ಭಾರತದ ಮುಂದೆ ಟಿ20 ವಿಶ್ವಕಪ್ ಆತಿಥ್ಯದ ಸವಾಲು : ಇಂದು ಐಸಿಸಿ ಮಂಡಳಿ ಸಭೆ
Team Udayavani, Jun 1, 2021, 7:00 AM IST
ದುಬಾೖ: ಬಿಸಿಸಿಐ ಪಾಲಿಗೆ ಮಹತ್ವದ್ದೆನಿಸಿದ ಐಸಿಸಿ ಸಭೆ ಮಂಗಳವಾರ ನಡೆಯಲಿದೆ. ವರ್ಷಾಂತ್ಯ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಆತಿಥ್ಯಕ್ಕೆ ಸಂಬಂಧಿಸಿದ ಮುಖ್ಯ ಸಂಗತಿಯೊಂದು ಇಲ್ಲಿ ಇತ್ಯರ್ಥವಾಗಬೇಕಿದೆ. ಇದನ್ನು ತನ್ನಿಂದ ನಡೆಸಲು ಸಾಧ್ಯವೋ, ಇಲ್ಲವೋ ಎಂಬ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಬಿಸಿಸಿಐ ಒಂದು ತಿಂಗಳ ಹೆಚ್ಚುವರಿ ಸಮಯವನ್ನು ಐಸಿಸಿ ಬಳಿ ಕೇಳಲಿದೆ.
ಆರಂಭದಲ್ಲಿ ಈ ಸಭೆಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬಾೖಗೆ ತೆರ ಳುವ ಕಾರ್ಯಕ್ರಮವಿತ್ತು. ಆದರೆ ಈ ಸಭೆಯೀಗ ವರ್ಚುವಲ್ ಆಗಿ ನಡೆಯಲಿದೆ. ಆದರೆ ಗಂಗೂಲಿ ಬುಧವಾರ ಯುಎಇಗೆ ತೆರಳ ಲಿದ್ದಾರೆ. ಯುಎಇ ಆತಿಥ್ಯದಲ್ಲಿ ಐಪಿಎಲ್ನ ಉಳಿದ ಪಂದ್ಯಗಳನ್ನು ನಡೆಸುವ ಕುರಿತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸುವುದು ಇದರ ಉದ್ದೇಶವಾಗಿದೆ.
ಕೋವಿಡ್ ಅಲೆಯ ಭೀತಿ
ಭಾರತದಲ್ಲಿ ಕೋವಿಡ್ ಎರಡನೇ ಅಲೆ ಎದ್ದಿರುವುದರಿಂದ ವಿಶ್ವಕಪ್ ಕ್ರಿಕೆಟ್ನಂಥ ಮಹತ್ವದ ಪಂದ್ಯಾವಳಿಯನ್ನು ಆಯೋಜಿ ಸುವುದು ಭಾರೀ ಸವಾಲಾಗಿ ಪರಿಣಮಿಸಿದೆ. ವರ್ಷಾಂತ್ಯದಲ್ಲಿ ಈ ಸೋಂಕಿನ ತೀವ್ರತೆ ಕಡಿಮೆ ಆಗುವ ಸಾಧ್ಯತೆ ಇದೆಯಾದರೂ ವಿಶ್ವಕಪ್ ಆಯೋಜನೆ ಸಾಧ್ಯವೇ ಎಂದು ಈಗಲೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೇ ಇದಕ್ಕೆ ಕೇಂದ್ರ ಸರಕಾರದ ಅನುಮತಿಯೂ ಬೇಕಾಗುತ್ತದೆ. ಹೀಗಾಗಿ ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಐಸಿಸಿ ಬಳಿ ಒಂದು ತಿಂಗಳ ಹೆಚ್ಚುವರಿ ಅವಧಿಯನ್ನು ಕೇಳಲು ಬಿಸಿಸಿಐ ನಿರ್ಧರಿಸಿದೆ. ಅಧ್ಯಕ್ಷ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಈ ಪ್ರಸ್ತಾವವನ್ನು ಐಸಿಸಿ ಮುಂದಿಡಲಿದ್ದಾರೆ.