಿ ಸೂಚನೆ ನೀಡಿದ್ದೇವೆ ಎಂದರು.
ರವಿವಾರ ಬೆಳಗ್ಗೆ ನಿಧನರಾದ ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿಯವರನ್ನು ನೆನೆದ ರಮೇಶ್ ಕುಮಾರ್ ಅವರು, ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.
ಕೆಲ ದಿನಗಳ ಹಿಂದೆಯಷ್ಟೇ ರಮೇಶ್ ಕುಮಾರ್ ಅವರು ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಆರ್. ಶಂಕರ್ ಅವರನ್ನು ಈ ವಿಧಾನ ಸಭೆಯ ಅವಧಿಯವರೆಗೆ ಅನರ್ಹಗೊಳಿಸದ್ದರು.