ಪೋಷಕಾಂಶ; ಬಾಯಿರುಚಿ ಹೆಚ್ಚಿಸುವ ತಂಬುಳಿಗಳು
ತಂಬುಳಿ ತಯಾರಿಸಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ
Team Udayavani, Jul 29, 2022, 3:47 PM IST
ಬೇಸಿಗೆಗಾಲದಲ್ಲಿ ತಂಬುಳಿಗಳು ನಮ್ಮ ದೇಹವನ್ನು ತಂಪಾಗಿಡುವುದಲ್ಲದೆ ಆರೋಗ್ಯ ಸುಧಾರಣೆಗೂ ಉತ್ತಮ. ಹಿತ್ತಲಿನಲ್ಲಿ ದೊರೆಯುವ ಬಸಳೆ ಸೊಪ್ಪು , ಬೇವಿನ ಸೊಪ್ಪಿನಿಂದ ತಂಬುಳಿ ತಯಾರಿಸಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಇಲ್ಲಿವೆ ಅಂತಹ ಕೆಲವು ರಿಸಿಪಿಗಳು.
ಬಸಳೆ ಚಿಗುರು ತಂಬುಳಿ
ಬೇಕಾಗುವ ಸಾಮಗ್ರಿ: ಒಂದು ಹಿಡಿ ಬಸಳೆ ಚಿಗುರು, ಜೀರಿಗೆ- 1 ಚಮಚ, ಸಣ್ಣ ತುಂಡು ಬೆಲ್ಲ, ಮಜ್ಜಿಗೆ- 3 ಸೌಟು (ಹುಳಿ ಇದ್ದರೆ ಕಡಿಮೆ ಸಾಕು), ಉಪ್ಪು ರುಚಿಗೆ, ಚೂರು ಬೆಣ್ಣೆ, ಹಸಿ ತೆಂಗಿನತುರಿ- 1 ಕಪ್. ಒಗ್ಗರಣೆಗೆ : ಮೆಣಸು, ಸಾಸಿವೆ, ಬೆಣ್ಣೆ ಚೂರು.
ತಯಾರಿಸುವ ವಿಧಾನ: ಬಸಳೆ ಚಿಗುರನ್ನು ಜೀರಿಗೆ, ಬೆಣ್ಣೆ ಹಾಕಿ ಹುರಿಯಬೇಕು. ಸ್ವಲ್ಪ ತಣ್ಣಗಾದ ಮೇಲೆ ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಬೇಕು. ಅದಕ್ಕೆ ಬೆಲ್ಲ , ಉಪ್ಪು, ಮಜ್ಜಿಗೆ, ಬೇಕಾದಷ್ಟು ನೀರು ಹಾಕಿ ಒಗ್ಗರಣೆ ಹಾಕಿದರೆ ಬಸಳೆ ಚಿಗುರು ತಂಬುಳಿ ತಯಾರು.
ಬೇವಿನ ಸೊಪ್ಪು ತಂಬುಳಿ
ಬೇಕಾಗುವ ಸಾಮಗ್ರಿ: ಬೇವಿನಸೊಪ್ಪು- 1 ಹಿಡಿ, ಜೀರಿಗೆ- 1 ಚಮಚ, ಒಳ್ಳೆ ಮೆಣಸು- 5 ಕಾಳು, ಹಸಿ ತೆಂಗಿನತುರಿ- 2 ಕಪ್, ಮಜ್ಜಿಗೆ- 2 ಸೌಟು, ಬೆಣ್ಣೆ- 1/2 ಚಮಚ, ಒಗ್ಗರಣೆಗೆ : ಒಣಮೆಣಸು, ಸಾಸಿವೆ, ಚೂರು ತುಪ್ಪ.
