ಅನರ್ಹ ಶಾಸಕರಿಗೆ ತಾತ್ಕಾಲಿಕ ನಿರಾಳ; 15 ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆ
Team Udayavani, Sep 26, 2019, 4:04 PM IST
ನವದೆಹಲಿ: ಸ್ಪೀಕರ್ ಅವರು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್, ಜೆಡಿಎಸ್ ನ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ನ್ಯಾ.ಎನ್ .ವಿ ರಮಣ್ ನೇತೃತ್ವದ ತ್ರಿಸದಸ್ಯ ಪೀಠ, 15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿ ಆದೇಶ ನೀಡಿದೆ.
ಕರ್ನಾಟಕದ 15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿರುವ ಸುಪ್ರೀಂಕೋರ್ಟ್, ಅಕ್ಟೋಬರ್ 22ರ ನಂತರ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಬುಧವಾರ ಅನರ್ಹ ಶಾಸಕರ ಅರ್ಜಿಯ ವಿಚಾರಣೆ ನಡೆದಿತ್ತು. ಅನರ್ಹ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಸ್ಪೀಕರ್ ಕಚೇರಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅನರ್ಹ ಶಾಸಕರ ಡಾ.ಸುಧಾಕರ್ ಪರ ವಕೀಲ ಸುಂದರಂ ವಾದ ಮಂಡಿಸಿದ್ದರು.
ಗುರುವಾರ ಮತ್ತೆ ಮುಂದುವರಿದ ವಿಚಾರಣೆಯಲ್ಲಿ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.
ಉಪಚುನಾವಣೆಗೆ ಸ್ಪರ್ಧಿಸಿದರೆ ಅನರ್ಹತೆಗೆ ಅರ್ಥ ಏನು? ಸಿಬಲ್
ಶಾಸಕರನ್ನು ಅನರ್ಹಗೊಳಿಸಿರುವುದು ವಿಧಾನಸಭೆ ಅವಧಿಯವರೆಗೆ, ಉಪಚುನಾವಣೆಗೆ ಸ್ಪರ್ಧಿಸಿದರೆ ಅನರ್ಹತೆಯ ಅಗತ್ಯವೇನಿದೆ? ಅನರ್ಹಗೊಳಿಸುವಾಗ ಅವಧಿ ನಿಗದಿಪಡಿಸುವ ಅಧಿಕಾರ ಸ್ಪೀಕರ್ ಗೆ ಇದೆ. ಅನರ್ಹಗೊಳಿಸಿದವರ ಕ್ಷೇತ್ರಕ್ಕೆ ಆರು ತಿಂಗಳೊಳಗೆ ಚುನಾವಣೆ ನಡೆಯಲೇಬೇಕಲ್ಲಾ? ಆಗ ಸ್ಪರ್ಧಿಸಿದರೆ ತೊಂದರೆ ಏನಿದೆ? ಸ್ಪೀಕರ್ ಕಚೇರಿ ಸಂವಿಧಾನದತ್ತವಾದ ಸ್ವಾಯತ್ತ ಸಂಸ್ಥೆ. ಅನರ್ಹತೆಗೂ ಒಂದು ಅರ್ಥ ಬೇಕಲ್ಲಾ ಎಂದು ಕೆಪಿಸಿಸಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.
ಸ್ಪೀಕರ್ ಆದೇಶವನ್ನು ಚುನಾವಣಾ ಆಯೋಗದ ಅಧಿಸೂಚನೆ ನಿರ್ಜೀವಗೊಳಿಸಿದರೆ. ಆಗ 10ನೇ ಶೆಡ್ಯೂಲ್ ದುರ್ಬಲವಾಗಲಿದೆ. ಈ ಪ್ರಕರಣದ ತೀರ್ಪಿನಿಂದ ಬಹಳಷ್ಟು ಪ್ರಕರಣಗಳಿಗೆ ಉದಾಹರಣೆಯಾಗಲಿದೆ. ಉಮೇಶ್ ಜಾಧವ್ ರಾಜೀನಾಮೆ ಸ್ವೀಕರಿಸಿ, ಉಳಿದವರನ್ನು ಅನರ್ಹಗೊಳಿಸಿದ್ದಾರೆ ಎಂದು ವಾದಿಸಿದ್ದಾರೆ. ಆದರೆ ಜಾಧವ್ ಖುದ್ದು ಸ್ಪೀಕರ್ ಗೆ ರಾಜೀನಾಮೆ ನೀಡಿ ವಿವರಣೆ ಕೊಟ್ಟಿದ್ದಾರೆ ಎಂದು ಸಿಬಲ್ ವಾದಿಸಿದರು.