ಎಸ್ಎಸ್ಎಲ್ ಸಿ ಸಾಧಕರು: ದೂರದರ್ಶನದ ಆನ್ಲೈನ್ ಪಾಠ ಕೇಳುತ್ತಿದ್ದ ತನ್ಮಯಿ ರಾಜ್ಯಕ್ಕೆ ಪ್ರಥಮ
Team Udayavani, Aug 10, 2020, 4:52 PM IST
ಚಿಕ್ಕಮಗಳೂರು: ಕಾಫಿನಾಡಿನ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ತನ್ಮಯಿ ಪಿ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಚಿಕ್ಕಮಗಳೂರಿನ ನಗರದ ಸೈಂಟ್ ಜೋಸೆಫ್ ಬಾಲಕಿಯರ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಅವರು ನಗರದ ಇಂದಾವರ ನಿವಾಸಿ ವಸ್ತಾರೆ ಉಪತಹಶೀಲ್ದಾರ ಐ.ಎಸ್. ಪ್ರಸನ್ನ ಮತ್ತು ಸರಕಾರಿ ಶಾಲಾ ಶಿಕ್ಷಕಿ ಡಿ.ಎಲ್ ಸಂಧ್ಯಾ ದಂಪತಿಯ ಪುತ್ರಿಯಾಗಿದ್ದಾರೆ.
ಉದಯವಾಣಿ ಜೊತೆ ಮಾತನಾಡಿದ ಅವರು, ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಬಂದಿದ್ದು ನನಗೆ ತುಂಬಾ ಖುಷಿಯಾಗಿದೆ. ದಿನಕ್ಕೆ 2ಗಂಟೆ ಓದುತ್ತಿದ್ದೆ. ಪರೀಕ್ಷೆ ಸಮಯದಲ್ಲಿ ಇನ್ನೂ ಹೆಚ್ಚಿನ ಕಾಲ ಓದುತ್ತಿದ್ದೆ ಎಂದಿದ್ದಾರೆ.
ಕಷ್ಟಪಟ್ಟು ಓದಿದಕ್ಕೆ ಸಾರ್ಥಕವಾಯ್ತು. ನಾನು ಯಾವುದೇ ಟ್ಯೂಷನ್ ಪಡೆದುಕೊಂಡಿಲ್ಲ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಆನ್ಲೈನ್ ಪಾಠ ಕೇಳುತ್ತಿದ್ದೆ. ಮರೆತ ವಿಷಯಗಳು ಜ್ಞಾಪಕಕ್ಕೆ ಬರುತ್ತಿತ್ತು. ಇದರಿಂದ ಬಹಳ ಉಪಯೋಗವಾಯ್ತು ಎಂದು ತನ್ಮಯಿ ಹೇಳಿದ್ದಾರೆ.