ತಯಾರಿಸುವ ವಿಧಾನ: ಶುದ್ಧೀಕರಿಸಿದ ಬೇವಿನಸೊಪ್ಪನ್ನು, ಜೀರಿಗೆ ಬೆಣ್ಣೆ ಹಾಕಿ ಹುರಿದುಕೊಳ್ಳಬೇಕು. ಹುರಿದ ಬೇವಿನಸೊಪ್ಪನ್ನು ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಬೇಕು. ಬೀಸಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು ಹಾಕಿ ತಕ್ಕಷ್ಟು ನೀರು ಹಾಕಿ ಕುದಿಸಬೇಕು. ಸಣ್ಣಗೆ ಕುದಿಯುವಾಗ ಒಗ್ಗರಣೆ ಹಾಕಿದರೆ ಬೇವಿನಸೊಪ್ಪು ತಂಬುಳಿ ತಯಾರು.
ಉಪ್ಪಿನಕಾಯಿ ಮಿಡಿ ತಂಬುಳಿ
ಬೇಕಾಗುವ ಸಾಮಗ್ರಿ: ಉಪ್ಪಿನಕಾಯಿ ಮಿಡಿ- 2, ತೆಂಗಿನತುರಿ- 1 ಕಪ್, ಮಜ್ಜಿಗೆ – 2 ಸೌಟು, ಒಗ್ಗರಣೆಗೆ : ಎಣ್ಣೆ , ಮೆಣಸು, ಸಾಸಿವೆ.
ತಯಾರಿಸುವ ವಿಧಾನ: ಉಪ್ಪಿನಕಾಯಿ ಮಿಡಿಯನ್ನು ತೊಳೆದು ಹೆಚ್ಚಿನ ಖಾರ ತೆಗೆದುಬಿಡಬೇಕು. ಆಮೇಲೆ ಮಾವಿನ ಮಿಡಿಯನ್ನು ಮತ್ತು ತೆಂಗಿನತುರಿಯನ್ನು ನುಣ್ಣಗೆ ಬೀಸಬೇಕು. ಆ ಮಿಶ್ರಣವನ್ನು ಮಜ್ಜಿಗೆ, ಬೇಕಿದ್ದರೆ ಸ್ವಲ್ಪ ಉಪ್ಪು , ನೀರು ಹಾಕಿ ಕುದಿಸಬೇಕು. ಸಣ್ಣ ಕುದಿ ಬಂದಾಗ ಮೆಣಸು, ಸಾಸಿವೆ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾದ ಪರಿಮಳಯುಕ್ತ ತಂಬುಳಿ ತಯಾರು.
ಮೆಂತೆ ತಂಬುಳಿ
ಬೇಕಾಗುವ ಸಾಮಗ್ರಿ: ಮೆಂತೆ- 1 ಚಮಚ, ಸಣ್ಣ ತುಂಡು ಬೆಲ್ಲ, ಹುಳಿ ಮಜ್ಜಿಗೆ- 1 ಸೌಟು, ರುಚಿಗೆ ಉಪ್ಪು, ಚೂರು ಎಣ್ಣೆ ಅಥವಾ ಬೆಣ್ಣೆ. ತೆಂಗಿನತುರಿ- 1 ಕಪ್, ಕಾಳುಮೆಣಸು- 4 ಕಾಳು.
ತಯಾರಿಸುವ ವಿಧಾನ: ಮೆಂತೆಗೆ ಚೂರು ಎಣ್ಣೆ ಅಥವಾ ಬೆಣ್ಣೆ ಹಾಕಿ ಪಟಪಟ ಶಬ್ದ ಕೇಳುವಷ್ಟು ಹುರಿದುಕೊಳ್ಳಬೇಕು. ಹುರಿದ ಮೆಂತೆಯನ್ನು ತೆಂಗಿನತುರಿಯೊಂದಿಗೆ ಮಜ್ಜಿಗೆ ಉಪ್ಪು ಹಾಕಿ ನುಣ್ಣಗೆ ಬೀಸಬೇಕು. ಈ ಮಿಶ್ರಣಕ್ಕೆ ಬೆಲ್ಲ ತಕ್ಕಷ್ಟು ನೀರು ಸೇರಿಸಿ ಮೆಣಸು, ಸಾಸಿವೆ ಒಗ್ಗರಣೆ ಕೊಟ್ಟರೆ ಮೆಂತೆ ತಂಬುಳಿ ತಯಾರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