ಡಿಕೆಶಿ ಸುತ್ತ ಇರುವವರು ರೌಡಿ,ರೌಡಿಶೀಟರ್ಗಳು: ಶ್ರೀರಾಮುಲು
Team Udayavani, Dec 4, 2022, 9:15 PM IST
ಬಳ್ಳಾರಿ: ಬಿಜೆಪಿಯನ್ನು ರೌಡಿ ಸಂಸ್ಕೃತಿಗೆ ಹೋಲಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯನವರೇ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುತ್ತಮುತ್ತಲು ಇರುವವರನ್ನು ನೋಡಿ ಮಾತನಾಡಿ. ಬೆಂಕಿ ಹಚ್ಚುವ, ರೌಡಿ ಸಂಸ್ಕೃತಿ ಕಾಂಗ್ರೆಸ್ನದ್ದು ಎಂದು ಸಚಿವ ಬಿ. ಶ್ರೀರಾಮುಲು ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಿಜೆಪಿಯನ್ನು ರೌಡಿ ಸಂಸ್ಕೃತಿಗೆ ಹೋಲಿಸಿದ್ದಾರೆ. ರೌಡಿ ಸಂಸ್ಕೃತಿ ಇರುವುದು ಕಾಂಗ್ರೆಸ್ ಪಕ್ಷದಲ್ಲಿ. ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದ್ದು ಯಾರು? ಸಂಪತ್ ಕುಮಾರ್ ಅವರು ಬೆಂಕಿ ಹಚ್ಚಲಿಲ್ಲವೇ? ಬೆಂಕಿ ಹಚ್ಚುವ ಮತ್ತು ರೌಡಿ ಸಂಸ್ಕೃತಿ ಕಾಂಗ್ರೆಸ್ನದ್ದು. ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುತ್ತಮುತ್ತಲೂ ಇರುವವರನ್ನು ನೋಡಿ ಮಾತನಾಡಲಿ. ಏಕೆಂದರೆ ಅವರ ಸುತ್ತಮುತ್ತಲೂ ಇರುವವರು ರೌಡಿಗಳು, ರೌಡಿ ಶೀಟರ್ಗಳು ಎಂದು ಹೇಳಿದರು.
ಕಾಂಗ್ರೆಸ್ನ ಕುತಂತ್ರ ರಾಜಕಾರಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಜನಾರ್ದನ ರೆಡ್ಡಿ ಬಲಿಪಶುವಾಗಿ ಜೈಲುಪಾಲಾದರು. ಜನಾರ್ದನ ರೆಡ್ಡಿಯವರ ಅಕ್ರಮ ಎಲ್ಲಿಯೂ ಸಾಬೀತು ಆಗಿಲ್ಲ. ಎಲ್ಲ ಆರೋಪಗಳಿಂದ ದೋಷ ಮುಕ್ತ ಆಗಲಿದ್ದಾರೆ. ಗುಜರಾತ್ನಲ್ಲಿ ಡಿ.5ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ನಾಲ್ಕೈದು ದಿನಗಳಲ್ಲಿ ಫಲಿತಾಂಶ ಹೊರಬರಲಿದೆ. ಬಿಜೆಪಿ ಗೆಲ್ಲುವ ಕುದುರೆಯಾಗಿದ್ದು, ಫಲಿತಾಂಶದಿಂದ ರಾಜಕೀಯ ಪಕ್ಷಗಳು ಬುಡಮೇಲು ಅಗುತ್ತದೆ. ಗುಜರಾತ್ ಫಲಿತಾಂಶ ರಾಜ್ಯದ ಮುಂದಿನ ಚುನಾವಣೆಯ ದಿಕ್ಸೂಚಿಯಾಗಲಿದೆ. ರಾಜ್ಯದಲ್ಲಿ ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.